ಬೆಂಗಳೂರು; ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಕುಟುಂಬಸ್ಥರ ವಿರುದ್ಧ ಭೂ ಒತ್ತುವರಿಯ ಗಂಭೀರ ಆರೋಪ ಕೇಳಿ ಬಂದಿತ್ತು. ಭೂ ಒತ್ತುವರಿ ತೆರವು ಮಾಡುವಂತೆವಹೈಕೋರ್ಟ್ ಸರ್ಕಾರಕ್ಕೆ ಚಾಟಿ ಬೀಸಿತ್ತು. ಈ ಹಿನ್ನೆಲೆ ಇಂದು ಕಂದಾಯ ಇಲಾಖೆ ಹಾಗೂ ಸರ್ವೆ ಇಲಾಖೆಯ ಜಂಟಿ ಸರ್ವೇಯಲ್ಲಿ ಇಂದಿನಿಂದ ತೆರವು ಕಾರ್ಯಾಚರಣೆ ಆರಂಭವಾಗಿದೆ. ಬಿಡದಿ ಕೇತಗಾನಹಳ್ಳಿಯ ಸರ್ವೇ ನಂಬರ್ 7,8,9,10,16,17 ಹಾಗೂ 79ರ ಸರ್ವೇ ಕಾರ್ಯ ನಡೆಸಿದ್ದ ಅಧಿಕಾರಿಗಳು ಇದರಲ್ಲಿ 14 ಎಕರೆಗೂ ಹೆಚ್ಚು ಒತ್ತುವರಿ ಆಗಿರುವ ಬಗ್ಗೆ ವರದಿ ನೀಡಿದ್ದರು.

ಅದರಲ್ಲಿ ಕುಮಾರಸ್ವಾಮಿ ಒಡೆತನದ ಸರ್ವೇ ನಂಬರ್ 7 ಹಾಗೂ 8 ಸೇರಿ 14 ಎಕರೆಗೂ ಹೆಚ್ಚು ಭೂಮಿ ಒತ್ತುವರಿ ಆಗಿದೆ. ಇಂದು ಜಿಲ್ಲಾಧಿಕಾರಿ ಯಶವಂತ ವಿ.ಗುರುಕರ್ ನೇತೃತ್ವದಲ್ಲಿ ಕುಮಾರಸ್ವಾಮಿ ಅವರ ತೋಟದ ಮನೆಯನ್ನು ಸರ್ವೇ ಮಾಡಿದರು. ಕೋರ್ಟ್ ಆದೇಶದಂತೆ ಒತ್ತುವರಿ ತೆರವು ಮಾಡಿ, ಕೋರ್ಟ್ ಗೆ ವರದಿ ನೀಡುತ್ತೇವೆ ಎಂದಿದ್ದಾರೆ.

ಈ ಬಗ್ಗೆ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದು, ಇದು 40 ವರ್ಷಗಳ ಹಿಂದೆ ಕಾನೂನು ಬದ್ಧವಾಗಿ ನಾನು ತೆಗೆದುಕೊಂಡಿರುವ ಜಮೀನು. ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡುತ್ತೇನೆ. ನಾನು ನನ್ನ ಜೀವನದಲ್ಲಿ ಯಾವುದೇ ಅಕ್ರಮಗಳಿಗೆ ಎಡೆ ಮಾಡಿಕೊಟ್ಟಿಲ್ಲ. ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಆದರೆ ಈ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ನಾನೇ ಟಾರ್ಗೆಟ್. ನನ್ನ ಬಿಟ್ಟರೆ ಬೇರೆ ಯಾರೂ ಇಲ್ಲ. 40 ವರ್ಷಗಳ ಹಿಂದೆ ತೆಗೆದುಕೊಂಡ ಭೂಮಿಗೆ ನೂರು ಬಾರಿ ತನಿಖೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

