ಮನುಷ್ಯ ಹೇಗೆ ಬದುಕಬೇಕು ಎಂಬುದಕ್ಕೆ ಅದೆಷ್ಟೋ ಉದಾಹರಣೆಗಳು ಸಿಕ್ತಾವೆ. ಆದರೆ ಉದಾಹರಣೆಯಾಗಿ ಬದುಕುವುದು ಕಡಿಮೆ ಜನ ಮಾತ್ರ. ಆ ರೀತಿ ಬದುಕಿದವರಲ್ಲಿ ರಾಕೇಶ್ ಪೂಜಾರಿ ಕೂಡ ಒಬ್ಬರು. ರಾಕೇಶ್ ಪೂಜಾರಿಗೆ ಕೇವಲ 34 ವರ್ಷ. ಈಗಿನ್ನು ಜವಾಬ್ದಾರಿಯನ್ನ ಹೆಗಲ ಮೇಲೆ ಹೊತ್ತು ಸಾಗುತ್ತಿದ್ದ ಹುಡುಗ, ಮನೆಗೆ ಆಸರೆಯಾಗಿದ್ದ ಹುಡುಗ, ತಂಗಿಯ ಮದುವೆ ಮಾಡಿ ಆ ಜವಾಬ್ದಾರಿಯಿಂದ ಮುಕ್ತನಾಗಬೇಕೆಂದು ನಿರೀಕ್ಷೆ ಇಟ್ಟುಕೊಂಡಿದ್ದ ಯುವಕ. ಆದರೆ ವಿಧಿ ಅದ್ಯಾವುದಕ್ಕೂ ಅವಕಾಶವೇ ನೀಡದೆ, ಖ್ಯಾತಿ ನೀಡಿ ಕರೆದುಕೊಂಡೆ ಬಿಟ್ಟಿದೆ.
ರಾಕೇಶ್ ಪೂಜಾರಿಯ ಅಂತ್ಯಕ್ರಿಯೆ ಬಂದ ಜನ, ಕಲಾವಿದರನ್ನು ನೋಡಿದರೆ, ಅವರ ಮಾತುಗಳನ್ನ ಕೇಳಿದರೇನೆ ಅರ್ಥವಾಗುತ್ತದೆ ರಾಕೇಶ್ ಪೂಜಾರಿ ಅದೆಷ್ಟು ಪ್ರೀತಿಯನ್ನ ಗಳಿಸಿದ್ದಾರೆ ಎಂಬುದು. ಎಲ್ಲರ ಕಣ್ಣಲ್ಲೂ ನೀರು ತುಂಬಿತ್ತು, ಮನಸ್ಸು ಭಾರವಾಗಿತ್ತು. ಈಗ ಆ ಎಲ್ಲಾ ಸ್ನೇಹಿತರು ಸೇರಿ ರಾಕೇಶ್ ಪೂಜಾರಿಯ ಕನಸ್ಸನ್ನು ನನಸು ಮಾಡಲು ಹೊರಟಿದ್ದಾರೆ.
ರಾಕೇಶ್ ಪೂಜಾರಿಯ ತಂದೆ ತೀರಿಕೊಂಡ ಮೇಲೆ ಮನೆಯ ಜವಾಬ್ದಾರಿಯನ್ನು ಅವರೇ ನಿಭಾಯಿಸಿಕೊಂಡು ಹೋಗ್ತಾ ಇದ್ರು. ತಂಗಿಯ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕು ಎಂದುಕೊಂಡಿದ್ದರು. ಈಗ ಇದ್ದಕ್ಕಿದ್ದ ಹಾಗೇ ಆ ಹೃದಯ ಬಡಿತವೇ ನಿಂತು ಹೋಗಿದೆ. ಮನೆಯಲ್ಲಿ ತಂಗಿ, ಅಮ್ಮ ಇಬ್ಬರೆ ಈಗ. ಅಪ್ಪನು ಇಲ್ಲ, ಅಣ್ಣನು ಇಲ್ಲ. ಧಿಕ್ಕೆ ತೋಚದೆ ಕೂತಿರುವ ಆ ಕುಟುಂಬಕ್ಕೆ ಸ್ನೇಹಿತರು ಆಸರೆಯಾಗುವ ಭರವಸೆ ನೀಡಿದ್ದಾರೆ. ತಂಗಿಯ ಮದುವೆಗೆ ಸಾಥ್ ನೀಡಲು ತೀರ್ಮಾನಿಸಿದ್ದಾರೆ. ಪ್ರವೀಣ್ ಜೈನ್, ಅನೀಶ್ ಪೂಹಾರಿ, ಮನೋಹರ್, ಮಂಥನ ಹೀಗೆ ಹಲವರು ಕೈಜೋಡಿಸುವುದಾಗಿ ತಿಳಿಸಿದ್ದಾರೆ.




