ಭದ್ರೆಗಾಗಿ ರೈತರ ಪಾದಯಾತ್ರೆ : ಹೂಮಳೆ ಸುರಿಸಿ ಸ್ವಾಗತಿಸಿದ ನೀರಾವರಿ ಹೋರಾಟ ಸಮಿತಿ

2 Min Read

ಸುದ್ದಿಒನ್, ಚಿತ್ರದುರ್ಗ, ಫೆ.13: ಭದ್ರಾ ಮೇಲ್ದಂಡೆ ಯೋಜನೆಗಾಗಿ ಮೂರು ದಿಕ್ಕುಗಳಿಂದ ಜಿಲ್ಲೆ ಪ್ರವೇಶಿಸುತ್ತಿದ್ದ ರೈತಸಂಘದ ಪಾದಯಾತ್ರೆಯನ್ನು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಂಚಾಲಕರು, ಪದಾಧಿಕಾರಿಗಳು ಶುಕ್ರವಾರ ಬೆಳಗ್ಗೆ ಸ್ವಾಗತ ಮಾಡಿಕೊಂಡರು.

ಈಚಘಟ್ಟದ ಸಿದ್ದವೀರಪ್ಪ ನೇತೃತ್ವದಲ್ಲಿ ಆಗಮಿಸುತ್ತಿದ್ದ ಪಾದಯಾತ್ರೆಯನ್ನು ಜಾನಕೊಂಡ ಬಳಿ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ರೈತರ ಮೇಲೆ ಹೂವಿನ ಮಳೆ ಸುರಿಸಿ ಚಳವಳಿಗಾರರನ್ನು ಗೌರವಿಸಿದರು. ಪತ್ರಕರ್ತರು, ಜಿಲ್ಲಾ ನೀರಾವರಿ
ಹೋರಾಟ ಸಮಿತಿ ಸಂಚಾಲಕರು, ಪದಾಧಿಕಾರಿಗಳು ಹೂವಿನ ಮಳೆ ಸುರಿಸಿ ಸ್ವಾಗತಿಸಿದ್ದಕ್ಕೆ ಪಾದಯಾತ್ರೆಗಳು ಭಾವುಕರಾದರು. ನಿಮ್ಮಗಳ ಬೆಂಬಲ ಸದಾ ಇರಲಿ. ನಾವೆಲ್ಲರೂ ಒಗ್ಗೂಡಿ ಜಿಲ್ಲೆಯ ರೈತರ ಋಣ ತೀರಿಸೋಣಾ. ಪ್ರತಿಯೊಬ್ಬ ರೈತರ ಭೂಮಿಗೆ ನೀರು ಹರಿಯುವವರೆಗೂ ವಿರಮಿಸುವುದಿಲ್ಲವೆಂದು ಪ್ರತಿಜ್ಞೆ ಮಾಡಿದರು.

ಸಮಿತಿ ಸಂಚಾಲಕರು ಮಾತನಾಡಿ, ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ 1997ರಲ್ಲಿ ಅಸ್ಥಿತ್ವಕ್ಕೆ ಬಂದ ದಿನದಿಂದಲೂ ಜಿಲ್ಲೆಯ ರೈತಸಂಘ, ಕಾರ್ಮಿಕ, ಕನ್ನಡಪರ ಸೇರಿ ವಿವಿಧ ಸಂಘಟನೆಗಳು ಮುಂಚೂಣಿಯಲ್ಲಿ ನಿಂತು ಚಳವಳಿಯನ್ನು ಮುನ್ನಡೆಸಿವೆ ಎಂದು ಸ್ಮರಿಸಿದರು.

 

ಹೋರಾಟದ ಫಲವೇ ಯೋಜನೆ ಜಾರಿಗೊಂಡಿದೆ. ಆದರೆ, ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದು ಆತಂಕ ತಂದಿದೆ. ಅದನ್ನು ಚುರುಕುಗೊಳಿಸುವಂತೆ ಒತ್ತಡ ತರಲು ರೈತಸಂಘ ಹಮ್ಮಿಕೊಂಡಿರುವ ಪಾದಯಾತ್ರೆ, ಬಹಿರಂಗ ಸಮಾವೇಶ ಅತ್ಯಂತ ಸೂಕ್ತ ನಿರ್ಧಾರವಾಗಿದೆ
ಎಂದರು.

