ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ಪವಿತ್ರಾ ಗೌಡ ಜೈಲೂಟ ತಿಂದು ತಿಂದು ಬೇಸತ್ತು, ಮನೆ ಊಟಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಹೈಕೋರ್ಟ್ ನಲ್ಲಿ ಹಿನ್ನಡೆಯಾಗಿದೆ. ವಿಶೇಷ ಅನುಮತಿಯೊಂದಿಗೆ ಜೈಲಿಗೆ ಮನೆಯಿಂದಾನೇ ಪವಿತ್ರಾ ಗೌಡ, ನಾಗರಾಜ್ ಮತ್ತು ಲಕ್ಷ್ಮಣ್ ಊಟ ತರಿಸಿಕೊಳ್ಳುತ್ತಿದ್ದರು. ಹೈಕೋರ್ಟ್ ಇದಕ್ಕೆ ಬ್ರೇಕ್ ಹಾಕಿದ್ದು, ಇನ್ಮುಂದೆ ಜೈಲೂಟವನ್ನೇ ತಿನ್ನಬೇಕಿದೆ.
ಪವಿತ್ರಾ ಗೌಡ ಜೈಲಿಂದ ಹೊರ ಬರುವುದಕ್ಕೆ ನಾನಾ ಕಾರಣಗಳನ್ನ ಹುಡುಕುತ್ತಿದ್ದಾರೆ. ಜಾಮೀನು ಅರ್ಜಿ ಹಲವು ಬಾರಿ ರಿಜೆಕ್ಟ್ ಆಗಿದೆ. ಜಾಮೀನಾದ್ರು ಸಿಕ್ಕಿಲ್ಲ ಅಂತ ಮನೆ ಊಟಕ್ಕೆ ಅರ್ಜಿ ಹಾಕಿಕೊಂಡು, 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ವಾರಕ್ಕೊಮ್ಮೆ ಹಾಗೂ ವೈದ್ಯಕೀಯ ಕಾರಣಗಳು ಇದ್ದಲ್ಲಿ ಮನೆ ಊಟ ತರಿಸಿಕೊಳ್ಳಬಹುದು ಎಂಬುದನ್ನ ಹೇಳಿತ್ತು. ಅದಕ್ಕೆ ತಕ್ಕಂತೆ ಆರೋಪಿಗಳು ಊಟವನ್ನು ತರಿಸಿಕೊಳ್ಳುತ್ತಿದ್ದರು.
ಆದರೆ ಈ ವಿಶೇಷ ಸೇವೆಯನ್ನು ಪ್ರಶ್ನಿಸಿ ಪೊಲೀಸರು ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು. ಹೈಕೋರ್ಟ್ ನಲ್ಲಿ ವಿಚಾರಣೆ ನಡೆದು ಆದೇಶವನ್ನು ರದ್ದುಪಡಿಸಿದೆ. ಆರೋಪಿ ಕೇಳಿದ ಕೂಡಲೇ ಮನೆ ಊಟ ಕೊಡುವುದಕ್ಕೆ ಆಗಲ್ಲ. ವೈದ್ಯಕೀಯ ಸಲಹೆ ಇದ್ದರೆ ಮಾತ್ರ ಮನೆ ಊಟಕ್ಕೆ ಅವಕಾಶವಿದೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ತಿಳಿಸಿದೆ. ಈ ಮೂಲಕ ಮನೆ ಊಟ ಆರೋಪಿಗಳ ಪಾಲಿಗೆ ಇನ್ಮುಂದೆ ಸಿಗುವುದಿಲ್ಲ. ಜೈಲಿನಲ್ಲಿ ಎಫ್ಎಸ್ಎಸ್ಎಐ ಸೂಚನೆಯಂತೆಯೇ ಫೋರ್ ಸ್ಟಾರ್ ಆಹಾರವನ್ನೇ ಎಲ್ಲಾ ಕೈದಿಗಳಿಗೂ ನೀಡಲಾಗುತ್ತಿದೆ. ಅದೇ ಊಟವನ್ನು ಈಗ ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳಿಗೂ ನೀಡುತ್ತಾರೆ.






