ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 29 : ವಿಜ್ಞಾನ ಶಿಕ್ಷಕರು ಇಂದಿನ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳಿಗೆ ಬೋಧಿಸಬೇಕಿದೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕಿದೆ. ಅವರ ಜೊತೆ ಹೆಚ್ಚು ಒಡನಾಟ ಇಟ್ಟುಕೊಂಡು ವೈಜ್ಞಾನಿಕತೆಯತ್ತ ಎಲ್ಲರನ್ನೂ ಕರೆದೊಯ್ಯ ಬೇಕಿದೆ. ಎಂದು ಆರ್ಥಿಕ ಚಿಂತಕರು ಸಾಹಿತಿಗಳು ಹಾಗೂ ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಅಧ್ಯಕ್ಷರಾದ ಡಾ.ಜಿ. ಎನ್.ಮಲ್ಲಿಕಾರ್ಜುನಪ್ಪ ಅಭಿಪ್ರಾಯಪಟ್ಟರು.
ಅವರು ಹೊಸದುರ್ಗದ ನಿಜಲಿಂಗಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಖಗೋಳ ವಿಜ್ಞಾನ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ವಿಜ್ಞಾನವು ಕೇವಲ ಒಂದು ವಿಷಯವಾಗಿರದೆ ಜೀವನದ ದಾರಿದೀಪವಾಗಿದೆ. ವಿದ್ಯಾರ್ಥಿಗಳಲ್ಲಿ ಮೂಲವಿಜ್ಞಾನದ ಬಗ್ಗೆ ಹೆಚ್ಚು ತಿಳಿಸಿಕೊಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಖಗೋಳ ಕುರಿತ ಉಪನ್ಯಾಸ ನೀಡಿದ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಶ್ರೀ ಎಚ್.ಎಸ್.ಟಿ.ಸ್ವಾಮಿ ಅವರು, ಇಂದು ವಿಜ್ಞಾನ ನಮ್ಮೆಲ್ಲರ ಜೀವನದಲ್ಲಿ ಹಾಸು ಹೊಕ್ಕಾಗಿದೆ.ವಿಜ್ಞಾನವನ್ನು ಬಿಟ್ಟು ಬದುಕೇ ಇಲ್ಲದ ಸ್ಥಿತಿ ಎದುರಾಗಿದೆ. ವಿಜ್ಞಾನವು ನಮ್ಮ ಜೀವನವನ್ನು ಸುಧಾರಿಸಿದೆ. ಅದರಲ್ಲಿಯೂ ಖಗೋಳ ವಿಜ್ಞಾನ ತುಂಬಾ ಅಭಿವೃದ್ಧಿ ಪಥದತ್ತ ಸಾಗಿದೆ. ಕೆಲವೇ ವರ್ಷಗಳಲ್ಲಿ ನಮ್ಮ ಭಾರತೀಯರು ಚಂದ್ರ ಮತ್ತು ಮಂಗಳಗ್ರಹಕ್ಕೆ ಹೆಜ್ಜೆ ಇಡಲಿದ್ದಾರೆ.
ಮಾನವಸಹಿತ ನೌಕೆಗಳನ್ನು ಕಳುಹಿಸಲು ಇಸ್ರೋ ವಿಜ್ಞಾನ ಸಂಸ್ಥೆ ಸಿದ್ಧವಾಗುತ್ತಿದೆ. ಇಷ್ಟೆಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನ ಉತ್ತುಂಗಕ್ಕೆ ಏರಿದ್ದರೂ, ಜನರಲ್ಲಿ ವೈಜ್ಞಾನಿಕ ಮನೋಭಾವದ ಕೊರತೆ ಇದೇ. ನಾವೆಲ್ಲರೂ ವೈಚಾರಿಕತೆಯ ಹಾದಿಯಲ್ಲಿ ಬದುಕು ಕಟ್ಟಿಕೊಂಡು, ವಿದ್ಯಾರ್ಥಿಗಳಿಗೂ ವೈಚಾರಿಕ ಚಿಂತನೆ ಬೆಳೆಸಬೇಕಿದೆ ಎಂದು ತಿಳಿಸಿ, ಗ್ರಹ, ನಕ್ಷತ್ರಗಳು, ಗೆಲಾಕ್ಸಿಗಳು, ನೀಹಾರಿಕೆಗಳ ಬಗ್ಗೆ ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸೈನ್ಸ್ ಫೌಂಡೇಶನ್ ಖಜಾಂಚಿ ಶ್ರೀ ಕೆ.ವಿ.ನಾಗಲಿಂಗರೆಡ್ಡಿ ಇಂದಿನ ಶಿಕ್ಷಣ ವ್ಯವಸ್ಥೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಅಣಿಗೊಳಿಸಿ ಎಂದು ಕಿವಿ ಮಾತು ಹೇಳಿದರು.
ಪ್ರಾಂಶುಪಾಲ ಬಸಪ್ಪ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ನಿಸ್ಸಾರ್ ಅಹಮದ್, ಕಾರ್ಯದರ್ಶಿ ಕಲ್ಮಟ್ ಹಾಗೂ ನಿರ್ದೇಶಕರಾದ ಬಿ.ಎಂ.ತಿಪ್ಪೇಸ್ವಾಮಿ, ಕಾಲೇಜಿನ ಉಪನ್ಯಾಸಕ ವರ್ಗ, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.






