ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೆಚ್ಚು ಜನ ಮೆಟ್ರೋ ಪ್ರಯಾಣವನ್ನೇ ಅವಲಂಬಿಸಿದ್ದಾರೆ. ಕಾರಣ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ. ಆದ್ರೆ ಈ ಮೆಟ್ರೋ ದರವೇ ಸಿಕ್ಕಾಪಟ್ಟೆ ಏರಿಕೆಯಾದರೆ ಪ್ರತಿದಿನ ಓಡಾಡುವ ಜನ ಏನು ಮಾಡಬೇಕು. ಈಗಾಗಲೇ ಏರಿಕೆಯಾಗಿರುವುದನ್ನೇ ಜನ ಅರಗಿಸಿಕೊಳ್ಳಲಾಗ್ತಿಲ್ಲ. ಮತ್ತೆ ದರ ಏರಿಕೆ ಆಗುತ್ತೆ ಅಂತ ಹೇಳಲಾಗ್ತಿತ್ತು. ಜನ ರೊಚ್ಚಿಗೆದ್ದ ಪರಿಣಾಮವೋ ಏನೋ ಸದ್ಯಕ್ಕೆ ದರ ಏರಿಕೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.
ಇದಕ್ಕೆ ಸದ್ಯ ಕಾರಣ ಅಂದ್ರೆ ಸಂಸದ ತೇಜಸ್ವಿ ಸೂರ್ಯ ಹಾಗೂ ಪಿಸಿ ಮೋಹನ್ ಎಂದೇ ಹೇಳಲಾಗ್ತಿದೆ. ಮೆಟ್ರೋ ದರವನ್ನ ಶೇಕಡ 5% ಏರಿಕೆ ಮಾಡಿ, ಆದೇಶವನ್ನು ಹೊರಡಿಸಲಾಗಿತ್ತು. ಈ ಹೊಸ ದರ ಸೋಮವಾರದಿಂದಾನೇ ಜಾರಿಗೆ ಬರಬೇಕಿತ್ತು. ಸದ್ಯ ಅದಕ್ಕೆ ಬ್ರೇಕ್ ಬಿದ್ದಿರುವ ಕಾರಣ ಮೆಟ್ರೋ ಪ್ರಯಾಣಿಕರು ನಿರಾಳರಾಗಿದ್ದಾರೆ.
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ. ಮೋಹನ್ ಅವರು ಈ ವಿಚಾರವಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಕಟ್ಟರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಕಳೆದ ಎರಡು ದಿನಗಳ ಹಿಂದಷ್ಟೇ ಭೇಟಿಯಾಗಿದ್ದ ತೇಜಸ್ವಿ ಸೂರ್ಯ, ದರ ಏರಿಕೆಯನ್ನು ಮರುಪರಿಶೀಲಿಸುವಂತೆ ಮನವಿ ಮಾಡಿಕೊಂಡಿದ್ದರು.
ಸಂಸದರ ಮನವಿಗೆ ಸ್ಪಂದಿಸಿರುವ ಕೇಂದ್ರ ಸಚಿವ ಕಟ್ಟರ್ ಅವರು, ದರ ಏರಿಕೆ ಆದೇಶವನ್ನು ಸದ್ಯಕ್ಕೆ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಸೋಮವಾರದಿಂದ ಯಾವುದೇ ದರ ಏರಿಕೆ ಇರುವುದಿಲ್ಲ ಎಂದು ತೇಜಸ್ವಿ ಸೂರ್ಯ ಸ್ಪಷ್ಟಪಡಿಸಿದ್ದಾರೆ. ಪ್ರತಿ ದಿನ ಓಡಾಡುವ ಮಂದಿಗೆ ಈ ಪ್ರಯಾಣ ದರ ಏರಿಕೆ ಕೊಂಚ ಕಿರಿಕಿರಿಯೇ ಸರಿ.