 

ಸರ್ಕಾರದ ಮಟ್ಟದಲ್ಲಿ ಸಚಿವರು, ಮುಖ್ಯಮಂತ್ರಿಯೊಂದಿಗೆ ಸಭೆ ನಡೆಸಿ, ಸಮಾವೇಶ, ಸಭೆ,
ಪ್ರತಿಭಟನೆಗಳ ಮೂಲಕ ಯೋಜನೆ ಜಾರಿಗೆ ಶ್ರಮಿಸಿದ ಜಿಲ್ಲಾ ನೀರಾವರಿ ಹೋರಾಟ ಸಮಿತಿಯ
ಬುನಾದಿಯೇ ರೈತಸಂಘ, ಕಾರ್ಮಿಕ ಸಂಘಟನೆಗಳು. ಮುಂದಿನ ದಿನಗಳಲ್ಲಿ ವಿವಿಧ ಹಂತದ ಹೋರಾಟ
ಮೂಲಕ ಕೇಂದ್ರ-ರಾಜ್ಯ ಸರ್ಕಾರ ಭದ್ರಾ ಯೋಜನೆಗೆ ಅನುದಾನ ನೀಡುವ ರೀತಿ ಒತ್ತಡ ತರುವ
ಕೆಲಸ ಒಗ್ಗೂಡಿ ಮಾಡೋಣಾ ಎಂದರು.

 

ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ, ಭದ್ರಾ ಮೇಲ್ದಂಡೆ
ಯೋಜನೆಗೆ ನಾವು ಯಾರೂ ಹಣ ಕೊಡಿ ಎಂದು ಕೇಂದ್ರ ಸರ್ಕಾರಕ್ಕೆ ಕೇಳಿರಲಿಲ್ಲ. ಅವರೇ 5,300 ಕೋಟಿ ರೂ. ಬಜೆಟ್‌ನಲ್ಲಿ ಘೋಷಿಸಿದ್ದರು. ಆದರೆ, ಈಗ ರಾಜ್ಯ ಸರ್ಕಾರದ ಮೇಲಿನ ದ್ವೇಷಕ್ಕೆ ಹಣ ಬಿಡುಗಡೆ ಮಾಡದೆ ನಾಟಕ ಆಡಿದ್ರೆ ಹೇಗೆ ಎಂದು ಪ್ರಶ್ನಿಸಿದರು.

 

ರಾಜ್ಯ ಸರ್ಕಾರ ಕೂಡ ಕೇಂದ್ರದತ್ತ ಬೊಟ್ಟು ತೋರಿಸಿ ತನ್ನ ಜವಾಬ್ದಾರಿಯಿಂದ ನುಣಚಿಕೊಳ್ಳುವ ಕೆಲಸ ಮಾಡುತ್ತಿದೆ. ಈ ಎರಡು ಸರ್ಕಾರಗಳಿಗೆ ಚಳವಳಿ ಮೂಲಕ ಬಿಸಿ
ಮುಟ್ಟಿಸಿ ಹಣ ತರುವ ಶಕ್ತಿ ರೈತಸಂಘ-ಜಿಲ್ಲಾ ನೀರಾವರಿ ಹೋರಾಟ ಸಮಿತಿಗೆ ಇದೆ. ಅದನ್ನು
ಮಾಡಿಯೇ ತಿರುತ್ತೇವೆ. ನಾವು ಭಿಕ್ಷೆ ಬೇಡುತ್ತಿಲ್ಲ, ನಮ್ಮ ಹಕ್ಕೋತ್ತಾಯ ಮಂಡಿಸುತ್ತಿದ್ದೇವೆ ಎಂದರು.

 

ಸಂಚಾಲಕರಾದ ಚಳ್ಳಕೆರೆ ಬಸವರಾಜ್, ನರೇನಹಳ್ಳಿ ಅರುಣ್‌ಕುಮಾರ್, ಜೋಗಿಮಟ್ಟಿ
ಮಹೇಶಬಾಬು, ಪತ್ರಕರ್ತರಾದ ಎಚ್.ಲಕ್ಷ್ಮಣ್ ಶ್ರೀನಿವಾಸ ನಾಯ್ಕ್ ಇತರರಿದ್ದರು.

Share This Article
Enable Notifications OK No thanks