ಮಕ್ಕಳನ್ನ ಆಕ್ಟೀವ್ ಇಟ್ಟುಕೊಳ್ಳಬೇಕು ಎಂಬ ಕಾರಣಕ್ಕೆ ಶಿಕ್ಷಣ ಇಲಾಖೆ ಆಗಾಗ ಹೊಸ ಹೊಸ ಯೋಜನೆಗಳನ್ನ ಕಾರ್ಯರೂಪಕ್ಕೆ ತರ್ತಾ ಇರುತ್ತೆ. ಹಾಗೇ ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ 1-3ನೇ ತರಗತಿಯವರೆಗೆ ನಲಿ ಕಲಿ ಯೋಜನೆಯನ್ನು ಜಾರಿ ಮಾಡಿದೆ. ಆದರೆ ಅದರ ಉದ್ದೇಶ ಈಗ ವಿಫಲವಾಗಿದೆ. ಈ ಸಂಬಂಧ ವರದಿಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸಲ್ಲಿಸಲಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರ ನೇತೃತ್ವದಲ್ಲಿ ವರದಿಯನ್ನು ಮಧು ಬಂಗಾರಪ್ಪ ಅವರಿಗೆ ಸಲ್ಲಿಸಲಾಗಿದೆ. 1990 ರ ಆನಂತರ ತೀವ್ರವಾಗಿ ಕಾಣಿಸಿಕೊಂಡ ಜಾಗತೀಕರಣವೂ ಇದೀಗ ಕರ್ನಾಟಕದ ಶಿಕ್ಷಣ ಪದ್ಧತಿಯ ಮೇಲೆ ನಿರ್ಣಾಯಕ ಪರಿಣಾಮ ಬೀರುತ್ತಿದೆ. ಮಾರುಕಟ್ಟೆ ಕೇಂದ್ರಿತವಾದ ಜಾಗತೀಕರಣವೂ ರಾಷ್ಟ್ರಗಳು, ವ್ಯವಹಾರಗಳು ಮತ್ತು ವ್ಯಕ್ತಿಗಳು ಸಂಪರ್ಕ ಸಾಧಿಸುವ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸುವುದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಆರ್ಥಿಕ, ಸಾಂಸ್ಕೃತಿಕ ಮತ್ತು ತಾಂತ್ರಿಕ ಏಕೀಕರಣವನ್ನು ಬೆಳೆಸಿದೆ.
ಈ ಬಗೆಯ ಬೆಳವಣಿಗೆಗಳು ಭಾಷೆಗಳ ನಾಶ, ಸಣ್ಣ ಸಮುದಾಯಗಳ ಪತನ, ಪರಿಸರ ನಾಶ ಮತ್ತು ಆರ್ಥಿಕ ಅಸಮಾನತೆಗಳಂತಹ ಭೀಕರ ಸವಾಲುಗಳನ್ನು ನಮ್ಮ ಮುಂದಿಟ್ಟಿದೆ. ಇಂಥ ಸಂದರ್ಭದಲ್ಲಿ ಕನ್ನಡದಂಥ ಭಾಷೆಯೊಂದನ್ನ ಮಕ್ಕಳಿಗೆ ಕಲಿಸುವುದು ಹೇಗೆ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿತ್ತು. ಇದಕ್ಕೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವೂ ಬಗೆ ಬಗೆಯ ಯೋಜನೆಗಳನ್ನು ಕಾಲ ಕಾಲಕ್ಕೆ ಅನುಷ್ಠಾನಕ್ಕೆ ತಂದಿದೆ. ಅದರಲ್ಲಿ ನಲಿ ಕಲಿ ಯೋಜನೆಯೂ ಒಂದು. 1995-96ನೇ ಸಾಲಿನಲ್ಲಿ ಮೈಸೂರಿನ ಹೆಗ್ಗಡದೇವನ ಕೋಟೆಯಲ್ಲಿ ಪ್ರಾಯೋಗಿಕವಾಗಿ ಆರಂಭಗೊಂಡ ಈ ಯೋಜನೆಯು 2010-11ಕ್ಕೆ ರಾಜ್ಯದ ಎಲ್ಲಾ ಸರ್ಕಾರ ಕನ್ನಡ ಮಾಧ್ಯಮ ಶಾಲೆಗಳಿಗೆ ವಿಸ್ತರಣೆಗೊಂಡಿತು.


