ಪ್ರತಿಯೊಬ್ಬರು ಅಂಗಾಂಗ ದಾನಕ್ಕೆ ಮುಂದಾಗಿ : ಡಾ.ಶಿವಕುಮಾರ್ ಮನವಿ

3 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮೇ. 20 : ದಾನವೆಂದರೆ ಕೇವಲ ರಕ್ತದಾನವಲ್ಲ. ದೇಹದ ಪ್ರತಿಯೊಂದು ಅಂಗಾಂಗಗಳನ್ನು ದಾನ ಮಾಡಿ ಮತ್ತೊಬ್ಬರ ಪ್ರಾಣ ಉಳಿಸಬಹುದೆಂದು ಆಯುಷ್ ಇಲಾಖೆಯ ಡಾ.ಶಿವಕುಮಾರ್ ತಿಳಿಸಿದರು.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದಿಂದ ಹೊಳಲ್ಕೆರೆ ರಸ್ತೆಯಲ್ಲಿರುವ ಸಂಘದ ಕಚೇರಿ ಬಳಿ ಮಂಗಳವಾರ ನಡೆದ ಕಾರ್ಮಿಕ ದಿನಾಚರಣೆಯಲ್ಲಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

ಮನುಷ್ಯ ನಿಧನದ ನಂತರ ಇಡಿ ದೇಹವನ್ನೇ ಆಸ್ಪತ್ರೆಗೆ ದಾನ ಮಾಡಬಹುದು. ಮರಣದ ನಂತರ ದೇಹವನ್ನು ಮಣ್ಣಿನಲ್ಲಿ ಹೂಳುವ ಬದಲು ಕಣ್ಣುಗಳನ್ನು ದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಬಹುದು. ಅದೇ ರೀತಿ ಜೀವಿತ ಅವಧಿಯಲ್ಲಿ ಒಂದು ಕಿಡ್ನಿಯನ್ನು ಮತ್ತೊಬ್ಬರಿಗೆ ನೀಡಬಹುದು. ಹೀಗೆ ದಾನ ಮಾಡುವುದರಿಂದ ಸಾವು-ಬದುಕಿನ ನಡುವೆ ಹೋರಾಡುವ ಇನ್ನೊಂದು ಜೀವ ಉಳಿಸಿದ ಪುಣ್ಯ ಪ್ರಾಪ್ತಿಯಾಗುತ್ತದೆಂದು ಹೇಳಿದರು.

ಹದಿನೆಂಟು ವರ್ಷ ಮೇಲ್ಪಟ್ಟ ಅರವತ್ತು ವರ್ಷದೊಳಗಿನ ಆರೋಗ್ಯವಂತರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಲಂಗ್ಸ್, ಕಿಡ್ನಿ, ಹೃದಯ ಹಾಗೂ ಲಿವರ್, ಕೈ-ಕಾಲು, ಬೋನ್ ಮ್ಯಾರೋವನ್ನು ಕೂಡ ದಾನ ಮಾಡಬಹುದು. ಹಾಗಾಗಿ ಪ್ರತಿಯೊಬ್ಬರು ಅಂಗಾಂಗ ದಾನಕ್ಕೆ ಮುಂದಾಗಿ ಎಂದು ಡಾ.ಶಿವಕುಮಾರ್ ಮನವಿ ಮಾಡಿದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಮಾತನಾಡುತ್ತ ಅಂಗಾಂಗ ದಾನ ನಿಜವಾಗಿಯೂ ಪುಣ್ಯದ ಕೆಲಸ. ಇದರಿಂದ ಸಾವಿನ ನಂತರವೂ ಜೀವಂತವಾಗಿಟ್ಟಿರುತ್ತದೆ. ಅಂಗಾಂಗ ದಾನದಿಂದ ಮತ್ತೊಂದು ಜೀವ ಉಳಿಸಿದಂತಾಗುತ್ತದೆ ಹೇಳಿದರು.

ಕಾರ್ಮಿಕ ಅಧಿಕಾರಿ ಅನಿಲ್ ಬಾಲಚಂದ್ರ ಬಗಟಿ ಮಾತನಾಡಿ ಪಿಂಚಣಿ, ಕಾರ್ಮಿಕರ ಮಕ್ಕಳ ಶಿಕ್ಷಣ ಹಾಗೂ ವಿವಾಹಕ್ಕೆ ಧನ ಸಹಾಯಕ್ಕಾಗಿ ಆಧಾರ್ ಕಾರ್ಡ್‍ನಲ್ಲಿರುವಂತೆ ಸರಿಯಾಗಿ ಹೆಸರನ್ನು ದಾಖಲಿಸಬೇಕು. ಒಂದು ವೇಳೆ ಹೆಸರಿನಲ್ಲಿ ವ್ಯತ್ಯಾಸವಾದರೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಕಷ್ಟವಾಗುತ್ತದೆ. ಪಿಂಚಣಿ, ಮರಣಕ್ಕೆ ಸಂಬಂಧಿಸಿದಂತೆ ಕಾರ್ಮಿಕರ ಕಲ್ಯಾಣ ಮಂಡಳಿಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಶೈಕ್ಷಣಿಕ ಧನ ಸಹಾಯಕ್ಕಾಗಿ ಸಲ್ಲಿಸಿರುವ ಅರ್ಜಿಗಳ ಮರು ಪರಿಶೀಲನೆಯಾಗಬೇಕು. ನೊಂದಣಿ, ನವೀಕರಣದ ಸಂದರ್ಭದಲ್ಲಿ ಹೆಸರುಗಳು ತಪ್ಪಾಗದಂತೆ ಎಚ್ಚರ ವಹಿಸುವಂತೆ ಕಾರ್ಮಿಕರಿಗೆ ಕರೆ ನೀಡಿದರು.

ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಯಾವುದಾದರೂ ಕಾಯಿಲೆಗಳಿಗೆ ಚಿಕಿತ್ಸೆ ಪಡೆದಾಗ ಮಾತ್ರ ಧನ ಸಹಾಯ ಸಿಗುತ್ತದೆ. 55 ವರ್ಷಗಳ ನಂತರ ಕಾರ್ಮಿಕರು ಗುರುತಿನ ಚೀಟಿಗಳನ್ನು ಕಡ್ಡಾಯವಾಗಿ ನವೀಕರಿಸಿಕೊಂಡಾಗ ಮಾತ್ರ ಪಿಂಚಣಿ ಇನ್ನಿತರೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಸುಲಭವಾಗುತ್ತದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಮಾತನಾಡಿ ರಾಜ್ಯದಲ್ಲಿ ನಲವತ್ತು ಲಕ್ಷ ಗುರುತಿನ ಚೀಟಿಗಳಿದ್ದು, ಈಗ ಇಪ್ಪತ್ತು ಲಕ್ಷಕ್ಕೆ ಇಳಿದಿದೆ. ಜಿಲ್ಲೆಯಲ್ಲಿದ್ದ 1.50 ಲಕ್ಷ ಕಾರ್ಮಿಕರ ಗುರುತಿನ ಚೀಟಿ 60 ಸಾವಿರಕ್ಕೆ ಬಂದಿದೆ. ಇಪ್ಪತ್ತೈದರಿಂದ ಮೂವತ್ತು ಸಾವಿರದಷ್ಟು ನಿಜವಾದ ಕಾರ್ಮಿಕರು ಜಿಲ್ಲೆಯಲ್ಲಿರಬಹುದು. ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿಯಿಲ್ಲದಂತಾಗಿದೆ. ಕಾರ್ಮಿಕರಿಗೆ ಸರ್ಕಾರ ವಿಧಿಸಿರುವ ಮಾನದಂಡಗಳು ಕಠಿಣವಾಗಿರುವುದರಿಂದ ಸರಳೀಕರಣಗೊಳಿಸುವಂತೆ ಕಾರ್ಮಿಕ ಅಧಿಕಾರಿಯವರಲ್ಲಿ ವಿನಂತಿಸಿದರು.

ಕಾರ್ಮಿಕರಿಗೆ ಅನೇಕ ತಿಂಗಳುಗಳಿಂದ ಪಿಂಚಣಿ ಬಂದಿಲ್ಲ. ಮನೆ ಕಟ್ಟಿಕೊಳ್ಳಲು ಹಣ ನೀಡುತ್ತಿಲ್ಲ. ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕೋಟ್ಯಾಂತರ ರೂ.ಗಳ ಹಣವಿದ್ದರೂ ನಿಜವಾದ ಕಾರ್ಮಿರಿಗೆ ಸಿಗುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ. ನಕಲಿ ಕಾರ್ಮಿಕರ ಹಾವಳಿ ನಿಲ್ಲಬೇಕು. ಪ್ರತಿ ಜಿಲ್ಲೆಯಲ್ಲಿ ಕಾರ್ಮಿಕ ಭವನಗಳ ನಿರ್ಮಾಣವಾಗಬೇಕು. ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ತಡೆಹಿಡಿಯಲಾಗಿದೆ. ನಿಮ್ಮ ಪಾಲಿನ ಹಕ್ಕುಗಳನ್ನು ಪಡೆಯಬೇಕಾದರೆ ಕಡ್ಡಾಯವಾಗಿ ಕಾರ್ಮಿಕರು ಗುರುತಿನ ಚೀಟಿಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ಕಾರ್ಮಿಕ ನಿರೀಕ್ಷಕ ಟಿ.ಬೀಮೇಶ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಉಪ ಸಭಾಪತಿ ಅರುಣ್‍ಕುಮಾರ್, ಸಮೃದ್ದಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ವೆಂಕಟೇಶ್  ಟೈಲ್ಸ್ ಮತ್ತು ಗ್ರಾನೈಟ್ ಸಂಘದ ಅಧ್ಯಕ್ಷ ಚಂದ್ರಪ್ಪ ಟಿ. ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಜೆ.ಮಂಜುನಾಥ್, ಉಪಾಧ್ಯಕ್ಷ ಕೆ.ಗೌಸ್‍ಪೀರ್, ಖಜಾಂಚಿ ಈಶ್ವರಪ್ಪ ಡಿ. ಇವರುಗಳು ವೇದಿಕೆಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks