ಭದ್ರೆಗೆ ದುಡ್ಡು ಕೊಡಿ, ಇಲ್ಲವೇ ಕುರ್ಚಿ ಬಿಡಿ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಆಗ್ರಹ

5 Min Read

ಸುದ್ದಿಒನ್, ಚಿತ್ರದುರ್ಗ, ಮಾ. 03: ಸುದೀರ್ಘ 35 ವರ್ಷಗಳ ಕಾಲ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು, ಕಾರ್ಮಿಕರು, ವಿವಿಧ ಸಂಘಟನೆಗಳು ನಡೆಸಿದ ಚಳವಳಿ ಪರಿಣಾಮ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಂಡಿದೆ. ಆದರೆ, ಅದನ್ನು ಪೂರ್ಣಗೊಳಿಸುವಲ್ಲಿ ಅಧಿಕಾರಿ, ಜನಪ್ರತಿನಿಧಿಗಳು ಅಸಡ್ಡೆ ತೋರುತ್ತಿದ್ದಾರೆ ಎಂದು ಜಿಲ್ಲಾ ನೀರಾವರಿ ಹೋರಾಟ ಸಮಿತಿ ಹಿರಿಯ ಮುಖಂಡ ಆರ್.ಶೇಷಣ್ಣಕುಮಾರ್ ದೂರಿದರು.

 

ಒನಕೆ ಓಬವ್ವ ವೃತ್ತದಲ್ಲಿ ರಾಜ್ಯ ರೈತಸಂಘ ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಉಪವಾಸ
ಸತ್ಯಾಗ್ರಹ 2ನೇ ದಿನದ ಧರಣಿಯಲ್ಲಿ ಮಂಗಳವಾರ ಮಾತನಾಡಿ, ಕೇಂದ್ರ ಮತ್ತು ರಾಜ್ಯ
ಸರ್ಕಾರ ಭದ್ರೆಗೆ ಹಣ ಕೊಡಲು ಆಗದಿದ್ದರೇ ಅಧಿಕಾರದಿಂದ ಕೆಳಗಿಳಿಯಲಿ ಎಂದು
ಆಗ್ರಹಿಸಿದರು.

 

ಪಿ.ಕೋದಂಡರಾಮಯ್ಯ, ಎಂ.ಜಯಣ್ಣ, ಮುರುಘ ರಾಜೇಂದ್ರ ಒಡೆಯರ್, ಬಂಜಗೆರೆ ಜಯಪ್ರಕಾಶ್,
ಸೋಮಗುದ್ದು ರಂಗಸ್ವಾಮಿ ಸೇರಿ ಅನೇಕರು ಜಿಲ್ಲಾ ನೀರಾವರಿ ಹೋರಾಟ ಸಮಿತಿಯ ಚಳವಳಿಯನ್ನು
ಉತ್ತುಂಗಕ್ಕೆ ಕೊಂಡೊಯ್ದ ಪರಿಣಾಮ ಯೋಜನೆ ಜಾರಿಗೊಂಡಿದೆ ಎಂದು ತಿಳಿಸಿದರು.
ರಾಜ್ಯ, ದೇಶದ ವಿವಿಧೆಡೆ ಜಲಾಶಯ ನಿರ್ಮಾಣಕ್ಕೆ ನಮ್ಮ ತೆರಿಗೆ ಹಣ ನೀಡಿದ್ದೇವೆ. ಅವುಗಳು ಪೂರ್ಣಗೊಂಡು, ಅಲ್ಲಿನ ಜನರು ನೆಮ್ಮದಿಯಿಂದ ಇದ್ದಾರೆ. ಆದರೆ, ಬಯಲುಸೀಮೆ ಜನರ ಬಾಯಾರಿಕೆ ತಣಿಸುವ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವಲ್ಲಿ ಅತ್ಯಂತ
ನಿರ್ಲಕ್ಷö್ಯ ವಹಿಸಲಾಗುತ್ತಿದೆ. ಇದೇ ರೀತಿ ಅಸಡ್ಡೆ ತೋರಿದರೆ ಜಿಲ್ಲಾದ್ಯಂತ ಜನಾಂದೋಲನ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ದೇಶಕ್ಕೆ ಅನ್ನ ಕೊಡುವ ಅನ್ನದಾತರು ನೀರಿಗಾಗಿ ಅನ್ನ-ನೀರು ತೊರೆದು ಉಪವಾಸ ಕುಳಿತಿದ್ದಾರೆ. ಧರಣಿ ಸ್ಥಳಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಆಗಮಿಸಿ ಮನವಿ
ಸ್ವೀಕರಿಸುವ, ಭರವಸೆ ನೀಡುವ ಕನಿಷ್ಠ ಸೌಜನ್ಯ ಪ್ರದರ್ಶಿಸದೆ ಇರುವುದು ನೋವಿನ ಸಂಗತಿ.
ಹೋರಾಟದ ಕಿಚ್ಚು ಹೆಚ್ಚಾಗುವ ಮುನ್ನವೇ ಎಚ್ಚೇತ್ತುಕೊಳ್ಳಬೇಕೆಂದು ಹೇಳಿದರು.

