ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸಿದ ಸರ್ಕಾರ : ಗೊಬ್ಬರ ಪೂರೈಕೆಯಲ್ಲಿ ವಿಫಲ : ಚಿತ್ರದುರ್ಗದಲ್ಲಿ ಬಿಜೆಪಿ ಪ್ರತಿಭಟನೆ

5 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜು. 29 : ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ. ರೈತರ ಬಗ್ಗೆ ಎಳ್ಳಷ್ಟು ಸಹ ಕಾಳಜಿ ವಹಿಸುತ್ತಿಲ್ಲ, ನಮಗೆ ಅನ್ನವನ್ನು ನೀಡುವ ಅನ್ನದಾತರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ, ಸಕಾಲಕ್ಕೆ ಸರಿಯಾಗಿ ಹೊಲಕ್ಕೆ ಗೊಬ್ಬರವನ್ನು ನೀಡದಿದ್ದರೆ ರೈತ ವರ್ಷದ ಅನ್ನವನ್ನು ಕಳೆದುಕೊಳ್ಳುತ್ತಾನೆ. ಇದರ ಬಗ್ಗೆ ಸರ್ಕಾರಕ್ಕಾಗಲಿ, ನಮ್ಮನ್ನಾಳುವ ಚುನಾಯಿತ ಪ್ರತಿನಿಧಿಗಳಿಗೆ ಅರಿವಿಲ್ಲ ಎಂದು ರಾಜ್ಯ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ವಿನಯ ಕುಮಾರ್ ಆರೋಪಿಸಿದರು.

ಭಾರತೀಯ ಜನತಾ ಪಾರ್ಟಿಯ ರೈತ ಮೋರ್ಚಾದವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರಾಜ್ಯದಲ್ಲಿ ಯೂರಿಯ ಗೊಬ್ಬರ ಕೃತಕ ಅಭಾವವನ್ನು ಸೃಷ್ಟಿ ಮಾಡುವುದರ ಮೂಲಕ ಗೊಬ್ಬರಕ್ಕಾಗಿ ಅನ್ನದಾತರು ಅಲೆದಾಡುವಂತ ಪರಿಸ್ಥಿತಿಯನ್ನು ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಮಾಡಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ರೈತರ ಪರವಾಗಿ ನಿಲ್ಲುವುದರ ಮೂಲಕ ಸದನದ ಒಳಗೂ ಹೊರಗೂ ಸಹಾ ರೈತರ ಪರವಾಗಿ ಹೋರಾಟವನ್ನು ಮಾಡಲಾಗುತ್ತದೆ. ರೈತರು ಹೆದರುವ ಅಗತ್ಯ ಬೇಡ ಬಿಜೆಪಿ ನಿಮ್ಮ ಪರವಾಗಿ ಇದೆ ಎಂಬುದನ್ನು ಮರೆಯಬೇಡಿ ಎಂದರು.
ನಮ್ಮ ರಾಜ್ಯದ ಜನತೆ ನಮಗೆ ಒಳ್ಳೇಯದನ್ನು ಮಾಡಲಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ನೀಡಿದರು, ಮಳೆಯನ್ನು ನಂಬಿ ತಮ್ಮ ಬದುಕನ್ನು ನಡೆಸುವ ಅನ್ನದಾತ ಮಳೆ ಬಂದಾಗ ಭೂಮಿಯನ್ನು ಬಿತ್ತನೆ ಮಾಡಿ ಬೆಳೆಯನ್ನು ಬೆಳೆದು ಹಸಿದವರಿಗೆ ಅನ್ನವನ್ನು ನೀಡುವಂತ ಕಾರ್ಯವನ್ನು ಮಾಡುತ್ತಾನೆ ಆತ ಬೆಳೆಯನ್ನು ಬೆಳೆಯಲು ಸರ್ಕಾರ ನೆರವಾಗಬೇಕಿದೆ ಆತನಿಗೆ ಅಗತ್ಯವಾಗಿ ಬೇಕಾದ ಗೊಬ್ಬರ, ಬಿತ್ತನೆ ಬೀಜ, ಕ್ರಿಮಿನಾಶಕಗಳನ್ನು ನೀಡಬೇಕಿದೆ, ಆದರೆ ರಾಜ್ಯ ಸರ್ಕಾರ ರೈತನಿಗೆ ಸರಿಯಾದ ರೀತಿಯಲ್ಲಿ ಗೊಬ್ಬರವನ್ನು ನೀಡದೆ ರೈತ ಶಾಪಕ್ಕೆ ಗುರಿಯಾಗಿದೆ. ಆಗಸ ಸಾಕಿದ ಕತ್ತೇನೆ ತನ್ನನ್ನು ಸಾಕಿದವನಿಗೆ ನಿಯತ್ತಾಗಿ ಕೆಲಸವನ್ನು ಮಾಡುತ್ತದೆ ಆದರೆ ತಮಗೆ ಮತವನ್ನು ನೀಡಿದ ಮತದಾರರಿಗೆ ಸರಿಯಾದ ರೀತಿಯಲ್ಲಿ ಸೌಲಭ್ಯವನ್ನು ನೀಡುತ್ತಿಲ್ಲ ಎಂದು ದೂರಿದರು.

