ಬೆಂಗಳೂರು; ನಿನ್ನೆಯಿಂದ ರಾಜ್ಯದ ಹಲವೆಡೆ ಮಳೆರಾಯ ಬೆಂಬಿಡದೆ ಸುರಿಯುತ್ತಿದ್ದಾನೆ. ಬೆಳಗ್ಗೆಯೇ ಮಳೆ ಶುರುವಾಗುವ ಕಾರಣ ಕೆಲಸಕ್ಕೆ ಹೋಗುವವರು, ಹೊರಗಡೆ ಹೋಗುವವರ ಪರಿಸ್ಥಿತಿ ಕಷ್ಟಕರವಾಗಿದೆ. ಆದರೆ ಇನ್ನು ನಾಲ್ಕು ದಿನ ಇದೇ ರೀತಿ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಂದ್ರೆ ಮೇ 24ರವರೆಗೂ ಇದೇ ರೀತಿ ಮಳೆರಾಯ ದರ್ಶನ ಕೊಡಲಿದ್ದಾನೆ. ರಾಜ್ಯಾದ್ಯಂತ ಪೂರ್ವ ಮುಂಗಾರು ಮಳೆ ಚುರುಕುಗೊಂಡಿರುವ ಹಿನ್ನೆಲೆ ಬೆಳ್ಳಂಬೆಳಗ್ಗೆಯೇ ಮಳೆಯಿಂದ ಶುಭೋದಯವಾಗಿದೆ.
ಕರಾವಳಿ ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು, ಮಿಂಚಿನೊಂದಿಗೆ ಭಾರೀ ಮಳೆ ಸುರಿಯುತ್ತಿದೆ. ಮುಂದಿನ 4 ದಿನಗಳವರೆಗೂ ಜೋರು ಮಳೆಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ರಾಜ್ಯದ ವಿವಿಧ ಭಾಗಗಳಲ್ಲಿ ಜೋರಾದ ಮಳೆಯ ದಾಖಲಾಗಿದೆ. ಬೆಂಗಳೂರು ಸೇರಿ ಹಲವಾರು ಪ್ರದೇಶಗಳಲ್ಲಿ ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಕರ್ನಾಟಕ ಕರಾವಳಿ ಬಳಿ ವಾಯುಭಾರ ಕುಸಿತ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಒಳನಾಡು ಪ್ರದೇಶದ ಟ್ರಫ್ ಆಕ್ಟೀವ್ ಆಗಲಿದೆ.
ಬೆಂಗಳೂರಿನಲ್ಲಿ 23ನೇ ತಾರೀಖಿನವರೆಗೂ ಜೋರು ಮಳೆಯಾಗುವ ಎಲ್ಲಾ ಸಾಧ್ಯತೆಯೂ ಇದೆ. ಈಗಾಗಲೇ ಎರಡು ದಿನ ಸುರಿದ ಮಳೆಗೆ ಸಿಲಿಕಾನ್ ಸಿಟಿ ಕೆರೆಯಂತೆ ಆಗಿದೆ. ಹೀಗಾಗಿ ಇಂದು ಕೂಡ ಬೆಂಗಳೂರಿನಲ್ಲಿ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದು ವರುಣನ ಆರ್ಭಟ ಜೋರಾಗಿದೆ. ಈ ಭಾಗದಲ್ಲೆಲ್ಲಾ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಗೇ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬಾಗಲಕೋಡೆ, ಬೆಳಗಾವಿ, ತುಮಕೂರು ಜಿಲ್ಲೆಗಳಿಗೆ ಆರೇಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.


