ಸುದ್ದಿಒನ್, ಹಿರಿಯೂರು, ಆಗಸ್ಟ್. 06 : ನಗರದಲ್ಲಿ ಮಂಗಳವಾರ ರಾತ್ರಿ ಸುರಿದ ಆಶ್ಲೇಷ ಮಳೆಗೆ ಇಲ್ಲಿನ ಸಿಎಂ ಬಡಾವಣೆಯ ಜನಜೀವನ ಅಸ್ತವ್ಯಸ್ತ ಗೊಂಡಿತ್ತು.
ತಗ್ಗು ಪ್ರದೇಶದಲ್ಲಿ ಮಳೆಯಿಂದ ಧಾರಾಕಾರವಾಗಿ ನೀರು ಹರಿಯಿತಲ್ಲದೇ, ನಾಲ್ಕೈದು ಮನೆಗಳಿಗೆ ನೀರು ನುಗ್ಗಿ ಕೆಲಕಾಲ ಆತಂಕ ಸೃಷ್ಟಿಸಿತ್ತು. ಕೂಡಲೇ ಸ್ಥಳಕ್ಕಾಗಮಿಸಿದ ನಗರಸಭೆ ಪೌರಾಯುಕ್ತರು, ಅಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರುಗಳು ಹಾಗೂ ಸದಸ್ಯರು ಸ್ಥಳ ಪರಿಶೀಲನೆ ನಡೆಸಿ ತಕ್ಷಣವೇ ಜೆಸಿಬಿ ಮೂಲಕ ನೀರು ಸರಾಗವಾಗಿ ಹರಿದು ಹೋಗಲು ಕ್ರಮಕೈಗೊಂಡರು.
ಈ ಕುರಿತು ದೂರವಾಣಿ ಮೂಲಕ ಪೌರಾಯುಕ್ತ ಎ ವಾಸೀಂ ಮಾತನಾಡಿ ನಗರದ ಸಿಎಂ ಬಡಾವಣೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಜೋರು ಮಳೆ ಬಂದ ಹಿನ್ನೆಲೆಯಲ್ಲಿ ಹೆಚ್ಚು ನೀರು ಬಂದಿದೆ. ನಾಲ್ಕೈದು ಮನೆಗಳಿಗೆ ನೀರು ನುಗ್ಗಿದೆ. ತಕ್ಷಣ ನಾವು ಕಾರ್ಯಪ್ರವೃತ್ತವಾಗಿ ಜೆಸಿಬಿ ಮೂಲಕ ನೀರು ಹೊಗಲು ಅನುವು ಮಾಡಿಕೊಡಲಾಯಿತು. ಕಳೆದ ಎರಡು ದಿನಗಳಿಂದ ಬಡಾವಣೆಯಲ್ಲಿ ಜೆಸಿಬಿ ಕೆಲಸ ಮಾಡುತ್ತಿದ್ದರಿಂದ ಯಾವುದೇ ಸಮಸ್ಯೆಯಾಗಿಲ್ಲ. ಮಂಗಳವಾರ ರಾತ್ರಿ, ನಾವು ಅಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರುಗಳು ಹಾಗೂ ಸದಸ್ಯರು ಮುಂದೆ ನಿಂತು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ದೂರವಾಣಿ ಮೂಲಕ ಮಾಹಿತಿ ಪಡೆದುಕೊಂಡಿದ್ದಾರೆ. ಯಾವುದೇ ಹಾನಿಯಾಗಿಲ್ಲ. ಮುಖ್ಯ ರಸ್ತೆ ಕೂಡ ನಾಲ್ಕೈದು ದಿನಗಳಿಂದ ಸ್ವಚ್ಛಗೊಳಿಸಲಾಗುತ್ತಿದೆ. ಎಲ್ಲೂ ನೀರು ನಿಲ್ಲದಂತೆ ಜಾಗ್ರತೆ ವಹಿಸಲಾಗಿದೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಆರ್. ಬಾಲಕೃಷ್ಣ ಅವರು ಮಾತನಾಡಿ,
ಸಿಎಂ ಬಡಾವಣೆಯಲ್ಲಿ ನೀರು ನುಗ್ಗಿದ ತಕ್ಷಣ ಮಾಹಿತಿ ತಿಳಿದು ಸದಸ್ಯರು ಹಾಗೂ ನಗರಸಭೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಮಧ್ಯ ರಾತ್ರಿವರೆಗೂ ಮುಂದೆ ನಿಂತು ಜೆಸಿಬಿ ಮೂಲಕ ನೀರು ಹೊರ ಹೋಗುವಂತೆ ಮಾಡಲಾಗಿದೆ. ಯಾವುದೇ ತರಹದ ಹಾನಿಯಾಗಿಲ್ಲ. ಈಗಾಗಲೇ ಪೌರಕಾರ್ಮಿಕರು ನಗರದ ಎಲ್ಲಾ ಚರಂಡಿಗಳು ಸ್ವಚ್ಛಗೊಳಿಸುತ್ತಿದ್ದು, ನೀರು ನಿಲ್ಲದಂತೆ ಕ್ರಮವಹಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಎಂಡಿ ಸಣ್ಣಪ್ಪ, ರತ್ನಮ್ಮ, ಸದಸ್ಯರಾದ ಶಿವರಂಜನಿ ಯಾದವ್, ಈರಲೀಂಗೌಡ, ನಗರಸಭೆ ಆರೋಗ್ಯ ನಿರೀಕ್ಷಕರಾದ ಸುನೀಲ್, ಸಂಧ್ಯಾ ಇತರರಿದ್ದರು.


