ಹಿರಿಯೂರು | ಅಕ್ರಮ ಸಂಬಂಧ ಹಿನ್ನೆಲೆ ಪ್ರಿಯಕರನ ಜೊತೆ ಸೇರಿ ಪತ್ನಿಯಿಂದ ಗಂಡನ  ಕೊಲೆ

1 Min Read

 

ಸುದ್ದಿಒನ್, ಹಿರಿಯೂರು, ಜುಲೈ. 13 : ತಾಲ್ಲೂಕಿನ ಹುಲಗಲಕುಂಟೆ ಗ್ರಾಮದಲ್ಲಿ ಪ್ರಿಯಕರನ ಜೊತೆ ಸೇರಿಕೊಂಡು ಪತ್ನಿಯು, ಪತಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ.

ಮೃತ ವ್ಯಕ್ತಿಯನ್ನು ರವಿ (35) ವರ್ಷ ಎಂದು ಗುರುತಿಸಲಾಗಿದೆ. ಮೃತ ರವಿಯು 16 ವರ್ಷಗಳ ಹಿಂದೆ ರೇಖಾ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದನು. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು, ದಂಪತಿಗಳು ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದರು.

ರವಿಯ ಸ್ನೇಹಿತ ಹುಲಗಲಕುಂಟೆ ಗ್ರಾಮದ ಸುನೀಲ್ ರವಿಯ ಮನೆಗೆ ಆಗಾಗ ಹೋಗಿ ರವಿ ಪತ್ನಿಯ ಸ್ನೇಹ ಬೆಳೆಸಿಕೊಂಡು ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದ ಎನ್ನಲಾಗಿದೆ. ಇದು ಮೃತ ರವಿಗೆ ತಿಳಿದು ಸುನೀಲ್ ನೊಂದಿಗೆ ಜಗಳ ಮಾಡಿಕೊಂಡಿದ್ದನು. ಪ್ರಿಯಕರನ ಜೊತೆ ಸಂಬಂಧ ಮುಂದುವರಿಸಿದ ರೇಖಾ ಪತಿಯು ನನಗೆ ತೊಂದರೆ ನೀಡುತ್ತಾನೆಂದು ಪೊಲೀಸರಿಗೆ ಈಗಾಗಲೇ ಮೂರು ಬಾರಿ ದೂರು ನೀಡಿದ್ದಳು. ಬಳಿಕ ಪೊಲೀಸರು ರವಿಯನ್ನು ಕರೆಸಿಕೊಂಡು ಬುದ್ಧಿ ಹೇಳಿ ಕಳುಹಿಸಿದ್ದರು. ಇತ್ತ ಮೃತನ ಪತ್ನಿ ರೇಖಾ, ಪ್ರಿಯಕರ ಸುನೀಲ್ ಹಾಗೂ ಪರುವ ಎಂಬುವ ಮೂವರು ರವಿಗೆ ಈ ಹಿಂದೆಯೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರಲಾಗಿದೆ.

ದಿನಾಂಕ 10/07/2024 ರಂದು ಜಮೀನಿನ ವಿಚಾರ ಮಾತನಾಡಲು ಬೆಂಗಳೂರಿನಿಂದ ರವಿ ಊರಿಗೆ ಬಂದಿದ್ದು ರಾತ್ರಿ 9 ಗಂಟೆಗೆ ಊಟ ಮುಗಿಸಿ ಹೊಸ ಮನೆಯ ಮೇಲೆ ಮಲಗುತ್ತೇನೆ ಎಂದು ಹೋಗಿದ್ದಾನೆ. ರಾತ್ರಿ ಹತ್ತರವರೆಗೂ ಫೋನಿನಲ್ಲಿ ಮಾತಾಡುತ್ತಿದ್ದ ಎನ್ನಲಾಗಿದ್ದು ಆನಂತರ ಆತನ ಪತ್ನಿ ರೇಖಾ, ಪರುವ  ಹಾಗೂ ಸುನೀಲ್ ನಿಗೆ ಹೇಳಿ ಕೊಲೆ ಮಾಡಿಸಿದ್ದಾರೆ ಎಂದು ಮೃತನ ತಾಯಿ ಪಾರ್ವತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಕೊಲೆ ಆರೋಪಿಗಳಾದ  ಸುನೀಲ್ ಮತ್ತು ರೇಖಾರನ್ನು ಸಿಪಿಐ ಕಾಳಿಕೃಷ್ಣ ನೇತೃತ್ವದಲ್ಲಿ ಪಿಎಸ್ಐ ಮಹೇಶ್ ಗೌಡ ತಂಡ ಬಂಧಿಸಿದ್ದು ಮತ್ತೊಬ್ಬ ಆರೋಪಿಗೆ ಬಲೆ ಬೀಸಲಾಗಿದೆ. ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Share This Article
Leave a Comment

Leave a Reply

Your email address will not be published. Required fields are marked *