 

ಕೇಂದ್ರ ಸರ್ಕಾರ 5,300 ಕೋಟಿ, ರಾಜ್ಯ ಸರ್ಕಾರ ಈ ಬಜೆಟ್‌ನಲ್ಲಿ 5 ಸಾವಿರ ಕೋಟಿ ಬಿಡುಗಡೆಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕೆಂದರು. ಭದ್ರಾ ಮೇಲ್ದಂಡೆ ಯೋಜನೆ ಗುತ್ತಿಗೆದಾರರು ಸಾಲ ಮಾಡಿ ಕೆಲಸ ಮಾಡಿದ್ದಾರೆ. ಈಗ ಅವರು ಬೀದಿಗಿಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅವರಿಗೆ ಹಣ ಬಿಡುಗಡೆ ಮಾಡುವ
ಜೊತೆಗೆ ಕಾಮಗಾರಿಗೆ ವೇಗ ನೀಡಿ, ನಿಗದಿತ ಅವಧಿಯೊಳಗೆ ಜಿಲ್ಲೆಗೆ ಭದ್ರೆ ನೀರು ಹರಿಸುವಲ್ಲಿ ಶ್ರಮಿಸಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ವಿಷಯದಲ್ಲಿ ನಮ್ಮ ತಾಳ್ಮೆ ಪರೀಕ್ಷೆ ಮಾಡಬಾರದು ಎಂದು ಹೇಳಿದರು.

ನೀರಾವರ ಹೋರಾಟ ಸಮಿತಿ ಸಂಚಾಲಕ ಜಿ.ಎಸ್.ಉಜ್ಜಿನಪ್ಪ ಮಾತನಾಡಿ, ರಾಜಕಾರಣಿಗಳು,
ಅಧಿಕಾರಿಗಳಿಗೆ ಇಚ್ಛಾಶಕ್ತಿ ಇದ್ದಲ್ಲಿ ಈ ವೇಳೆಗೆ ಚಿತ್ರದುರ್ಗ ಜಿಲ್ಲೆ ಸಂಪೂರ್ಣ ಹಸಿರುಕರಣ ಆಗಬೇಕಾಗಿತ್ತು. ಆದರೆ, ನಿಷ್ಕಿçಯರಾಗಿದ್ದಾರೆ. ಕಿವುಡು, ಕುರುಡತನ
ಪ್ರದರ್ಶಿಸುತ್ತಿದ್ದಾರೆ. ಜಲಾಶಯದಲ್ಲಿ ನೀರಿದೆ, ಅದನ್ನು ಹರಿಸಲು ಬದ್ಧತೆ ಪ್ರದರ್ಶಿಸುತ್ತಿಲ್ಲ ಎಂದು ಬೇಸರಿಸಿದರು.
ಜಿಲ್ಲೆಯಲ್ಲಿ 1200 ಅಡಿ ಅಳಕ್ಕೆ ಇಳಿದರೂ ನೀರು ಸಿಗುತ್ತಿಲ್ಲ. ರೈತರು ಕೊಳವೆಬಾವಿ ಕೊರೆಯಿಸಿ ಸಾಲಗಾರರಾಗುತ್ತಿದ್ದಾರೆ. ಈ ಸಮಸ್ಯೆಗೆ ಸ್ಪಂದಿಸಬೇಕಾದ ರಾಜಕಾರಣಿಗಳು ಇನ್ನೇನೂ ನೀರು ಹರಿದೇ ಬಿಟ್ಟಿತು ಎಂದು ಸುಳ್ಳು ಹೇಳುತ್ತಲೇ ಕಾಲ ಕಳೆಯುತ್ತಿದ್ದಾರೆ
ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ಸಿಐಟಿ ಮುಖಂಡ ಗೌಸ್‌ಪೀರ್ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ತಕ್ಷಣವೇ ಕ್ರಮಕೈಗೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ತಕ್ಷಣವೇ ತಮ್ಮ ಜವಾಬ್ದಾರಿ ನಿರ್ವಹಿಸಬೇಕು. ಬರಗಾಲದ ಜಿಲ್ಲೆ ಜನರನ್ನು ಮಾನವೀಯ
ಕಣ್ಣಿನಲ್ಲಿ ನೋಡಬೇಕು. ಇಲ್ಲದಿದ್ದರೇ ನಾವು ಬೀದಿಗಿಳಿದು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

