ಕನ್ನಡದ ಬಗ್ಗೆ ಪ್ರತಿಯೊಬ್ಬರು ಅಭಿಮಾನವಿಟ್ಟುಕೊಳ್ಳಬೇಕು : ಬಿ.ಕೆ.ರಹಮತ್‍ವುಲ್ಲಾ

1 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 30 : ಕನ್ನಡದ ಬಗ್ಗೆ ಪ್ರತಿಯೊಬ್ಬರು ಅಭಿಮಾನವಿಟ್ಟುಕೊಳ್ಳಬೇಕು. ಎಂಟು ಜ್ಞಾನಪೀಠ ಪ್ರಶಸ್ತಿ ಕನ್ನಡಕ್ಕೆ ದೊರಕಿದೆ. ಬೇರೆ ಯಾವ ಭಾಷೆಗೂ ಇಷ್ಟೊಂದು ಪ್ರಶಸ್ತಿ ಸಿಕ್ಕಿಲ್ಲ ಎಂದು ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ತಿಳಿಸಿದರು.

ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿಯಿಂದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೊಳಗೇರಿ ನಿವಾಸಿಗಳಿಗೆ, ನಗರದ ಬಡವರಿಗೆ ಹೊದಿಕೆ ವಿತರಣೆ ಹಾಗೂ ಕನ್ನಡ ರಾಜ್ಯೋತ್ಸವ ಉದ್ಗಾಟಿಸಿ ಮಾತನಾಡಿದರು.

ಹರಿದು ಹಂಚಿ ಹೋಗಿದ್ದ ಪ್ರದೇಶವನ್ನು ಒಟ್ಟುಗೂಡಿಸುವಲ್ಲಿ ಅನೇಕ ಹಿರಿಯರ ಪರಿಶ್ರಮವಿದೆ. ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿಕೊಳ್ಳುವುದು ಎಲ್ಲರ ಕರ್ತವ್ಯ. ಪ್ರತಿಯೊಬ್ಬರು ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಯನ್ನು ಗೌರವಿಸಬೇಕು. ಕನ್ನಡ ನಾಡಿನಲ್ಲಿ ನಾನಾ ಜಾತಿ, ಧರ್ಮದವರಿದ್ದಾರೆ. ಮನೆಯಲ್ಲಿ ಅವರವರ ಭಾಷೆ ಮಾತನಾಡಿಕೊಳ್ಳಲಿ. ಹೊರಗೆ ಬಂದಾಗ ಎಲ್ಲರೂ ಕನ್ನಡಿಗರು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು.
ಕೊಳಗೇರಿ ನಿವಾಸಿಗಳು ಬಡತನವನ್ನು ಮುಂದಿಟ್ಟುಕೊಂಡು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಬೇಡಿ. ಕಡ್ಡಾಯವಾಗಿ ಶಾಲೆಗೆ ಕಳಿಸಿ ಎಂದು ಮನವಿ ಮಾಡಿದರು.

ಉದ್ಯಮಿ ಸೈಟ್ ಬಾಬಣ್ಣ ಮಾತನಾಡಿ ಮೊದಲಿನಿಂದ ಕೊಳಗೇರಿ ನಿವಾಸಿಗಳ ಪರವಾಗಿ ಹೋರಾಡುತ್ತಿರುವ ಗಣೇಶ್‍ರವರ ಸೇವೆ ಅನನ್ಯ. ಇಂತಹವರನ್ನು ನಗರಸಭೆ ಚುನಾವಣೆಯಲ್ಲಾದರೂ ಗೆಲ್ಲಿಸಬೇಕು. ಆಗ ಇನ್ನು ಹೆಚ್ಚಿನ ಸೇವೆ ಸಲ್ಲಿಸಲು ಅನುಕೂಲವಾಗುತ್ತದೆ. ನಗರದಲ್ಲಿ ಯಾವುದಾದರೂ ಒಂದು ಕೊಳಗೇರಿಯನ್ನು ದತ್ತು ಪಡೆದುಕೊಂಡು ಅಲ್ಲಿನ ಮಕ್ಕಳಿಗೆ ಶಿಕ್ಷಣ ಕೊಡಿಸೋಣ ಎಂದರು.

ಬಡಗಿ ಕೆಲಸಗಾರರ ಸಂಘದ ಅಧ್ಯಕ್ಷ ಎ.ಜಾಕೀರ್‍ಹುಸೇನ್, ಎನ್.ರಂಗಸ್ವಾಮಿ, ಇಮಾಂಸಾಬ್, ಮೈಲಾರಪ್ಪ, ಸಬೀನಾಜಾನ್, ಲೀಲಾವತಿ ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.

Share This Article