ಬಡ ಮಹಿಳೆಯರ ಆರೋಗ್ಯಕ್ಕಾಗಿಯೇ ಸರ್ಕಾರ ಸ್ಪಂದಿಸುತ್ತಿದೆ : ಶಾಸಕ ಎಂ.ಚಂದ್ರಪ್ಪ

suddionenews
2 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಡಿ.17): ಗರ್ಭಿಣಿ ಮಹಿಳೆಯರಿಗೆ ಪೌಷ್ಠಿಕಾಂಶವುಳ್ಳ ಆಹಾರ ನೀಡದಿದ್ದರೆ ಆರೋಗ್ಯವಂತ ಮಗು ಜನಿಸುವುದಿಲ್ಲ ಎನ್ನುವುದನ್ನು ಮನಗಂಡು ಸರ್ಕಾರ ಅನೇಕ ಒಳ್ಳೊಳ್ಳೆ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

ಹೊಳಲ್ಕೆರೆ ತಾಲ್ಲೂಕಿನ ಬಂಡೆಬೊಮ್ಮನಹಳ್ಳಿಯಲ್ಲಿ ಶನಿವಾರ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.

ಗರ್ಭಿಣಿ ಮಹಿಳೆಯರನ್ನು ಹದಿನೈದು ದಿನಗಳ ಕಾಲ ಸರ್ಕಾರಿ ಆಸ್ಪತ್ರೆಯಲ್ಲಿಟ್ಟುಕೊಂಡು ಪೌಷ್ಠಿಕಾಂಶ ಆಹಾರ ನೀಡುತ್ತಿದೆ. ಗರ್ಭಿಣಿ ಮಹಿಳೆಗೆ ಪೌಷ್ಠಿಕಾಂಶವುಳ್ಳ ಆಹಾರ ನೀಡದಿದ್ದರೆ ಹುಟ್ಟುವ ಮಕ್ಕಳು ಅಂಗವಿಕಲರಾಗುವ ಸಾಧ್ಯತೆಗಳಿರುತ್ತವೆ. ಅದಕ್ಕಾಗಿ ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ ಬರುತ್ತಿದೆ. ವೈದ್ಯರು, ನರ್ಸ್‍ಗಳಿದ್ದಾರೆ. ಎಲ್ಲರೂ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳಿ ಎಂದು ಶಾಸಕ ಎಂ.ಚಂದ್ರಪ್ಪ ಮನವಿ ಮಾಡಿದರು.

ಕೆಲವರಿಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆಯಿರುತ್ತದೆ. ಆದರೆ ಎಲ್ಲಿಯೂ ತೋರಿಸಿಕೊಂಡಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಹೃದಯಾಘಾತವಾಗಿ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಯಾರು ಉದಾಸೀನ ಮಾಡುವುದು ಬೇಡ. ತಪ್ಪದೆ ಎಲ್ಲರೂ ಆರೋಗ್ಯ ಕಾರ್ಡ್ ಮಾಡಿಸಿಕೊಂಡರೆ ಉಚಿತವಾಗಿ ಬೈಪಾಸ್ ಆಪರೇಷನ್, ಕ್ಯಾನ್ಸರ್ ಕಾಯಿಲೆಗಳಿಗೆ ಚಿಕಿತ್ಸೆ ಸಿಗುತ್ತದೆ. ಬಡವರಿಗೆ ಸುಲಭವಾಗಿ ಔಷಧಿಗಳು ಸಿಗಬೇಕೆನ್ನುವ ಕಾರಣಕ್ಕಾಗಿ ಪ್ರಧಾನಿ ಮೋದಿರವರು ದೇಶಾದ್ಯಂತ ಜನೌಷಧಿ ಕೇಂದ್ರಗಳನ್ನು ತೆರೆದಿದ್ದಾರೆ. ಅಲ್ಲಿ ಗುಣಮಟ್ಟದ ಮಾತ್ರೆ ಮತ್ತು ಔಷಧಿಗಳು ಸಿಗುತ್ತವೆ. ಬಡ ಮಹಿಳೆಯರ ಆರೋಗ್ಯಕ್ಕಾಗಿಯೇ ಸರ್ಕಾರ ಸ್ಪಂದಿಸುತ್ತಿದೆ ಎಂದು ಹೇಳಿದರು.

ಅಧಿಕಾರಿಗಳು ಮನೆ ಮನೆಗೆ ಹೋಗಿ ಬಡವರನ್ನು ಹುಡುಕಿ ಪಿಂಚಣಿ ಮಾಡಿಸಿಕೊಡುತ್ತಿದ್ದಾರೆ. ಬಡ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದರೆ ಭಾಗ್ಯಲಕ್ಷ್ಮಿ ಯೋಜನೆಯಡಿ ಬಾಂಡ್ ನೀಡಲಾಗುತ್ತಿದೆ. ಖಾತೆಗಳಿಲ್ಲದೆ ಬೇರೊಬ್ಬರ ಹೆಸರಿನಲ್ಲಿ ಜಮೀನು ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿರುವವರಿಗೆ ಖಾತೆ ಮಾಡಿಸಿಕೊಟ್ಟು ಗಂಗಾ ಕಲ್ಯಾಣ ಯೋಜನೆಯಡಿ ಬೋರ್‍ವೆಲ್ ಕೊರೆಸಿಕೊಡಲಾಗುವುದು. ಸಾಲ ಇನ್ನಿತರೆ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಇದು ನೆರವಾಗಲಿದೆ. ಪ್ರತಿ ರೈತನ ಖಾತೆಗೆ ಕೇಂದ್ರ ಸರ್ಕಾರ ವರ್ಷಕ್ಕೆ ಹತ್ತು ಸಾವಿರ ರೂ.ಗಳನ್ನು ಜಮಾ ಮಾಡುತ್ತಿದೆ. ಚುನಾವಣೆ ಸಂದರ್ಭದಲ್ಲಿ ಮತ ಹಾಕುವುದು ಒಂದು ನಿಮಿಷದ ಕೆಲಸ. ಯಾರು ನಮ್ಮ ಅಭಿವೃದ್ದಿಯ ಪರವಾಗಿದ್ದಾರೆನ್ನುವುದನ್ನು ಆಲೋಚಿಸಿ ಯೋಗ್ಯರಿಗೆ ಮತ ನೀಡಿ ಎಂದು ಶಾಸಕ ಎಂ.ಚಂದ್ರಪ್ಪ ವಿನಂತಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾಗಿದ್ದರೂ ವಡ್ಡರಹಟ್ಟಿಯನ್ನು ಇಲ್ಲಿಯವರೆಗೂ ಕಡೆಗಣಿಸಲಾಗಿತ್ತು. ನಮ್ಮ ಸರ್ಕಾರ ಬಂದ ಮೇಲೆ ಈಗ ಕಂದಾಯ ಗ್ರಾಮವನ್ನಾಗಿ ಮಾಡುತ್ತಿದ್ದೇವೆ. ಎಂಬತ್ತು ಮನೆಗಳಿಗೆ ಹಕ್ಕುಪತ್ರ ವಿತರಿಸಿ ಜಮೀನು ಕೊಡುತ್ತೇವೆ. ಸರ್ಕಾರದಿಂದ ಸಿಗುವ ಎಲ್ಲಾ ಸೌಲತ್ತುಗಳು ನಿಮಗೆ ತಲುಪಲಿ ಎನ್ನುವುದಕ್ಕಾಗಿ ಕಂದಾಯ ಗ್ರಾಮವನ್ನಾಗಿ ಮಾಡುತ್ತಿದ್ದೇವೆ. ಯಾವುದೇ ಸಮಾಜಕ್ಕೆ ಅನ್ಯಾಯವಾಗಿಲ್ಲ. ಎಲ್ಲಾ ಜಾತಿ ವರ್ಗದವರಿಗೆ ಸಾಮಾಜಿಕ ನ್ಯಾಯ ನೀಡಿರುವುದು ಬಿಜೆಪಿ.ಸರ್ಕಾರ ಮಾತ್ರ ಎಂದು ತಿಳಿಸಿದರು.

ವಿವಿಧ ಗ್ರಾಮಗಳಿಂದ ಬಂದಿದ್ದ ಜನರ ಅಹವಾಲುಗಳನ್ನು ಸ್ವೀಕರಿಸಲಾಯಿತು. ಜನಸಾಮಾನ್ಯರ ಕುಂದುಕೊರತೆಗಳಿಗೆ ಮೊದಲ ಆದ್ಯತೆ ನೀಡಿ ಪರಿಹರಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು ಸ್ಥಳದಲ್ಲಿಯೇ ಕೆಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿದರು.

ಗರ್ಭಿಣಿ ಸ್ತ್ರೀಯರಿಗೆ ಆಶಾ ಕಾರ್ಯಕರ್ತೆಯರು ಸೀಮಂತ ನೆರವೇರಿಸಿದರು.

ಹೊಳಲ್ಕೆರೆ ತಹಶೀಲ್ದಾರ್ ಶ್ರೀಮತಿ ರೇಖ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸಾಕಮ್ಮ ರಾಜಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಂಜನ್‍ಕುಮಾರ್, ಹೊಳಲ್ಕೆರೆ ಬಿಜೆಪಿ.ಮಂಡಲ ಅಧ್ಯಕ್ಷ ಸಿದ್ದೇಶ್, ಗ್ರಾಮ ಪಂಚಾಯಿತಿ ಸದಸ್ಯೆ ಶ್ರೀಮತಿ ಓಂಕಾರಮ್ಮ, ಕಂದಾಯ ಇಲಾಖೆ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *