ಸುದ್ದಿಒನ್, ಚಿತ್ರದುರ್ಗ, ಮಾರ್ಚ್.19 : ವರದಕ್ಷಿಣೆ ಕಿರುಕುಳ ನೀಡಿದ ಆರೋಪಿಗೆ ನ್ಯಾಯಾಲಯ 5 ವರ್ಷಗಳ ಸಾದಾ ಸಜೆ ಹಾಗೂ ರೂ. 10,000/- ಗಳ ದಂಡ ವಿಧಿಸಿ ತೀರ್ಪು ನೀಡಿದೆ.
ಚಿತ್ರದುರ್ಗ ನಗರದ ಸೈಯದ್ ಸೈಪುಲ್ಲಾ ಶಿಕ್ಷೆಗೊಳಗಾವವನು. ಸುಮಾರು 7 ವರ್ಷಗಳ ಹಿಂದೆ ಹೊನ್ನಾಳಿ ತಾಲೂಕಿನ ಸಾನ್ವೆಹಳ್ಳಿ ಗ್ರಾಮದ ಅಪ್ಜಪರ್ವಿನ್ ಅವರ ವಿವಾಹವು ದಿನಾಂಕ 15-12-2016 ರಂದು ದಾವಣಗೆರೆಯ ರಾಯಲ್ ಕಲ್ಯಾಣ ಮಂಟಪದಲ್ಲಿ ಮುಸ್ಲಿಂ ಪದ್ದತಿಯಂತೆ ನಡೆದಿದ್ದು, ಮದುವೆ ಮಾತುಕತೆ ಕಾಲದಲ್ಲಿ ವರದಕ್ಷಿಣೆಯಾಗಿ ರೂ. 5,00,000/- ಗಳ ಬೇಡಿಕೆ ಇಟ್ಟಿದ್ದು, ಅದಕ್ಕೆ ಅಪ್ಜಪರ್ವಿನ್ ಇವರ ತಮ್ಮ ಬ್ಯಾಂಕ್ ಖಾತೆಯಿಂದ ರೂ 4,50,000/- ಗಳನ್ನು ವರ್ಗಾವಣೆ ಮಾಡಿರುತ್ತಾರೆ. ಮದುವೆಯ ನಂತರ ಉಳಿದ 50,000/- ಹಣವನ್ನು ತರುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ದಿನಾಂಕ: 19-08-2019 ರಂದು ಆಕೆಯ ಮೇಲೆ ಹಲ್ಲೆ ನಡೆಸಿ ಕೊಲೆಗೆ ಪ್ರಯತ್ನ ಪಟ್ಟಿರುತ್ತಾನೆ.
ಈ ಸಂಬಂಧವಾಗಿ ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ಅಪ್ಜಪರ್ವಿನ್ ತನ್ನ ಪತಿಯ ವಿರುದ್ಧ ದೂರು ನೀಡಿರುತ್ತಾರೆ. ದೂರಿನ ಮೇರೆಗೆ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ತನಿಖೆ ನಡೆಸಿ ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಕೆ.ಬಿ. ಗೀತಾ ಅವರು ಸೈಯದ್ ಸೈಫುಲ್ಲಾ ಮದುವೆ ಸಂದರ್ಭದಲ್ಲಿ ಅಪ್ಜಪರ್ವಿನ್ ಅವರಿಂದ ರೂ. 4,50,000/- ಹಣವನ್ನು ವರದಕ್ಷಿಣೆಯಾಗಿ ಪಡೆದಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ವರದಕ್ಷಿಣೆ ನಿಷೇಧ ಕಾಯ್ದೆಯನ್ವಯ 5 ವರ್ಷಗಳ ಸಾದಾ ಸಜೆ ಹಾಗೂ ರೂ. 10,000/- ಗಳ ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ. ಅಷ್ಟೇ ಅಲ್ಲದೇ ಮದುವೆ ವೇಳೆ ವರದಕ್ಷಿಣೆ ರೂಪದಲ್ಲಿ ಪಡೆದಿದ್ದ ರೂ. 4,50,000/- ಗಳನ್ನು ಅಪ್ಜಪರ್ವಿನ್ ಅವರಿಗೆ ವಾಪಸು ನೀಡುವಂತೆ ಆದೇಶ ಮಾಡಿರುತ್ತಾರೆ.
ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕರಾದ ಬಿ.ಗಣೇಶ ನಾಯ್ಕ ಇವರು ವಿಚಾರಣೆಯನ್ನು ನಡೆಸಿ ವಾದ ಮಂಡಿಸಿರುತ್ತಾರೆ.
ಬಿ.ಗಣೇಶ ನಾಯ್ಕ ಅವರ ಫೋನ್ ನಂಬರ್ : 9972977047
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.







