ಬೆಂಗಳೂರು: ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ವಿಮಾನ ದುರಂತದಲ್ಲಿ ನಿಧನರಾಗಿದ್ದಾರೆ. ಅವರ ನಿಧನಕ್ಕೆ ರಾಜ್ಯ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಮಾತನ್ನಾಡಿ, ಅಜಿತ್ ಪವಾರ್ ಅವರ ನಿಧನ ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ಇಂದು ಬೆಳಗ್ಗೆ ಬಾರಾಮತಿಗೆ ಹೋಗುವಂತಹ ಸಂದರ್ಭದಲ್ಲಿ ನಿಧನರಾಗಿದ್ದಾರೆ. ಮಹಾರಾಷ್ಟ್ರದ ಅತ್ಯುತ್ತಮ ಪ್ರಭಾವಿ ರಾಜಕಾರಣಿಯಾಗಿದ್ದವರು. ಸಹಕಾರಿ ಕ್ಷೇತ್ರ ಹಾಗೂ ಕೃಷಿ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದ್ದರು. ಅವರ ನಿಧನ ಎಲ್ಲರಿಗೂ ದುಃಖ ತಂದಿದೆ ಎಂದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಅಜಿತ್ ಪವಾರ್ ಅವರು ವಿಮಾನ ದುರಂತದಲ್ಲಿ ಅಪಘಾತ ಹೊಂದಿರುವುದು ಬಹಳ ಆಘಾತಕಾರಿಯಾದಂತ ಸುದ್ದಿ. ಈ ನೋವನ್ನ ತಡೆಯುವಂತ ಶಕ್ತಿಯನ್ನ ಭಗವಂತ ದಯಪಾಲಿಸಲಿ ಎಂದು ಬೇಡಿಕೊಳ್ಳುತ್ತೇನೆ ಎಂದಿದ್ದಾರೆ.
ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಬೆಳಗ್ಗೆ ಬೆಳಗ್ಗೆ ಇದು ಶಾಕಿಂಗ್ ನ್ಯೂಸ್. ಹಿರಿಯ ನಾಯಕರು. ಸದಾ ಪಾಸಿಟಿವ್ ಆಗಿ ಆಲೋಚನೆ ಮಾಡ್ತಾ ಇದ್ದರು. ಪಾರ್ಟಿ ಬಿಟ್ಟು ಹೋದಾಗ ಬೇಸರ ಆಗಿತ್ತು. ರಾಜಕೀಯದ ಬೆಳವಣಿಗೆಯ ಉದ್ದೇಶದಿಂದ ಆ ರೀತಿ ಮಾಡಿದ್ದಾರೆ. ಮೊನ್ನೆ ತಾನೇ ಮುಖ್ಯಮಂತ್ರಿಗಳು ಹೇಳ್ತಾ ಇದ್ದರು, ಎಲ್ಲದಕ್ಕೂ ಸಹಕಾರ ಕೊಟ್ಟು ಕೆಲಸ ಮಾಡ್ತಾ ಇದ್ದಾರೆ ಅಂತ. ಒಳ್ಳೆ ಫಲಿತಾಂಶ ಪಡೆದು, ಡಿಸಿಎಂ ಆಗಿದ್ರು. ಆದರೆ ಇಂದು ನಮ್ಮಿಂದ ದೂರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲಿ. ಅವರು ಬೆಂಗಳೂರಿನಲ್ಲೂ ನಂಟಸ್ತ ಬೆಳೆಸಿದ್ದಾರೆ. ನಿನ್ನೆಯಷ್ಟೇ ಅವರ ಬೀಗರನ್ನ ಭೇಟಿ ಮಾಡಿದ್ದೆ. ಇವತ್ತು ದುರಂತ ನಡೆದಿದೆ ಎಂದು ಬೇಸರ ಮಾಡಿಕೊಂಡರು.









