ಮಾತಿನ ವರಸೆ ಬದಲಿಸಿದ ಗೋವಿಂದ ಕಾರಜೋಳ : ಜೆ.ಯಾದವರೆಡ್ಡಿ

2 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 03 : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದ್ವೇಷದ ರಾಜಕಾರಣಕ್ಕೆ ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ರೈತರು ಬಲಿಯಾಗುತ್ತಿದ್ದಾರೆಂದು ಸರ್ವೊದಯ ಕರ್ನಾಟಕ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಆಳುವ ಸರ್ಕಾರಗಳ ನೀತಿಯನ್ನು ಕಟುವಾಗಿ ಟೀಕಿಸಿದರು.

 

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಎರಡು ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ರೈತರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಅಮರಣಾಂತ ಉಪವಾಸ ಸತ್ಯಾಗ್ರಹದಲ್ಲಿ ಮಂಗಳವಾರ ಭಾಗವಹಿಸಿ ಮಾತನಾಡಿದರು.

 

ಯಾವುದೇ ಯೋಜನೆಯಾಗಲಿ ಕಾಲಮಿತಿಯೊಳಗೆ ಪೂರ್ಣಗೊಳ್ಳದಿದ್ದರೆ ನಿಜವಾಗಿಯೂ ಯಾರಿಗೆ ಸಿಗಬೇಕೊ ಅವರಿಗೆ ಫಲ ಸಿಗಲ್ಲ. ಇದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ತಡವಾದರೆ ಪ್ರಯೋಜನವಿಲ್ಲ. ರಾಜ್ಯ ಸರ್ಕಾರ ಕಳೆದ ಬಜೆಟ್‍ನಲ್ಲಿ ನೀರಾವರಿಗೆ 2611 ಕೋಟಿ ರೂ.ಗಳನ್ನು ಘೋಷಿಸಿತ್ತು. ಬಿಡುಗಡೆಗೊಳಿಸಿದ್ದು, ಕೇವಲ 668 ಕೋಟಿ ರೂ. ಮಾತ್ರ. ಕೇಂದ್ರ ಸರ್ಕಾರ ಘೋಷಿಸಿದ್ದ 5300 ಕೋಟಿ ರೂ.ಗಳನ್ನು ತಂದೆ ತರುತ್ತೇನೆಂದು ಭರವಸೆ ನೀಡಿದ್ದ ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಈಗ ಮಾತಿನ ವರಸೆ ಬದಲಾಯಿಸುತ್ತಿದ್ದಾರೆ. ಅವರ ಘನತೆಗೆ ಇದು ತಕ್ಕುದಲ್ಲ ಎಂದರು.

ನೆರೆಯ ಆಂಧ್ರ ಮತ್ತು ತಮಿಳುನಾಡಿನಲ್ಲಿ ಇಂತಹ ಯೋಜನೆಗಳಿಗೆ ಬಜೆಟ್‍ನಲ್ಲಿ ಶೇ.20 ರಷ್ಟು ಹಣವನ್ನು ತೆಗೆದಿಡುತ್ತಾರೆ. ನಮ್ಮ ರಾಜ್ಯ ಸರ್ಕಾರಕ್ಕೆ ಅನ್ನದಾತ ರೈತನ ಸಂಕಷ್ಟ ಏಕೆ ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದ ಜೆ.ಯಾದವರೆಡ್ಡಿ ಹೇಳೋದೊಂದು ಮಾಡೋದೊಂದು ಆದರೆ ಮುಂದಿನ ದಿನಗಳಲ್ಲಿ ರೈತರ ಹೋರಾಟ ಉಗ್ರ ಸ್ವರೂಪಕ್ಕೆ ತಿರುಗಬೇಕಾಗುತ್ತದೆಂದು ಎಚ್ಚರಿಸಿದರು.
ಸಾಮಾಜಿಕ ಹೋರಾಟಗಾರ ಆರ್.ಶೇಷಣ್ಣಕುಮಾರ್ ಮಾತನಾಡಿ ರೈತರು ಸಂಕಷ್ಟದಲ್ಲಿರುವಾಗ ಪಕ್ಷ ಬೇಧ ಮರೆತು ಎಲ್ಲಾ ರಾಜಕಾರಣಿಗಳು ಸ್ಪಂದಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ, ಜಿಲ್ಲಾಡಳಿತ ನಿರ್ಲಕ್ಷೆ ವಹಿಸುತ್ತಿರುವುದರಿಂದ ರೈತರು ಬೀದಿಗಿಳಿದು ಹೋರಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಭದ್ರಾಮೇಲ್ದಂಡೆ ಯೋಜನೆಗಾಗಿ ಕಳೆದ ಇಪ್ಪತ್ತು ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಅಂತಿಮವಾಗಿ ರೈತರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರಾಣ ತ್ಯಾಗಕ್ಕೂ ಸಿದ್ದರಿದ್ದಾರೆ. ಆಳುವ ಸರ್ಕಾರಗಳು ಇನ್ನಾದರೂ ಎಚ್ಚೆತ್ತುಕೊಂಡು ನಿಗಧಿತ ಸಮಯದೊಳಗೆ ನೀರಾವರಿ ಯೋಜನೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿದರು.

 

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಈಚಘಟ್ಟದ ಸಿದ್ದವೀರಪ್ಪ, ರೆಡ್ಡಿಹಳ್ಳಿ ವೀರಣ್ಣ, ಪ್ರಸನ್ನ, ರಂಗಸ್ವಾಮಿ, ಸಿದ್ದಮ್ಮ, ಜಯಮ್ಮ, ರತ್ನಮ್ಮ, ವೆಂಕಟೇಶ ಬೆಳಗಟ್ಟ, ನಿಂಗಪ್ಪ, ಈರಣ್ಣ, ಕರ್ನಾಟಕ ರಾಜ್ಯ ಶಾಂತಿ ಮತ್ತು ಸೌಹಾರ್ಧ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‍ಕುಮಾರ್, ಚಳ್ಳಕೆರೆ ಬಸವರಾಜ್ ಇನ್ನು ಅನೇಕರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

Share This Article
Enable Notifications OK No thanks