ಬೆಂಗಳೂರು; ಇಡಿ ಅಧಿಕಾರಿಗಳು ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ನಡೆಸಿದ್ದಾರೆ. ಈ ಸಂಬಂಧ ಇಂದು ಪ್ರತಿಕ್ರಿಯೆ ನೀಡಿರುವ ಸಚಿವ ಜಿ.ಪರಮೇಶ್ವರ್ ಅವರು, ಯಾವ ವಿಚಾರಕ್ಕೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬುದು ಗೊತ್ತಿಲ್ಲ. ಇಡಿ ಅಧಿಕಾರಿಗಳು ನಮ್ಮ ಸಂಸ್ಥೆಯ ಅಕೌಂಟ್ಸ್ ಕೇಳಿದ್ದಾರೆ. ಯಾವ ವರ್ಷದ ಲೆಕ್ಕ ಕೇಳಿದ್ದಾರೆ ಎಂಬುದೆಲ್ಲವನ್ನು ಕೊಡಿ ಎಂದು ನಾನು ಕೂಡ ಹೇಳಿದ್ದೀನಿ. ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿಯ ಉದ್ದೇಶ ಗೊತ್ತಿಲ್ಲ. ಅವರಿಗೆ ಸಹಕಾರ ಕೊಟ್ಟಿದ್ದೇವೆ. ನಾನು ಕಾನೂನಿಗೆ ಬೆಲೆ ಕೊಟ್ಟು ಬಂದವನು. ಕಾನೂನು ಎಲ್ಲರಿಗೂ ಒಂದೇ. ಕಾನೂನಿಗೆ ಗೌರವ ಕೊಡುತ್ತೇನೆ. ಇಡಿ ಅಧಿಕಾರಿಗಳು ಏನು ಬೇಕಾದರೂ ಪರಿಶೀಲನೆ ಮಾಡಲಿ. ನಾವೂ ಕೂಡ ಸಹಕಾರ ಕೊಡುತ್ತೇವೆ ಎಂದಿದ್ದಾರೆ.
ರಣದೀಪ್ ಸುರ್ಜೆವಾಲ ಅವರು ದಲಿತ ಎಂಬ ಕಾರಣಕ್ಕೆ ದಾಳಿ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಜಿ.ಪರಮೇಶ್ವರ್ ಅವರು, ಅವರು ಯಾವ ಅರ್ಥದಲ್ಲು ಹೇಳಿದ್ದಾರೋ ಗೊತ್ತಿಲ್ಲ. ಇಂಥ ವಿಚಾರಗಳಲ್ಲಿ ಯಾರೂ ಜಾತಿ ನೋಡಿ ಬರುವುದಿಲ್ಲ. ಆ ಬಗ್ಗೆ ನಾನು ಈಗ ಏನು ಹೇಳುವುದಿಲ್ಲ ಎಂದಿದ್ದಾರೆ. ನಮ್ಮ ಶಿಕ್ಷಣ ಸಂಸ್ಥೆಯು ಸ್ಥಾಪನೆಯಾಗಿ 68 ವರ್ಷಗಳೇ ಆಗಿವೆ. ನಮ್ಮ ತಂದೆ ಕಾಲದಿಂದಲೂ ಸಂಸ್ಥೆ ನಡೆಯುತ್ತಿದೆ. ಸಿದ್ದಾರ್ಥ ಸಂಸ್ಥೆಯಿಂದ ಕಲಿತು 40 ಸಾವಿರ ಮಂದಿ ಇಂಜಿನಿಯರ್ ಆಗಿದ್ದಾರೆ. 10 ಸಾವಿರ ಮಂದಿ ವೈದ್ಯರಾಗಿದ್ದಾರೆ. ಜಾರಿ ನಿರ್ದೇಶನಾಲಯ ಇಲ್ಲಿಯವರೆಗೂ ಏನು ಹೇಳಿಲ್ಲ. ಶಫಿ ಅಹ್ಮದ್ ಅವರ ಶಿಕ್ಷಣ ಸಂಸ್ಥೆಯನ್ನು ನಾವೇ ಖರೀದಿ ಮಾಡಿದ್ದೇವೆ ಎಂದಿದ್ದಾರೆ.