ರಾಜ್ಯ ಸರ್ಕಾರ ಮಳೆಗಾಲದಲ್ಲಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸೌಲಭ್ಯವನ್ನು ನೀಡಬೇಕಿದೆ ಆದರೆ ಇದರ ಬಗ್ಗೆ ತಲೆಕೆಡಿಸಿಕೊಳ್ಳದ ರಾಜ್ಯ ಸರ್ಕಾರ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಹಲವಾರು ಬಾರಿ ದೆಹಲಿ ಪ್ರವಾಸ ಮಾಡಿದರೂ ಸಹಾ ಒಮ್ಮೆಯೂ ಸಹಾ ರೈತರ ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಸಚಿವರಾಗಲೀ, ಅಧಿಕಾರಿಗಳ ಬಳಿಯಾಗಲಿ ಮಾತನಾಡಿಲ್ಲ ಎಂದ ಅವರು, ಕೇಂದ್ರಕ್ಕೆ ಬರೀ ಪತ್ರವನ್ನು ಬರೆಯುವುದು ಮಾತ್ರ ಆಗದೆ ನಿಜವಾದ ರೀತಿಯಲ್ಲಿ ಕೆಲಸವಾಗಬೇಕಿದೆ ಸಿದ್ದರಾಮಯ್ಯ ರವರ ಸಚಿವ ಸಂಪುಟದಲ್ಲಿ ಇರುವ ಸಚಿವರಲ್ಲಿ ಒಂದೊಂದು ರೀತಿಯಲ್ಲಿ ಹೇಳಿಕೆಯನ್ನು ನೀಡುತ್ತಿದ್ದಾರೆ, ಮುಂಗಾರಿಗೆ ಅಗತ್ಯವಾಗಿ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ಕೇಂದ್ರ ಸರ್ಕಾರ ನೀಡಿದೆ ಆದರೆ ರಾಜ್ಯ ಸರ್ಕಾರ ಪಡೆಯುವಲ್ಲಿ ವಿಫಲವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದರು.

