ರಾಜ್ಯಕ್ಕೆ ಪ್ರಥಮ : ದಾವಣಗೆರೆ ಜಿಲ್ಲೆಯ 13 ಗ್ರಾಮಗಳಿಗೆ 24 × 7 ಶುದ್ಧ ಕುಡಿಯುವ ನೀರು

3 Min Read

 

ದಾವಣಗೆರೆ. ಜೂನ್.13: ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಜೆಜೆಎಂ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ 32 ಗ್ರಾಮಗಳು 24 × 7 ಶುದ್ಧ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದು, ಈ ಪೈಕಿ ದಾವಣಗೆರೆ ಜಿಲ್ಲೆಯಲ್ಲಿ 13 ಗ್ರಾಮಗಳು ಶುದ್ಧ ಹಾಗೂ ಸುರಕ್ಷಿತ ನೀರು ಒದಗಿಸುವ ಮೂಲಕ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ವಿಶ್ವಬ್ಯಾಂಕ್ ಟಾಸ್ಕ್ ಟೀಮ್ ಲೀಡರ್ ಮರಿಯಪ್ಪ ಕುಳ್ಳಪ್ಪ ಹೇಳಿದರು.

ನಗರದ ಮಹಾನಗರ ಪಾಲಿಕೆಯ ಡಾ.ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ಶುಕ್ರವಾರ “ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು” ಕುರಿತು ಏರ್ಪಡಿಸಲಾಗಿದ್ದ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

ಸಾರ್ವಜನಿಕರಿಗೆ, ಶ್ರಮಿಕರಿಗೆ ದಿನದ 24 ಗಂಟೆಯೂ ಸುಸ್ಥಿರ, ಸುರಕ್ಷಿತವಾದ ನೀರು ಪೂರೈಕೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಅಳವಡಿಸಲಾಗುತ್ತಿದೆ. ಇದರಿಂದ ನೀರು ಕಲುಷಿತವಾಗುವ, ಅನಗತ್ಯ ಪೆÇೀಲಾಗುವ ನೀರು ಹಾಗೂ ಇನ್ನಿತರೆ ಸಮಸ್ಯೆಗಳನ್ನು ತಪ್ಪಿಸುವ ದೃಷ್ಠಿಯಿಂದ 24*7 ಶುದ್ದ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಅಲ್ಲದೇ ಪ್ರತಿ 3-6 ತಿಂಗಳಿಗೊಮ್ಮೆ ನೀರಿನ ಮೌಲ್ಯವನ್ನು ಪರಿಶೀಲನೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು. ಈ ಯೋಜನೆಗೆ ವಿಶ್ವ ಬ್ಯಾಂಕ್ ಸುಮಾರು 3 ಸಾವಿರ ಕೋಟಿ ನೀಡಿದೆ. ಇಲ್ಲಿನ ಅಧಿಕಾರಿಗಳ ಸಹಕಾರದಿಂದ ಇಂದು 13 ಗ್ರಾಮಗಳಲ್ಲಿ ದಿನದ 24 ತಾಸು ನೀರು ಒದಗಿಸುವಂತಾಗಿದೆ ಎಂದರು.

ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಅಧಿಕಾರಿಗಳ ಸಮನ್ವಯತೆಯಿಂದ ಯಾವುದೇ ಸಮಸ್ಯೆಗಳಿಲ್ಲದೇ ಸರಾಗವಾಗಿ ಕೆಲಸ ಕಾರ್ಯಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ. ಬಹುತೇಕ ರೋಗಗಳು ನೀರಿನಿಂದಲೇ ಹರಡುತ್ತವೆ. ಆದ್ದರಿಂದ ತಮ್ಮ ಆರೋಗ್ಯ ಕಾಪಾಡುವ ದೃಷ್ಟಿಯಿಂದ ತಮಗೆ ಶುದ್ಧ ಹಾಗೂ ಸುರಕ್ಷಿತ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಹಿಂದೆ ಅಳವಡಿಸಲಾಗಿದ್ದ ಪಿವಿಸಿ ಪೈಪ್‍ನಲ್ಲಿನ ನೀರನ್ನು ನಿರಂತರ 5 ರಿಂದ 10 ವರ್ಷಗಳ ಕಾಲ ಸೇವನೆ ಮಾಡಿದಲ್ಲಿ ಕ್ಯಾನ್ಸರ್‍ನಂತಹ ಮಾರಕ ರೋಗಗಳಿಗೆ ತುತ್ತಾಗುವರು. ಈ ಹಿನ್ನಲೆಯಲ್ಲಿ ಹೆಚ್‍ಟಿಪಿ ಬ್ಲಾಕ್ ಪೈಪ್‍ಗಳನ್ನು ಅಳವಡಿಸಿ ಪ್ರತಿ ಗ್ರಾಮಗಳಿಗೂ ಶುದ್ಧ ಹಾಗೂ ಸುರಕ್ಷಿತ ನೀರು ಪೂರೈಕೆ ಮಾಡಲಾಗುತ್ತಿದೆ. ಇದು ದೀರ್ಘಕಾಲ ಬಾಳಿಕೆ ಬರುವುದಲ್ಲದೇ ಆರೋಗ್ಯಕ್ಕೂ ಪೂರವಾಗಿದೆ. ಹಾಗಾಗಿ ಪ್ರತಿಯೊಬ್ಬ ನಾಗರೀಕನೂ ಸಹಕರಿಸಿ ತಮ್ಮ ಗ್ರಾಮಗಳಲ್ಲಿ ಈ ಯೋಜನೆಯನ್ನು ಅಳವಡಿಸಿಕೊಂಡು ಇತರೆ ಗ್ರಾಮ ಪಂಚಾಯತಿಗಳಿಗೆ ಸ್ಫೂರ್ತಿಯಾಗುದರ ಜತೆಗೆ ಮಾದರಿಯಾಗಬೇಕು. ದೇಶ – ವಿದೇಶಗಳು ಸಹ ಜಿಲ್ಲೆ ಮತ್ತು ರಾಜ್ಯದ ಬಗ್ಗೆ ಕೊಂಡಾಡುವಂತೆ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಸುರೇಶ್ ಬಿ.ಇಟ್ನಾಳ್ ಮಾತನಾಡಿ, ಜೆಜೆಎಂ ಯೋಜನೆಯಡಿ ಎಲ್ಲಾ ಗ್ರಾಮಗಳಿಗೂ ಅಳವಡಿಸಿ 24*7 ನೀರು ಪೂರೈಕೆ ಗ್ರಾಮಗಳು ಎಂದು ಘೋಷಣೆ ಮಾಡುವುದು ಸಾಧನೆಯಲ್ಲ. ಘೋಷಣೆ ಮಾಡಿದ ಗ್ರಾಮಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವುದು ದೊಡ್ಡ ಸಾಧನೆ. ಆದ್ದರಿಂದ ಕನಸಿನ 100 ಗ್ರಾಮಗಳ ಘೋಷಣೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಸಲುವಾಗಿ ನಿಧಾನಗತಿಯಲ್ಲಿ ಸಾಗುತ್ತಿದೆ. ಜೆಜೆಎಂ ಅಳವಡಿಕೆಯಾದ ಗ್ರಾಮಗಳಲ್ಲಿ ನೀರಿನ ಬಳಕೆ ಪ್ರಮಾಣದ ಆಧಾರದ ಮೇಲೆ ಶುಲ್ಕ ವಿಧಿಸಿ. ಮಿತಿಗಿಂತಲೂ ಹೆಚ್ಚು ನೀರನ್ನು ಬಳಕೆ ಮಾಡಿದಲ್ಲಿ ಉದ್ದಿಮೆಗಳಿಗೆ ವಿಧಿಸುವಂತೆ ಶುಲ್ಕವನ್ನು ವಿಧಿಸಿ ಕಂದಾಯ ವಸೂಲಾತಿ ಮಾಡಬೇಕು. ಇದಕ್ಕೂ ಮೀರಿದ ಸಮಸ್ಯೆಗಳು ಗ್ರಾಮಗಳಲ್ಲಿ ತಲೆದೂರಿದಲ್ಲಿ ಚುನಾಯಿತ ಸದಸ್ಯರು ಅಧಿಕಾರಿಗಳು ಪರಿಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

ಅನಗತ್ಯವಾಗಿ ನೀರು ಮತ್ತು ವಿದ್ಯುತ್ ಪೆÇೀಲಾಗುವುದನ್ನು ತಪ್ಪಿಸಲು ಅಧಿಕಾರಿಗಳು, ಸಾರ್ವಜನಿಕರು, ನೀರಗಂಟಿಗಳು ಸಹ ಕೇವಲ ಒಂದು ದಿನ ಉತ್ಸಾಹಕರಾಗಿ ಕಾರ್ಯನಿರ್ವಹಿಸದೇ ನಿರಂತರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಅಲ್ಲದೇ ಕೆರೆ ಇನ್ನಿತರೆ ಜಲ ಮೂಲಗಳನ್ನು ಕಲುಷಿತಗೊಳಿಸದೇ ಶುದ್ಧೀಕರಿಸಿ ಜೀವ ಜಲವನ್ನು ಸಂರಕ್ಷಿಸಬೇಕು ಎಂದರು.

ಕಾರ್ಯಗಾರದಲ್ಲಿ ವಿಶ್ವಬ್ಯಾಂಕ್ ಟಾಸ್ಕ್ ಟೀಮ್ ಲೀಡರ್ ಕ್ರಿಸ್ಟೋಪರ್ ವಿಲಿಯಮ್ಸ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸರ್ಕಾರದ ಉಪಕಾರ್ಯದರ್ಶಿ ಜಾಫರ್ ಷರೀಪ್ ಸುತಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಭಿಯಂತರರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಸ್ವ-ಸಹಾಯ ಸಂಘದ ಸದಸ್ಯರು ಸೇರಿದಂತೆ ಮತ್ತಿರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks