ಸುದ್ದಿಒನ್, ಮೈಸೂರು, ಡಿಸೆಂಬರ್. 25 : ಅದ್ಯಾಕೋ ಇವತ್ತಿನ ದಿನವೇ ಸರಿಯಿಲ್ಲ. ಬೆಳಿಗ್ಗೆ ಚಿತ್ರದುರ್ಗದಲ್ಲಿ ಭೀಕರ ಬಸ್ ದುರಂತ, ರಾತ್ರಿ ಮೈಸೂರಿನಲ್ಲಿ ಸ್ಪೋಟವಾಗಿದೆ. ಮೈಸೂರು ಅಂಬಾ ವಿಲಾಸ ಅರಮನೆಯ ಹೊರಗೆ ಗುರುವಾರ ಸ್ಫೋಟ ಸಂಭವಿಸಿದ್ದು, ಒಬ್ಬ ವ್ಯಕ್ತಿ ಸಾವನ್ನಪ್ಪಿ, ನಾಲ್ವರು ಗಾಯಗೊಂಡಿದ್ದಾರೆ.
ಅರಮನೆಯ ಮುಂಭಾಗದ ಜಯಚಾಮರಾಜೇಂದ್ರ ಗೇಟ್ನ ಬಳಿ ಈ ಘಟನೆ ನಡೆದಿದೆ. ಇಲ್ಲಿ ಓರ್ವ ಹೀಲಿಯಂ ಬಲೂನು ಮಾರಾಟ ಮಾಡುತ್ತಿದ್ದರು. ಸೈಕಲ್ನಲ್ಲಿ ಬಲೂನ್ ಮಾರುತ್ತಿದ್ದಾಗ ಬಲೂನ್ ಗೆ ಗ್ಯಾಸ್ ತುಂಬುವಾಗ ರಾತ್ರಿ 8.30 ರ ವೇಳೆಗೆ ಸಿಲಿಂಡರ್ ಸ್ಪೋಟವಾಗಿದೆ. ಬಲೂನ್ ಮಾರುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ’ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು.
ಮೃತರ ಗುರುತು ಪತ್ತೆಯಾಗಿಲ್ಲ. ಆದರೆ ಅಲ್ಲಿದ್ದ ನಾಲ್ವರಿಗೂ ಗಾಯಗಳಾಗಿವೆ. ಗಾಯಾಳುಗಳನ್ನು ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಲಕ್ಷ್ಮಿ, ನಂಜನಗೂಡಿನ ಮಂಜುಳಾ, ಕಲ್ಕತಾದ ಶಮಿನಾ ಶಬಿಲ್, ರಾಣಿ ಬೆನ್ನೂರಿನ ಕೊಟ್ರೇಶ್ ಎಂದು ಗುರುತಿಸಲಾಗಿದೆ.
ಘಟನೆ ಸಂಭವಿಸುತ್ತಿದ್ದಂತೆ ಮೈಸೂರಿನ ಕೃಷ್ಣರಾಜ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೆಲ ಕ್ಷಣಗಳ ಕಾಲ ಈ ಭಾಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅವಘಡದಲ್ಲಿ ಗಾಯಗೊಂಡಿರುವವರನ್ನು ಸ್ಥಳೀಯರ ನೆರವಿನೊಂದಿಗೆ ಕೆ.ಆರ್ ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

