ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಕೋಚ್ ಗೌತಮ್ ಗಂಭೀರ್ ಮತ್ತು ಐಸಿಸಿ ಅಧ್ಯಕ್ಷ ಜಯ್ ಶಾ ಅವರು ರವಿವಾರ ಗೆದ್ದ ವಿಶ್ವಕಪ್ ಟಿ20 ಟ್ರೋಫಿಯನ್ನು ಅಹ್ಮದಾಬಾದ್ ನ ಹಿಂದೂ ದೇವಾಲಯಕ್ಕೆ ಒಯ್ದ ಕ್ರಮವನ್ನು ತೃಣಮೂಲ ಕಾಂಗ್ರೆಸ್ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಪ್ರಶ್ನಿಸಿದ್ದಾರೆ.
ಕೀರ್ತಿ ಆಜಾದ್ 1983ರ ಏಕದಿನ ವಿಶ್ವಕಪ್ ಗೆದ್ದ ತಂಡದ ಸದಸ್ಯರು.
ಒಂದು ಧರ್ಮಕ್ಕೆ ಇದನ್ನು ಸೀಮಿತಗೊಳಿಸುವುದು ನಾಚಿಕೆಗೇಡು ಎಂದು ಕೀರ್ತಿ ಆಜಾದ್ ಟೀಕಿಸಿದ್ದಾರೆ. 1983ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ತಂಡ ವಿಶ್ವಕಪ್ ಗೆದ್ದಾಗ, ತಂಡದಲ್ಲಿ ಹಿಂದೂ, ಮುಸ್ಲಿಂ, ಸಿಕ್ಖ್ ಹಾಗೂ ಕ್ರಿಶ್ಚಿಯನ್ನರು ಕೂಡಾ ತಂಡದಲ್ಲಿದ್ದರು. ನಾವು ನಮ್ಮ ಧಾರ್ಮಿಕ ತವರು ಎನಿಸಿದ ಇಂಡಿಯಾ, ಭಾರತ, ಹಿಂದೂಸ್ತಾನಕ್ಕೆ ಅದನ್ನು ಒಯ್ದೆವು” ಎಂದು ಹೇಳಿದ್ದಾರೆ.
ಏಕೆ ಮಸೀದಿಗೆ ಒಯ್ದಿಲ್ಲ? ಏಕೆ ಚರ್ಚ್ ಗೆ ಒಯ್ದಿಲ್ಲ? ಏಕೆ ಗುರುದ್ವಾರಕ್ಕೆ ಒಯ್ದಿಲ್ಲ? ಈ ಟ್ರೋಫಿ ಎಲ್ಲ ಧರ್ಮಗಳ 140 ಕೋಟಿ ಮಂದಿಗೆ ಸೇರಿದ್ದು. ಇದು ಒಂದು ಧರ್ಮದ ವಿಜಯದ ಸಂಕೇತವಲ್ಲ!” ಎಂದು ಎಕ್ಸ್ ಪೋಸ್ಟ್ ನಲ್ಲಿ ಆಜಾದ್ ಪ್ರಶ್ನೆ ಕೇಳಿದ್ದಾರೆ.ಈ ತಂಡ ಭಾರತವನ್ನು ಪ್ರತಿನಿಧಿಸುತ್ತದೆ. ಸೂರ್ಯಕುಮಾರ್ ಯಾದವ್ ಅಥವಾ ಜಯ್ ಶಾ ಕುಟುಂಬವನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿದ್ದಾರೆ.





