ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್. 22 : ಬುದ್ದ, ಬಸವ, ಅಂಬೇಡ್ಕರ್, ಪೈಗಂಬರ್ರವರನ್ನು ಪ್ರತಿಯೊಬ್ಬರು ಸ್ಮರಿಸಿಕೊಂಡಾಗ ಸಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಲೇಖಕ ಹೆಚ್.ಆನಂದ್ಕುಮಾರ್ ತಿಳಿಸಿದರು.
ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದಿಂದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಬಂಜಾರ(ಲಂಬಾಣಿ) ಜಾತಿಯೊಂದಿಗೆ ಸೋದರ ಜಾತಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜ ಒಡಕಿನತ್ತ ಸಾಗುತ್ತಿದೆ. ಒಂದು ಜಾತಿ ಧರ್ಮದವರ ಎದುರು ಮತ್ತೊಂದು ಜಾತಿ ಧರ್ಮವನ್ನು ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ. ಇದರಿಂದ ದೇಶದ ಶಾಂತಿಗೆ ಧಕ್ಕೆಯಾಗಲಿದೆ. ಜಾತ್ಯಾತೀತ ಭಾರತ ನಮ್ಮದು. ಎಲ್ಲರೂ ಸಹೋದರರಂತೆ ಬದುಕಬೇಕಿದೆ. ಡಾ.ಬಿ.ಆರ್. ಅಂಬೇಡ್ಕರ್ ಚಿಕ್ಕಂದಿನಿಂದಲೇ ಅಪಮಾನ, ನೋವು, ಹಿಂಸೆಯನ್ನು ಅನುಭವಿಸಿದ್ದರಿಂದ ಸಂವಿಧಾನ ರಚಿಸಿ ದೇಶಕ್ಕೆ ಕೊಡುಗೆಯಾಗಿ ನೀಡಲು ಸಾಧ್ಯವಾಯಿತು. ಮೂಲಭೂತವಾದಿಗಳು ದೇಶಕ್ಕೆ ಅಪಾಯಕಾರಿಯಾಗಿರುವುದರಿಂದ ಶಿಕ್ಷಣದ ಮೂಲಕ ಪ್ರತಿಯೊಬ್ಬರು ಜಾಗೃತರಾಗಬೇಕಿದೆ ಎಂದರು.
ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ಗಿರೀಶ್ನಾಯ್ಕ ಆರ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಸಂವಿಧಾನಬದ್ದವಾಗಿ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ ಹಿಂದುಳಿದವರು ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಒತ್ತು ಕೊಡಬೇಕು. ಡಾ.ಬಿ.ಆರ್.ಅಂಬೇಡ್ಕರ್ರವರು ಸಂವಿಧಾನದಲ್ಲಿ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ, ಸಮಾನತೆಯನ್ನು ಕಲ್ಪಿಸಿದ್ದಾರೆ. ಕುಲಗುರು ಸಂತ ಸೇವಾಲಾಲ್ ಹಾಗೂ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರವರ ಆದರ್ಶ, ಚಿಂತನೆಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕಂದು ಕರೆ ನೀಡಿದರು.
ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಮಾತನಾಡಿ ಭಾರತ ಭಾವೈಕ್ಯತೆಗೆ ಹೆಸರುವಾಸಿಯಾಗಿರುವ ದೇಶ.
ರಾಜಮಹಾರಾಜರು, ಹಿರಿಯರ ತ್ಯಾಗ ಬಲಿದಾನವಿದೆ. ಹಿಂದುಳಿದವರು ಸಂಘಟನೆ, ಹೋರಾಟದಿಂದ ಮಾತ್ರ ಒಂದಾಗಲು ಸಾಧ್ಯ. ನೂರಾರು ಸಂಘಟನೆಗಳು ಹುಟ್ಟಿಕೊಂಡಿರುವುದರಿಂದ ದುರ್ಬಲವಾಗುತ್ತಿವೆ. ಹೋರಾಟವೆಂದರೆ ಸುಲಭವಲ್ಲ. ಕಷ್ಟದ ಕೆಲಸ. ಸಹೋದರ ಜಾತಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲಾದ್ಯಂತ ಪ್ರವಾಸ ಮಾಡಿ ಸಂಘಟನೆಯನ್ನು ಗಟ್ಟಿಗೊಳಿಸಬೇಕು. ಹೋರಾಟಗಾರರನ್ನು ಜೊತೆಯಲ್ಲಿಟ್ಟುಕೊಂಡು ತಾಲ್ಲೂಕು ಬೂತ್ ಮಟ್ಟಗಳಲ್ಲಿ ಸಂಘಟನೆಗೆ ಹೆಚ್ಚಿನ ಗಮನ ಕೊಡುವಂತೆ ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಸಾಧಿಕ್ವುಲ್ಲಾ ಮಾತನಾಡುತ್ತ ಜಾತಿ ಧರ್ಮಗಳ ನಡುವೆ ಒಡಕು ಮೂಡಿಸುತ್ತಿರುವ ಮನುವಾದಿಗಳಿಂದ ಪ್ರೀತಿ ಸಹೋದರತ್ವಕ್ಕೆ ಧಕ್ಕೆಯಾಗುತ್ತಿದೆ. ಶರಣರು, ಸಂತರು, ಹಿರಿಯರ ತ್ಯಾಗ ಬಲಿದಾನ ದೇಶಕ್ಕಿದೆ. ಅಧಿಕಾರ, ಪಕ್ಷ ಮುಖ್ಯವಲ್ಲ. ಮಾನವೀಯತೆ ದೊಡ್ಡದು. ಸಂವಿಧಾನ ಉಳಿದರೆ ಎಲ್ಲರೂ ಉಳಿಯುತ್ತೇವೆ. ಸಂಘಟನೆಯಲ್ಲಿ ಸ್ವಾರ್ಥವಿರಬಾರದೆಂದರು.
ಬಂಜಾರ ಸಮಾಜದ ವೆಂಕಾನಾಯ್ಕ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪತಿಯಪ್ಪ, ನಿವೃತ್ತ ಶಿಕ್ಷಕ ಜಯನಾಯ್ಕ, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಬೆಳಗಟ್ಟ, ಜಿಲ್ಲಾ ಜಾನಪದ ಜಾಗೃತಿ ಪರಿಷತ್ ಜಿಲ್ಲಾಧ್ಯಕ್ಷ ಬಿ.ಕೃಷ್ಣಪ್ಪ, ರೈತ ಮುಖಂಡ ಲಕ್ಷ್ಮಿಕಾಂತ, ಅಲೆಮಾರಿ ಜನಾಂಗದ ಜಿಲ್ಲಾಧ್ಯಕ್ಷ ಎಸ್.ಲಕ್ಷ್ಮಿಕಾಂತ ಇವರುಗಳು ವೇದಿಕೆಯಲ್ಲಿದ್ದರು.






