ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 17 : ರಾಜಕೀಯವಾಗಿ ಮೀಸಲಾತಿ ಸಿಕ್ಕಿದ್ದರೂ ಶೈಕ್ಷಣಿಕ, ಔದ್ಯೋಗಿಕವಾಗಿ ಅನ್ಯಾಯವಾಗಿದೆ. ಮೂಲಭೂತ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು ಹೋರಾಡಿ ಮುಂದಿನ ಪೀಳಿಗೆಗೆ ಒಳ್ಳೆಯ ಭವಿಷ್ಯ ರೂಪಿಸುವಂತೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗದವರಿಗೆ ಕರೆ ನೀಡಿದರು.
ದಾವಣಗೆರೆ ರಸ್ತೆಯಲ್ಲಿರುವ ಓಜಾಸ್ ಹೋಟೆಲ್ನಲ್ಲಿ ಮಂಗಳವಾರ ಶೋಷಿತ ಸಮುದಾಯದವರೊಂದಿಗೆ ನಡೆಸಿದ ಸಭೆ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಆಯವ್ಯಯದಲ್ಲಿ ಕಾನೂನು ಚೌಕಟ್ಟಿನಡಿ ನಮಗೆ ಸಿಗಬೇಕಾದ ಹಣ ಧಕ್ಕುತ್ತಿಲ್ಲ. ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ 187 ಕೋಟಿ ರೂ. ಅವ್ಯವಹಾರವಾಗಿ ಅಧಿಕಾರಿ ಚಂದ್ರಶೇಖರ್ ಆತ್ಯಹತ್ಯೆ ಮಾಡಿಕೊಂಡಿದ್ದರೂ ನಮ್ಮ ಸಮುದಾಯದಿಂದ ಗೆದ್ದು ಹೋಗಿರುವ ಶಾಸಕರು, ಮಂತ್ರಿಗಳು, ವಿಧಾನಪರಿಷತ್ ಸದಸ್ಯರುಗಳು ಏಕೆ ಬಾಯಿ ಬಿಡುತ್ತಿಲ್ಲ. ನಾಯಕ ಸಮಾಜದ ಪ್ರಶ್ನೆ ಬಂದಾಗ ಎಲ್ಲರೂ ಪಕ್ಷ ಬೇಧ ಮರೆತು ಒಂದಾಗುವಂತೆ ಮನವಿ ಮಾಡಿದರು.
ಪರಿಶಿಷ್ಟ ಜಾತಿಗೆ ಹದಿನೈದರಿಂದ ಹದಿನೇಳು ಪರ್ಸೆಂಟ್, ಪರಿಶಿಷ್ಠ ವರ್ಗಕ್ಕೆ 3 ರಿಂದ ಏಳು ಪರ್ಸೆಂಟ್ ಮೀಸಲಾತಿಯನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಎರಡು ವರ್ಷದಲ್ಲಿ 2 ಲಕ್ಷ 74 ಸಾವಿರ ಹುದ್ದೆಗಳು ಖಾಲಿಯಿವೆ. ಶೈಕ್ಷಣಿಕ, ಉದ್ಯೋಗದಲ್ಲಿ ಶೋಷಿತ ಸಮುದಾಯಗಳಿಗೆ ಮೀಸಲಾತಿ ಸಿಗದಿದ್ದರೆ ಸಮಾಜದ ಮುಖ್ಯವಾಹಿನಿಗೆ ಬರುವುದಾದರೂ ಹೇಗೆ ಎಂದು ವಿ.ಎಸ್.ಉಗ್ರಪ್ಪ ಪ್ರಶ್ನಿಸಿದರು?
ಕಾನೂನಿನಡಿಯಲ್ಲಿ ಅರ್ಹರಿರುವ ಹತ್ತು ಜಾತಿಗಳು ಬೇಕಾದರೂ ಪರಿಶಿಷ್ಟ ವರ್ಗಕ್ಕೆ ಸೇರ್ಪಡೆಯಾಗಲಿ ನಮ್ಮದೇನು ತಕರಾರಿಲ್ಲ. ಅದಕ್ಕೆ ತಕ್ಕಂತೆ ಮೀಸಲಾತಿ ಕೊಡಬೇಕು. ನಾಯಕ ಜನಾಂಗದವರೆಂದರೆ ಬರಿ ಹೊಡಿ, ಬಡಿ, ಕಡಿ ಅಲ್ಲ. ಮಹರ್ಷಿ ವಾಲ್ಮೀಕಿ ಕೈಯಲ್ಲಿರುವ ಲೇಖನಿ ಸಂಸ್ಕøತಿಯನ್ನು ಕೊಟ್ಟಾಗ ಬೇರೆ ಸಮಾಜದವರು ನಮ್ಮೊಡನೆ ಪೈಪೋಟಿ ನೀಡಲು ಆಗುವುದಿಲ್ಲ. ರಾಜಕಾರಣವೆಂದರೆ ಮಂತ್ರಿಗಿರಿಯಲ್ಲ. ನಾವುಗಳು ಮಾಡುತ್ತಿರುವ ಹೋರಾಟ ರಾಜಕಾರಣಕ್ಕಾಗಿ ಅಲ್ಲ. ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವುದು ನಮ್ಮ ಗುರಿಯಾಗಬೇಕು. ಇಲ್ಲವಾದಲ್ಲಿ ಮುಂದಿನ ಪೀಳಿಗೆಗೆ ಅನ್ಯಾಯವಾಗುತ್ತದೆ. ಶೋಷಿತ ಸಮುದಾಯದವರ ಭವಿಷ್ಯ ರೂಪಿಸುವಲ್ಲಿ ರಾಜ್ಯದ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಬೇಕಿದೆ. ಹಕ್ಕುಗಳ ರಕ್ಷಿಸುವಲ್ಲಿ ವಿಫಲವಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ಮೇಲೆ ಸವಾರಿ ಮಾಡುತ್ತಿವೆ. ಒಂಬತ್ತು ಷೆಡ್ಯೂಲ್ಗೆ ಸೇರಿಸುತ್ತಿಲ್ಲ. ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯ ಹಾಳಾಗುವುದರಲ್ಲಿ ಸಂದೇಹವಿಲ್ಲ ಎಂದರು.
ಲಿಂಗವ್ವನಾಗತಿಹಳ್ಳಿ ತಿಪ್ಪೇಸ್ವಾಮಿ, ಜಯಶ್ರಿಗುಡ್ಡೆಕಾಯಿ, ಬಾಬಣ್ಣ, ಡಾ.ಮಂಜುಳ, ನ್ಯಾಯವಾದಿ ಎಚ್.ಎಂ.ಎಸ್.ನಾಯಕ, ಡಾ.ರಾಮರಾಜ್, ಆನಂದ್, ಲಕ್ಷ್ಮಿಸಾಗರ ರಾಜಣ್ಣ ಇವರುಗಳು ಸಭೆಯಲ್ಲಿ ಭಾಗವಹಿಸಿದ್ದರು.




