ಬೆಂಗಳೂರು: ಆರೋಗ್ಯ ಇಲಾಖೆಯಿಂದ ಅಬಕಾರಿ ಇಲಾಖೆಗೆ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದಾರೆ ಎಂಬ ಪತ್ರವೊಂದು ವೈರಲ್ ಅಗಿತ್ತು. ಅದರಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸಹಿ ಬಿಟ್ಟರೆ ಬೇರೆ ಏನು ಇರಲಿಲ್ಲ. ಅಧಿಕೃತವಾದ ಪತ್ರದಲ್ಲಿ ಇರಬೇಕಾದದ್ದು ಇರಲಿಲ್ಲ. ಆದರೆ ಈ ಪತ್ರವನ್ನ ಹಂಚಿಕೊಂಡ ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಇದೀಗ ಯಾರೆಲ್ಲಾ ಆ ಪತ್ರವನ್ನ ಹಂಚಿಕೊಂಡ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಶಾಸಕ ಸುನಿಲ್ ಕುಮಾರ್, ಪರಿಷತ್ ಸದಸ್ಯ ರವಿಕುಮಾರ್ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ದೂರು ಸಲ್ಲಿಸುತ್ತಿದ್ದೇನೆ ಎಂದು ಕಾಂಗ್ರೆಸ್ ಎಂಎಲ್ಸಿ, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು ನೀಡಿರುವಂತ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಪ್ರಸಾರವಾಗಿರುವ ಪತ್ರವು ಸಂಪೂರ್ಣ ಕೃತಕ ಹಾಗೂ ದುರುದ್ದೇಶದಿಂದ ಕೂಡಿರುತ್ತದೆ. ದಿನಾಂಕ ಇಲ್ಲದ 2024ರ ಸಂಖ್ಯೆ ಇಲ್ಲದ ಪತ್ರ ಸೃಷ್ಟಿ ಮಾಡಿ ಅಪಪ್ರಚಾರ ಮೂಲಕ ವ್ಯಕ್ತಿತ್ವಕ್ಕೆ ಮಸಿ ಬಳಿದು ಚಾರಿತ್ರ್ಯ ಹರಣ ಮಾಡುವ ಕೆಲಸ ಮಾಡಿ ಅಪರಾಧ ಎಸಗಿರುತ್ತಾರೆ.
ಇವರ ದುರುದ್ದೇಶ ಆಗಿದೆ. ದಯವಿಟ್ಟು ಸಂಬಂಧಪಟ್ಟ ಶಾಸಕ ಮತ್ತು ವಿಧಾನ ಪರಿಷತ್ ಸದಸ್ಯರ ವಿರುದ್ಧ ತಕ್ಷಣ ಎಫ್ಐಆರ್ ದಾಖಲಿಸಲು, ಸಂಬಂಧಿತ ಬಿಎನ್ಎಸ್ ಕಲಂಗಳನ್ನು ಅನ್ವಯಿಸಲು, ನಕಲಿ ಪತ್ರದ ಫೊರೆನ್ಸಿಕ್ ಪರಿಶೀಲನೆ ನಡೆಸಲು ಸಾಮಾಜಿಕ ಜಾಲತಾಣಗಳಲ್ಲಿ ಮೂಲ ಮೂಲವನ್ನು ಪತ್ತೆಹಚ್ಚಲು, ಮುಂದಿನ ಪ್ರಸಾರ ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ. ಹೀಗಾಗಿ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದೆ.


