ರಾಯಚೂರು: ಮಂತ್ರಾಲಯದಲ್ಲಿ ಸಂಭ್ರಮ ಮನೆ ಮಾಡಿದೆ. ಗುರು ರಾಘವೇಂದ್ರ ಸ್ವಾಮಿಗಳ 405ನೇ ಪಟ್ಟಾಭಿಷೇಕ ಮಹೋತ್ಸವ ಬಹಳ ಅದ್ದೂರಿಯಿಂದ ನಡೆಯುತ್ತಿದೆ. ಫೆಬ್ರವರಿ 18ರಿಂದ 24ರವರೆಗೆ ಅಂದ್ರೆ ಏಳು ದಿನಗಳ ಕಾಲ ಈ ಸಂಭ್ರಮ ನಡೆಯಲಿದೆ.
ಇಂದು ರಾಯರ ಪಟ್ಟಾಭಿಷೇಕ ಮಹೋತ್ಸವವನ್ನ ನೆರವೇರಿಸಲಾಗಿದೆ. ಮಠದ ಪೀಠಾಧಿಪತಿ ಸುಬುದೇಂದ್ರ ಶ್ರೀಗಳು ರಾಯರ ಮೂಲ ಪಾದುಕೆಗಳಿಗೆ ಪಟ್ಟಾಭಿಷೇಕ ನೆರವೇರಿಸಿದರು. ಬಳಿಕ ಮಠದ ಸ್ವರ್ಣ ರಥದಲ್ಲಿ ಪಾದುಕೆಗಳನ್ನಿಟ್ಟು ಅದ್ದೂರಿಯಾಗಿ ರಥೋತ್ಸವ ನೆರವೇರಿಸಲಾಯಿತು. ಪಟ್ಟಾಭಿಷೇಕ ಮಹೋತ್ಸವ ಹಿನ್ನೆಲೆ ರಾಯರ ಮೂಲ ಬೃಂದಾವನಕ್ಕೆ ಅಭಿಷೇಕ ಮಾಡಲಾಗಿದೆ. ರಾಯರ ಸಮಗ್ರ ಗ್ರಂಥಗಳ ಪಾರಾಯಣ, ಭಜನಾ ಮಂಡಳಿಗಳ ಸಾಮೂಹಿಕ ಭಜನೆ, ಪ್ರವಚನ, ರಾಯರ ಪಾದುಕೆಗಳ ಪೂಜೆ, ಮುತ್ತುರತ್ನಗಳಿಂದ ಅಭಿಷೇಕ, ಪುಷ್ಪವೃಷ್ಟಿ, ಫಲಸಮರ್ಪಣೆ, ಮಂಗಳಾರತಿ ಕಾರ್ಯಕ್ರಮಗಳು ನಡೆದಿವೆ.
ಫೆಬ್ರವರಿ 24ರಂದು ರಾಯರ 431ನೇ ಜನ್ಮದಿನವನ್ನು ವರ್ಧಂತಿ ಉತ್ಸವವಾಗಿ ಮಠದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ಏಳು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಮಾಡಲಾಗುತ್ತದೆ. ರಾಯರ ಭಕ್ತರಿಗಂತು ಖುಷಿಯಾದ ದಿನವಾಗಿದೆ. ಮಾಮೂಲಿ ದಿನಗಳಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಹೋಗುವ ಭಕ್ತರು ಇನ್ನು ವರ್ಧಂತಿ ದಿನದಲ್ಲಿ ಕೇಳಬೇಕಾ. ಈ ಸುದಿನದಲ್ಲಿ ರಾಯರ ಭಕ್ತಿಗೆ ಪಾತ್ರವಾಗಲೆಂದೆ ಕಾಯುತ್ತಿರುತ್ತಾರೆ. ಅಪಾರ ಸಂಖ್ಯೆಯಲ್ಲಿ ಭಕ್ತಗಣ ಅಲ್ಲಿ ಸೇರುತ್ತಾರೆ. ರಾಯರ ಇಡೀ ಮಠ ಹೂಗಳಿಂದ ಅಲಂಕಾರಗೊಂಡಿರುತ್ತದೆ. ಮಠದ ಸುತ್ತೆಲ್ಲಾ ಹಬ್ಬದ ವಾತಾವರಣ ಮನೆ ಮಾಡಿದೆ. ರಾಯರ ವರ್ಧಂತಿಯಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ. ಇಷ್ಟಾರ್ಥಗಳ ಈಡೇರಿಕೆಗೆ ಬೇಡಿಕೊಳ್ಳುತ್ತಾರೆ. ರಾಯರು ಕೂಡ ನಂಬಿದ ಭಕ್ತರನ್ನ ಹರಸುತ್ತಾ ಇರುತ್ತಾರೆ.