 

ನೀರಾವರ ಹೋರಾಟ ಸಮಿತಿ ಸಂಚಾಲಕ ನರೇನಹಳ್ಳಿ ಅರುಣ್‌ಕುಮಾರ್ ಮಾತನಾಡಿ, ಗ್ಯಾರೆಂಟಿ
ಯೋಜನೆಗಳಿಗೆ ಕೋಟ್ಯಾಂತರ ರೂ. ವೆಚ್ಚ ಮಾಡಲಾಗುತ್ತಿದೆ. ಅದರಲ್ಲಿ ಶೇ.2ರಷ್ಟು ಹಣ
ಕೊಟ್ಟರೂ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಅನುಕೂಲ ಆಗಲಿದೆ. ಈ ನಿಟ್ಟಿನಲ್ಲಿ
ರಾಜ್ಯ ಸರ್ಕಾರ ಚಿಂತನೆ ನಡೆಸಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರ್ಕಾರಕ್ಕೆ ನಾವು ಹಾಗೂ ರಾಜ್ಯ ಸರ್ಕಾರ ಹಣ ಕೊಡಿ ಅಂತಾ ಕೇಳಿರಲಿಲ್ಲ.
ಆದರೆ, ಅವರೇ ಯೋಜನೆಗೆ ರಾಷ್ಟೀಯ ಮನ್ನಣೆ ನೀಡುತ್ತೇವೆ, 5,300 ಕೋಟಿ ರೂ. ಬಿಡುಗಡೆ
ಮಾಡುತ್ತೇವೆ ಎಂದು ಘೋಷಿಸಿದರು. ಈಗ ಇಲ್ಲಸಲ್ಲದ ನೆಪ ಮಾಡುವುದು ವಂಚನೆ ಆಗಿದೆ.
ಜವಾಬ್ದಾರಿಯುತ ಹುದ್ದೆಯಲ್ಲಿರುವವರ ಘನತೆಗೆ ಧಕ್ಕೆ ತರುವ ಕೆಲಸ ಎಂದರು.

ಅಂತಹದ್ದೇನು ಗುಟ್ಟು :
ಪ್ರಧಾನಿ ಭೇಟಿ ಮಾಡಿ ಏನೇನೂ ಚರ್ಚೆ ಮಾಡಿದ್ದೀರಿ, ಅವರು ಏನು ಹೇಳಿದರೂ ಎಂದು ಸಂಸದ ಗೋವಿಂದ ಕಾರಜೋಳ ಅವರಲ್ಲಿ ಕೇಳಿದರೇ, ಅದೆಲ್ಲವನ್ನೂ ಹೇಳಲು ಆಗುವುದಿಲ್ಲ ಎನ್ನುತ್ತಾರೆ. ಆಗಿದ್ದರೇ ಅಂತಹದ್ದೇನು ಗುಟ್ಟು ಎಂದು ಜಿಲ್ಲಾ ನೀರಾವರಿ ಹೋರಾಟ
ಸಮಿತಿಯ ಮುಖಂಡ ಜೆ.ಯಾದವರೆಡ್ಡಿ ಪ್ರಶ್ನೀಸಿದರು.

ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ನಾನು ಎಂಪಿ ಆಗಿ ಎರಡನೇ ತಿಂಗಳಲ್ಲಿ ಹಣ ಬಿಡುಗಡೆ
ಮಾಡಿಸಲಾಗುವುದು, ಇಲ್ಲದಿದ್ದರೇ ನಿಮ್ಮೊಂದಿಗೆ ಧರಣಿ ಕುಳಿತುಕೊಳ್ಳುವೆ ಎಂದೇಳಿದ್ದರು. ಆದರೆ, ಈಗ ಅದು ರಾಜ್ಯದ ಯೋಜನೆ, ನಮ್ಮದ್ದಲ್ಲವೆಂಬ ಹಗುರವಾಗಿ
ಮಾತನಾಡುವುದನ್ನು ಕೈಬಿಡಬೇಕು. ಇಲ್ಲದಿದ್ದರೇ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು
ಎಚ್ಚರಿಸಿದರು.

ದೇಶದ ಏಕೈಕ ದೊಡ್ಡ ಯೋಜನೆ ಭದ್ರಾ ಮೇಲ್ದಂಡೆ ಆಗಿದೆ. ಇದನ್ನು ಪೂರ್ಣಗೊಳಿಸುವುದು
ತುರ್ತು ಇದೆ. ಆದರೆ, ನಮ್ಮ ರಾಜಕಾರಣಿಗಳು, ಅಧಿಕಾರಿಗಳಿಗೆ ನೈತಿಕತೆ, ಧೈರ್ಯ ಇಲ್ಲದ
ಕಾರಣಕ್ಕೆ ಯೋಜನೆ ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಹೇಳಿದರು.

ಎಂಪಿ-ಪಿಎ ಭೇಟಿ ನಿಜವೇ.‌?

ಯೋಜನೆ ಸಂಬಂಧ ಪ್ರಧಾನ ಮಂತ್ರಿ ಅವರನ್ನು ಸಂಸದ ಗೋವಿಂದ ಕಾರಜೋಳ ಭೇಟಿ ಮಾಡಿದ್ದಾರೆಂಬ
ಫೋಟೋ ಸಹಿತ ಹೇಳಿಕೆ ಸಂಶಯ ಮೂಡಿಸುತ್ತದೆ. ಈ ಸಂಬAಧ ಮಾಹಿತಿ ಹಕ್ಕು ಅಡಿ ಅರ್ಜಿ
ಸಲ್ಲಿಸಿದರೆ ಸತ್ಯ ಬಯಲಾಗಲಿದೆ ಎಂದು ಆರ್.ಶೇಷಣ್ಣಕುಮಾರ್ ಹೇಳಿದರು. ಮೋದಿ ಅವರನ್ನು
ಭೇಟಿ ಮಾಡಿ, ಚರ್ಚೆ ಮಾಡಿರುವ, ಅವರು ಕೊಟ್ಟಿರುವ ಭರವಸೆಯನ್ನೇ ಸಂಸದರು ಜನರೇದುರು
ತೆರೆದಿಡುತ್ತಿಲ್ಲವೆಂದರೇ ಇಂತಹ ಸಂಶಯಗಳು ಎದುರುಗೊಳ್ಳುತ್ತವೆ ಎಂದು ಹೇಳಿದರು.

ಸಾಯಲು ಸಿದ್ಧ :
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ 5,300, ರಾಜ್ಯ ಸರ್ಕಾರ ಬಜೆಟ್‌ನಲ್ಲಿ 5 ಸಾವಿರ ಕೋಟಿ ರೂ. ಬಿಡುಗಡೆಗೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೇ ನಾವು ಉಪವಾಸ ಇದ್ದು ಸಾಯಲು ಸಿದ್ಧವಾಗಿದ್ದೇವೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಘೋಷಿಸಿದರು. ಎರಡನೇ ದಿನ ಉಪವಾಸ ಸತ್ಯಾಗ್ರಹ ಕಾಲಿಟ್ಟಿದೆ. ಆದರೂ ಒಬ್ಬ ಅಧಿಕಾರಿ, ಜನಪ್ರತಿನಿಧಿ ಭೇಟಿ ನೀಡಿಲ್ಲ. ಇಂತಹವರಿಂದಲೇ ಯೋಜನೆ ವಿಳಂಬ ಆಗುತ್ತಿರುವುದು. ಆರು ಮಂದಿ ಉಪವಾಸ ಆರಂಭಿಸಿದ್ದು, ನಾವು ಸತ್ತು ಲಕ್ಷಾಂತರ ರೈತರ ಬದುಕು ಹಸನುಗೊಳಿಸಲು
ಬದ್ಧರಾಗಿದ್ದೇವೆ. ಯಾವುದೇ ಕಾರಣಕ್ಕೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾತುಗಳು ಹುಸಿಗೊಳ್ಳುತ್ತಲೇ ಇವೆ. ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಇಬ್ಬರೂ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಹೋರಾಟದ ಕಿಚ್ಚು ನಿಮ್ಮನ್ನು ಸುಡಲಿದೆ ಎಂದು ಎಚ್ಚರಿಸಿದರು.

