ಹೊಳಲ್ಕೆರೆ | ಅಮ್ಮ-ಮಗಳ ಸಾವು : ಮನಕಲುಕುವ ಘಟನೆ..!

1 Min Read

ಸುದ್ದಿಒನ್, ಹೊಳಲ್ಕೆರೆ, ನವೆಂಬರ್. 20: ಕೋಟೆನಾಡಿನಲ್ಲಿಯೇ ಮನೆಯೊಂದರಲ್ಲಿ ಐದು ಶವಗಳು ಅಸ್ಥಿಪಂಜರವಾಗಿ ಸಿಕ್ಕ ಘಟನೆ ಇನ್ನು ಕಣ್ಣ ಮುಂದೆ ಹಾಗೇ ಇದೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಿರ್ದೇಶಕ ಗುರುಪ್ರಸಾದ್ ಅವರ ದೇಹ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ್ದು ಕಣ್ಣ ಮುಂದೆ ಇದೆ. ಇದೀಗ ಅಮ್ಮ ಮಗಳ ಶವ ಕೊಳೆತು ವಾಸನೆ ಬಂದ ಮೇಲೆ ಪತ್ತೆಯಾಗಿರುವುದು ದುರದೃಷ್ಟ‌. ಆ ಅಮ್ಮ, ಮಗಳ ಫೋಟೋ ನೋಡಿದರೆ ಎಂಥವರಿಗೂ ಕರುಳು ಚುರ್ ಎನ್ನುತ್ತದೆ. ಆದರೆ ಸಾಕಿ ಸಲಹುವ ಜವಾವ್ದಾರಿ ಹೊತ್ತಿದ್ದ ಅಪ್ಪನ ಸಾವು, ಅಮ್ಮ ಮಗಳ ಬದುಕನ್ನೇ ಕಸಿದುಕೊಂಡಿದೆ.

ತಾಲೂಕಿನ ಚಿಕ್ಕಂದವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿಯೇ ವಾಸವಿದ್ದ 52 ವರ್ಷದ ಪುಷ್ಪ ಹಾಗೂ 16 ವರ್ಷದ ಮಗಳು ಲಾವಣ್ಯ ಸಾವನ್ನಪ್ಪಿರುವ ದುರ್ದೈವಿಗಳು. ಇಬ್ಬರು ಮೃತ ಪಟ್ಟು ಒಂದು ವಾರಗಳ ಮೇಲಾಗಿದೆ. ಹೀಗಾಗಿಯೇ ಮೃತದೇಹ ಕೊಳೆತು, ವಾಸನೆ ಬರುವುದಕ್ಕೆ ಶುರುವಾಗಿದೆ. ವಾಸನೆ ಅಕ್ಕಪಕ್ಕದವರಿಗೂ ಬಡಿದ ಮೇಲೆ ಘಟನೆ ಬೆಳಕಿಗೆ ಬಂದಿದೆ.

ವಾಸನೆ ಜೋರಾಗುತ್ತಿದ್ದಂತೆ ಅಕ್ಕಪಕ್ಕದವರು ಸೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಹೊಡೆದ ಮೇಲೆ ಇಬ್ಬರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಪುಷ್ಪ ಅವರ ಪತಿ ಬಸವರಾಜಪ್ಪ ಕಳೆದ 3 ತಿಂಗಳ ಹಿಂದಷ್ಟೇ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇಡೀ ಮನೆಯ ಜವಾಬ್ದಾರಿಯನ್ನು ಬಸವರಾಜಪ್ಪ ಅವರೇ ನಿಭಾಯಿಸುತ್ತಿದ್ದರಂತೆ. ಬಸವರಾಜಪ್ಪ ಸಾವಿನಿಂದ ಪುಷ್ಟ ಹಾಗೂ ಮಗಳು ಲಾವಣ್ಯ ಇಬ್ಬರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದೇ ನೋವಿನಲ್ಲಿ ಪ್ರಾಣ ಬಿಟ್ಟಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ. ಸದ್ಯ ಪ್ರಕರಣವನ್ನು ಚಿಕ್ಕಜಾಜೂರು ಪೊಲೀಸರು ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *