ಬೆಂಗಳೂರು; ಬೆಳ್ಳಂಬೆಳಗ್ಗೆ ಇಡಿ ಅಧಿಕಾರಿಗಳು ಶಾಸಕರು, ಸಂಸದರು, ಮಾಜಿ ಸಚಿವರ ಮನೆ ಮೇಲೆ ದಾಳಿ ಮಾಡಿ, ಹಲವು ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದು, ಅವರೆಲ್ಲ ಆಲಿಬಾಬಾ ಮತ್ತು 40 ಕಳ್ಳರ ತಂಡವಿದ್ದಂತೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ್ದು, ಎಲ್ಲಾರು ಕೂಡ ಆಲಿಬಾಬಾ ಚಾಲಿಸ್ ಸ್ಟೋರಿ ಇದ್ದಂತೆ. ಸತ್ಯ ಹೇಳಬೇಕು ಅಂದ್ರೆ ಇವರೆಲ್ಲರಿಗೂ ಆಲಿಬಾಬಾ ಚಾರೀಸ್. ಮಾತಾಡೋದನ್ನ ನೋಡ್ರಿ, ಎಷ್ಟು ಧರ್ಮದ ಮಾತನ್ನಾಡ್ತಾರೆ. ಬಹಳ ಸಂಪನ್ನರು ಎಂಬಂತೆ ಮಾತಾಡ್ತಾರೆ. ಪರಿಸ್ಥಿತಿ ನೋಡ್ರಿ ಇವತ್ತು. ಹಣವನ್ನು ತೆಗೆದುಕೊಂಡು ರಾಜಕಾರಣ ಮಾಡಿದವರು ಎಂಎಲ್ಎ ಆಗಿದ್ದಾರೆ. ರಾಮುಲು ಅವರನ್ನ ಸೋಲಿಸಬೇಕು, ರಾಮುಲು ಅವರನ್ನ ಅಂತ್ಯ ಮಾಡಬೇಕು ಅಂತ ಹೊರಟರು. ಬೇರೆ ರೀತಿ ಹಣ ತೆಗೆದುಕೊಂಡು ಬಂದು ಹಣ ಸುರಿದು ನಮ್ಮ ವಿರುದ್ಧ ಗೆದ್ದರೆ ವಿನಃ, ಬೇರೆ ರೀತಿಯಾಗಿ ಗೆದ್ದಿಲ್ಲ ಎಂದಿದ್ದಾರೆ.
ಇದೇ ವೇಳೆ ಜನಾರ್ದನ ರೆಡ್ಡಿ ಅವರಿಗೆ ಜಾಮೀನು ಸಿಕ್ಕಿರುವ ಬಗ್ಗೆ ಮಾತನಾಡಿದ ಶ್ರೀರಾಮುಲು, ಕಾನೂನು ಪ್ರಕಾರ ಶಿಕ್ಷೆಯಾಗಿತ್ತು. ಬಳಿಕ ಅವರು ಹೈಕೋರ್ಟ್ ಹೋಗಿದ್ದಾರೆ. ಅಲ್ಲಿಂದ ಬೇಲ್ ಸಿಕ್ಕಿದೆ. ಇದೊಂದು ಪ್ರಕ್ರಿಯೆ. ಕಾನೂನು ಪ್ರಕಾರ ಏನು ಆಗ್ಬೇಕೋ ಅದು ನಡೆದಿದೆ ಎಂದಿದ್ದಾರೆ. ಬಹಳ ಆತ್ಮೀಯವಾಗಿದ್ದಂತ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಕಳೆದ ಕೆಲವು ದಿನಗಳಿಂದ ಮನಸ್ತಾಪ ಮಾಡಿಕೊಂಡಿದ್ದಾರೆ. ಆ ಮನಸ್ತಾಪ ಗುಟ್ಟಾಗಿ ಏನು ಉಳಿದಿಲ್ಲ. ಬಹಿರಂಗವಾಗಿಯೇ ಮನಸ್ತಾಪವನ್ನು ಹೊರ ಹಾಕಿದ್ದಾರೆ. ಇದೀಗ ಅವರು ಜೈಲಿಂದ ಜಾಮೀನು ಮೂಲಕ ಹೊರ ಬಂದಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

