
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 13 : ತುಮಕೂರಿನಲ್ಲಿ ನಡೆದ ‘ಜನತಾದರ್ಶನ’ ಕಾರ್ಯಕ್ರಮದಲ್ಲಿ ಅಹವಾಲು ಸಲ್ಲಿಸಲು ಬಂದಿದ್ದ ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ನಾಯಕರ ಮೇಲೆ ಪೊಲೀಸರು ದೌರ್ಜನ್ಯ ಎಸಗಿ, ಸುಳ್ಳು ಎಫ್ಐಆರ್ ದಾಖಲಿಸಿರುವುದನ್ನು ಖಂಡಿಸಿ ಇಂದು ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕೇಂದ್ರದಲ್ಲಿ ಪಕ್ಷದ ರಾಜ್ಯ ಕಾರ್ಯನಿರ್ವಕ ಸಮಿತಿ ಸದಸ್ಯರಾದ ಮಹೇಶ್ ನಗರಂಗೆರೆ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಗೃಹ ಸಚಿವ ಜಿ. ಪರಮೇಶ್ವರ್ ಅವರ ಸೂಚನೆಯ ಮೇರೆಗೆ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಸೋಮಸುಂದರ್ ಕೆ.ಎಸ್. ಹಾಗೂ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ ಭಟ್ಟರಹಳ್ಳಿ ಸೇರಿದಂತೆ ಇತರ ನಾಯಕರ ಮೇಲೆ ರಾಜಕೀಯ ದ್ವೇಷದಿಂದ ಪ್ರಕರಣ ದಾಖಲಿಸಿರುವುದಾಗಿ ಪಕ್ಷವು ಈ ಸಂದರ್ಭದಲ್ಲಿ ಗಂಭೀರವಾಗಿ ಆರೋಪಿಸಿದೆ.
ವೈಯಕ್ತಿಕ ಮನವಿ ಸಲ್ಲಿಕೆಯ ವಿಶೇಷತೆ:
ಯಾವುದೇ ರಸ್ತೆ ತಡೆ ಅಥವಾ ಧರಣಿ ನಡೆಸಿ ಸಾರ್ವಜನಿಕರಿಗೆ ತೊಂದರೆ ನೀಡದೆ, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶಿಸ್ತುಬದ್ಧವಾಗಿ ತೆರಳಿ, ಸ್ಥಳೀಯ ಜಿಲ್ಲಾಧಿಕಾರಿಗಳ/ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ವೈಯಕ್ತಿಕವಾಗಿ ಮನವಿ ಪತ್ರಗಳನ್ನು ಸಲ್ಲಿಸಿದರು.
ಮನವಿಯಲ್ಲಿ ಎತ್ತಲಾದ ಪ್ರಮುಖ ಪ್ರಶ್ನೆಗಳು:
ಮನವಿ ಪತ್ರದ ಮೂಲಕ ಸರ್ಕಾರವನ್ನು ಪ್ರಶ್ನಿಸಿರುವ ಕಾರ್ಯಕರ್ತರು:

ಸಾರ್ವಜನಿಕರ ಅಹವಾಲು ಸಲ್ಲಿಸಲು ಬಂದವರ ವಿರುದ್ಧವೇ ಪ್ರಕರಣ ದಾಖಲಿಸುವುದು ಪ್ರಜಾಪ್ರಭುತ್ವಕ್ಕೆ ವಿರೋಧವಲ್ಲವೇ?
ಸಾರ್ವಜನಿಕ ಸ್ಥಳದಲ್ಲಿ ವಿಡಿಯೋ ಮಾಡುವುದು ಕಾನೂನುಬಾಹಿರವೇ?
ಬಿಎನ್ಎಸ್ (BNS) ಪ್ರಕಾರ ಪ್ರಾಥಮಿಕ ತನಿಖೆಗೆ ಅವಕಾಶವಿದ್ದರೂ, ಕಿಂಚಿತ್ತೂ ತನಿಖೆ ನಡೆಸದೆ ತುರ್ತಾಗಿ ಕ್ರಮ ಕೈಗೊಂಡಿದ್ದರ ಹಿಂದಿನ ಮರ್ಮವೇನು?
ಮಹಿಳಾ ಪೊಲೀಸರ ಮೂಲಕ ದೂರು ದಾಖಲಿಸುವ ತಂತ್ರದ ಹಿಂದೆ ಇರುವ ಉದ್ದೇಶವೇನು?
ಪ್ರಕರಣ ಹಿಂಪಡೆಯಲು ಆಗ್ರಹ:
ಸೋಮಸುಂದರ್ ಕೆ.ಎಸ್., ಜ್ಞಾನ ಸಿಂಧು ಸ್ವಾಮಿ ಹಾಗೂ ಮಲ್ಲಿಕಾರ್ಜುನಯ್ಯ ಭಟ್ಟರಹಳ್ಳಿ ಅವರ ವಿರುದ್ಧ ದಾಖಲಾಗಿರುವ ಸುಳ್ಳು ಪ್ರಕರಣಗಳನ್ನು ಸರ್ಕಾರವು ತಕ್ಷಣವೇ ಹಿಂಪಡೆಯಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸುವುದಾಗಿ ಕೆಆರ್ಎಸ್ ಪಕ್ಷ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಪದಾಧಿಕಾರಿಗಳಾದ ಮಾರುತಿ ಸಿಎನ್ ರಾಜ್ಯ ಕಾರ್ಯದರ್ಶಿ ( Sc/St) ಬಾಲರಾಜ್ ಎಸ್ ಎನ್ ದೇವರಹಳ್ಳಿ , ಜಬಿವುಲ್ಲಾ ಚಳ್ಳಕೆರೆ ತಾಲೂಕು ಉಪಾಧ್ಯಕ್ಷರು, ಕೆಂಚಪ್ಪ ನಾಯಕ ಹೊಸದುರ್ಗ ತಾಲೂಕು ಅಧ್ಯಕ್ಷರು, ಆನಂದ್ ಹೊಳಲ್ಕೆರೆ ಪ್ರಧಾನ ಕಾರ್ಯದರ್ಶಿ, ಪುಟ್ಟಮ್ಮ ಹಿರಿಯೂರು ಚಿತ್ರದುರ್ಗಾ ತಾಲೂಕು ಪದಾಧಿಕಾರಿಗಳಾದ ನಾಗರಾಜ್ JN ಕೋಟೆ, ಶಂಕ್ರಣ್ಣ ತೌಸಿಫ್ , ಮುಸ್ತಾಕ್ ಅಹಮದ್, ತಿಮ್ಮರಾಜು, ಅಲ್ಲಾಬಕಾಷ್, ಕೆಂಚಪ್ಪ, ತಿಪ್ಪೇಸ್ವಾಮಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.