 

ಸುಳ್ಳು ಮಾತು ಕೇಳಿ ಸಾಕಾಗಿದೆ :
ಮುಂದಿನ ತಿಂಗಳು ಜಿಲ್ಲೆಗೆ ನೀರು ಬಂದೇ ಬಿಟ್ಟಿತು ಎಂಬ ಮಾತು ಒಂದು ವರ್ಷದಿಂದ ಕೇಳಿ ಕೇಳಿ ಸಾಕಾಗಿ ಹೋಗಿದೆ ಎಂದು ನೀರಾವರಿ ಹೋರಾಟ ಸಮಿತಿ ಸಂಚಾಲಕ ಚಳ್ಳಕೆರೆ ಬಸವರಾಜ್
ಬೇಸರಿಸಿದರು. ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲರಾಗಿದ್ದು, ಅಶಕ್ತರಾಗಿದ್ದಾರೆ. ಈ ಕಾರಣಕ್ಕೆ ಜನರನ್ನು
ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು. ಭದ್ರಾ ಡ್ಯಾಂ ಬಳಿ ಹೋಗಿ ಫೋಟೋ ತೆಗೆಸಿಕೊಂಡು ಬಂದು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಆದರೆ, ತುಂಗಾ ಜಲಾಶಯದಿಂದ ಭದ್ರಾಕ್ಕೆ ನೀರು ಲಿಫ್ಟ್ ಮಾಡುವ ಕಾಮಗಾರಿ ಏನಾಗಿದೆ ಎಂಬ ವಾಸ್ತವ
ಪರಿಸ್ಥಿತಿ ತಿಳಿದುಕೊಂಡು, ಹಣ ಬಿಡುಗಡೆ ಮಾಡಿಸಿ ಕಾಮಗಾರಿಗೆ ವೇಗ ನೀಡುವ ಪ್ರಯತ್ನವನ್ನೇ ಮಾಡುತ್ತಿಲ್ಲವೆಂದು ಬೇಸರಿಸಿದರು.

ಪಾಲ್ಗೊಂಡಿದ್ದ ಪ್ರಮುಖರು : ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಂಚಾಲಕ ಜೋಗಿಮಟ್ಟಿ ಈ.ಮಹೇಶಬಾಬು, ರೈತಸಂಘ ರಾಜ್ಯ
ಕಾರ್ಯಾಧ್ಯಕ್ಷರಾದ ಈಚಘಟ್ಟ ಸಿದ್ದವೀರಪ್ಪ, ಬೇಡರರೆಡ್ಡಿಹಳ್ಳಿ ಬಸವರೆಡ್ಡಿ, ಮುಖಂಡರಾದ ರೆಡ್ಡಿಹಳ್ಳಿ ವೀರಣ್ಣ, ಸಿದ್ರಾಮಪ್ಪ, ಸಣ್ಣತಿಮ್ಮಣ್ಣ, ಸಣ್ಣೀರಪ್ಪ,
ನಿಂಗಪ್ಪ, ಪ್ರಸನ್ನ, ವೆಂಕಟೇಶ್, ವೀರಭದ್ರಪ್ಪ, ಮಲ್ಲಾಪುರ ತಿಪ್ಪೇಸ್ವಾಮಿ, ರಂಗಣ್ಣ, ತಿಪ್ಪೇಸ್ವಾಮಿ, ಕೆಪಿಎಂ ಗಣೇಶಯ್ಯ, ಹುಣಸೆಕಟ್ಟೆ ರಾಜು ಇತರರಿದ್ದರು.

Share This Article
Enable Notifications OK No thanks