ಯುಪಿಎ ಸರ್ಕಾರದಲ್ಲಿ ನಿಂತು ಹೋಗಿದ್ದ ಯೂರಿಯ ಗೊಬ್ಬರ ಕೈಗಾರಿಕೆಗಳನ್ನು ನಮ್ಮ ಸರ್ಕಾರದಲ್ಲಿ ಪುನಶ್ಚೇತಗೊಳಿಸಲಾಗಿದೆ ಇದರಿಂದ ದೇಶದಲ್ಲಿ ಯೂರಿಯದ ಸಮಸ್ಯೆಯನ್ನು ನಿವಾರಣೆ ಮಾಡಲು ಸರ್ಕಾರ ಮೂಂದಾಗಿದೆ. ರಾಜ್ಯ ಸರ್ಕಾರ ಕಾಳ ಸಂತೇಗಾರರೊಂದಿಗೆ ಮಾಡಿಕೊಂಡ ಒಪ್ಪಂದದಿಂದ ರಾಜ್ಯದಲ್ಲಿ ಯೂರಿಯ ಗೊಬ್ಬರದ ಅಭಾವ ತಲೆದೂರಿದೆ. ರಾಜ್ಯದಲ್ಲಿ ಇರುವಂತ ಕೈಗಾರಿಕೆಗಳಲ್ಲಿ ಧಾಳಿಯನ್ನು ಮಾಡಿಸಿದರೆ ಅಲ್ಲಿ ಸಂಗ್ರಹವಾಗಿರುವ ಗೊಬ್ಬರ ಸಿಗುತ್ತದೆ ಇದರಿಂದ ರೈತರಿಗೆ ಲಾಭವಾಗಲಿದೆ. ಸಾವಿರಾರು ವರ್ಷಗಳಿಂದ ಮನುಕುಲವನ್ನು ಉಳಿಸಿರುವುದು ರೈತ ಆತನಿಗೆ ಯಾವುದೇ ರೀತಿಯಲ್ಲಿ ತೊಂದರೆಯನ್ನು ಮಾಡಬೇಡಿ, ನಿಮ್ಮ ಭ್ರಷ್ಠಾಚಾರವನ್ನು ಬೇರೆ ಕಡೆಗಳಲ್ಲಿ ಮಾಡಿ ಆದರೆ ಅನ್ನದಾತನಿಗೆ ಮಾಡಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.

ಮುಂಗಾರು ಹಂಗಾಮಿಗೆ ರಾಜ್ಯದಿಂದ ಸುಮಾರು 6.30 ಲಕ್ಷ ಟನ್ ಗೊಬ್ಬರದ ಪ್ರಸ್ತಾವನೆ ಕಳಿಸಿದ್ದು, ಕೇಂದ್ರವು 7.70 ಲಕ್ಷ ಟನ್ ಗೊಬ್ಬರವನ್ನು ಕೊಟ್ಟಿದೆ. ಬೇಡಿಕೆಗಿಂತ ಹೆಚ್ಚು ಕೊಟ್ಟಾಗ ಹಾಹಾಕಾರ ಏಕೆ? ಕಡಿಮೆ ಹೇಗಾಗಿದೆ? ಇದನ್ನು ಆಡಳಿತ ಮಾಡುವವರು ಆಲೋಚಿಸಬೇಕಿದೆ. ಗೊಬ್ಬರದ ಕಳ್ಳ ವ್ಯಾಪಾರಿಗಳು ಕೆಲವರಿದ್ದಾರೆ. ಅವರು ಮಾರುಕಟ್ಟೆಯಲ್ಲಿ ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ, ಹೆಚ್ಚಿನ ಹಣಕ್ಕೆ ರೈತರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದರು. ಮುಂಗಾರು ಹಂಗಾಮು ಪ್ರಾರಂಭಕ್ಕೆ ಮೊದಲೇ ನಾವು ಈ ಹಂಗಾಮಿನಲ್ಲಿ ರಾಜ್ಯದಲ್ಲಿ ಎಷ್ಟು ಹೆಕ್ಟೇರ್ ಬಿತ್ತನೆ ಮಾಡುತ್ತೇವೆ? ಯಾವ್ಯಾವ ಬೆಳೆ ಬಿತ್ತನೆ ಆಗಲಿದೆ? ಡಿಎಪಿ, ಯೂರಿಯಾ ಸೇರಿ ಎಷ್ಟು ಗೊಬ್ಬರ ಬೇಕಾಗಲಿದೆ?- ಇವೆಲ್ಲ ಮಾಹಿತಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಸಭೆಯ ಮೂಲಕ ಪಡೆಯಬೇಕಿತ್ತು. ಎಂದರು.

ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ರಾಜ್ಯದ ರೈತರಿಗೆ ಸರ್ಕಾರ ಯೂರಿಯ ಗೊಬ್ಬರವನ್ನು ನೀಡುವಲ್ಲಿ ವಿಫಲವಾಗಿದೆ, ಈ ವರ್ಷ ನಮ್ಮ ಜಿಲ್ಲೆಗೆ ಉತ್ತಮವಾದ ಮಳೆಯಾಗಿದೆ. ರೈತರು ಸಹಾ ಬಿತ್ತನೆ ಮಾಡಲು ಮುಂದಾಗಿದ್ದಾರೆ. ಹವಮಾನ ಇಲಾಖೆಯೂ ಈ ಭಾರಿ ರಾಜ್ಯದಲ್ಲಿ ಉತ್ತಮವಾದ ಮಳೆಯಾ ಗಲಿದೆ ಎಂಬ ಸೂಚನೆಯನ್ನು ನೀಡಿದೆ ಆದರೂ ಸಹಾ ಸರ್ಕಾರ ಬಿತ್ತನೆಯ ಬಗ್ಗೆ ಯಾವ ಕಾಳಜಿಯನ್ನು ತೆಗೆದುಕೊಂಡಿಲ್ಲ, ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಅಧಿಕಾರಿಗಳಾಗಲೀ ಇದರ ಬಗ್ಗೆ ಕಾಳಜಿಯನ್ನು ವಹಿಸಿಲ್ಲ, ಇದುವರೆವಿಗೂ ಸಭೆಯನ್ನು ಮಾಡಿಲ್ಲ, ಬಿತ್ತನೆಯನ್ನು ಮಾಡಿದ ಹೊಲಗಳಿಗೆ ಕಾಲಕ್ಕೆ ಸರಿಯಾಗಿ ಯೂರಿಯ ಗೊಬ್ಬರವನ್ನು ನೀಡದೇ ಹೋದರೆ ಬೆಳೆ ಹಾಳಾಗುತ್ತದೆ ರೈತ ನಷ್ಠಕ್ಕೆ ಒಳಗಾಗುತ್ತಾನೆ, ಇದರ ಬಗ್ಗೆ ಸರ್ಕಾರ ಆಲೋಚನೆಯನ್ನು ಸಹಾ ಮಾಡಿಲ್ಲ ಎಂದು ದೂರಿದರು.

ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರೈತರನ್ನು ನೆಮ್ಮದಿಯಾಗಿ ಇರಲು ಬಿಡುತ್ತಿಲ್ಲ, ಒಂದಲ್ಲಾ ಒಂದು ಸಂಕಷ್ಟಕ್ಕೆ ಈಡು ಮಾಡುತ್ತಿದೆ. ಸರ್ಕಾರ ಸರಿಯಾದ ರೀತಿಯಲ್ಲಿ ಗೊಬ್ಬರವನ್ನು ನೀಡದಿದ್ದರೆ ವರ್ಷದ ಬೆಳೆ ಹಾಳಾಗುತ್ತದೆ. ಕೇಂದ್ರ ಸರ್ಕಾರ ಗೊಬ್ಬರವನ್ನು ನೀಡಿದೆ ಆದರೆ ರಾಜ್ಯ ಸರ್ಕಾರ ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರಿಗೆ ನೆರವಾಗಿ ಅವರಿಗೆ ನೀಡಿದೆ. ಬೇರೆ ಜಿಲ್ಲೆಗಳಿಗೆ ಹೊಲಿಸಿದರೆ ನಮ್ಮ ಜಿಲ್ಲೆ ವಾಣೀಜ್ಯ ಬೆಳೆಗಳಾಗದೆ ಆಹಾರದ ಬೆಳೆಗಳಾಗಿದೆ. ರೈತರ ಸಂಕಷ್ಟದಲ್ಲಿ ಯಾವುದೆ ರಾಜಕೀಯವನ್ನು ಬೆರಸದೇ ಮಾನವೀಯತೆಯಿಂದ ನೋಡುವಂತ ಕಾರ್ಯವಾಗಬೇಕಿದೆ ಎಂದರು.

ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ವೆಂಕಟೇಶ್ ಯಾದವ್ ಮಾತನಾಡಿ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ. ರೈತರ ಬಗ್ಗೆ ಎಳ್ಳಷ್ಟು ಸಹ ಕಾಳಜಿ ವಹಿಸುತ್ತಿಲ್ಲ. ತಮ್ಮ ಅಧಿಕಾರ ಕುರ್ಚಿ ಉಳಿವಿಗಾಗಿ ಸಿದ್ದರಾಮಯ್ಯ ನಿರತರಾಗಿದ್ದಾರೆ. ದೆಹಲಿಯಲ್ಲಿ ರೈತರ ಬಗ್ಗೆ ಕೇಂದ್ರ ಕೃಷಿ ಸಚಿವರನ್ನಾಗಲೀ.ಸಂಬಂಧಪಟ್ಟ ಅಧಿಕಾರಿಗಳನ್ನಾಗಲೀ ಭೇಟಿ ಮಾಡಿ ನಮ್ಮ ರಾಜ್ಯಕ್ಕೆ ಯೂರಿಯಾ ಬೇಡಿಕೆ ಬಗ್ಗೆ ಬೇಡಿಕೆಯನ್ನು ಇಟ್ಟಿಲ್ಲ.ರೈತರೆಲ್ಲರೂ ಸಹ ಬಿತ್ತನೆ ಕಾರ್ಯವನ್ನು ಪ್ರಾರಂಭ ಮಾಡಿದ್ದಾರೆ.. ಎಲ್ಲಾ ರೈತರಿಗೂ ಯೂರಿಯಾ ಗೊಬ್ಬರದ ಅವಶ್ಯಕತೆಯಿದೆ.ಇದರ ಬಗ್ಗೆ ಗಮನಹರಿಸಿದ ಸಿದ್ದರಾಮಯ್ಯರವರು ಅನ್ನದಾತರ ಬಗ್ಗೆ ಯಾವುದೇ ಗಮನ ನೀಡಿಲ್ಲ ಎಂದು ಆರೋಪಿಸಿದರು.

ನಗರದ ನೀಲಕಂಠೇಶ್ವರ ದೇವಾಲಯದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನೆಯನ್ನು ನಡೆಸಿದ್ದು, ದಾರಿಯುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗುವುದರ ಮೂಲಕ ರೈತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ರಾಜ್ಯ ರೈತ ಮೋರ್ಚಾದ ಕಾರ್ಯದರ್ಶಿಯಾದ ಮಲ್ಲಿಕಾರ್ಜನ್, ಮಾಜಿ ಅಧ್ಯಕ್ಷರಾದ ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮ ದಾಸ್, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ನಾಯಕನಹಟ್ಟಿ ಮಂಡಲ ಅಧ್ಯಕ್ಷ ಮಲ್ಲೇಶ್, ಮೊಳಕಾಲ್ಮೂರು ಅಧ್ಯಕ್ಷ ಶ್ರೀರಾಮರೆಡ್ಡಿ, ಚಳ್ಳಕೆರೆ ಅಧ್ಯಕ್ಷ ಸುರೇಶ್ ಮಧುರೆ, ಜಿಲ್ಲಾ ಉಪಾಧ್ಯಕ್ಷ ಕಲ ಸೀತರಾಮರೆಡ್ಡಿ, ಜಿ.ಪಂ.ಮಾಜಿ ಸದಸ್ಯ ರಮೇಶ್, ಯುವ ಮುಖಂಡ ಡಾ.ಸಿದ್ದಾರ್ಥ ಗುಡಾರ್ಪಿ, , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರಮ್ಮನಹಳ್ಳಿ ನಾಗರಾಜ್, ಕವನ, ಸುಮಾ, ಕವಿತಾ, ರೇಖಾ, ರತ್ಮಮ್ಮ ಪಾಪೇಶ್ ನಾಯ್ಕ್, ನಾಗರಾಜ ಬೇದ್ರೇ, ವೆಂಕಟೇಶ್ ಶಂಭು, ಕಿರಣ್ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕಿನ ರೈತರು ಇತರರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *