ಪರೀಕ್ಷೆ ಒತ್ತಡದಿಂದ ಬರೆಯಬೇಡಿ ಹಬ್ಬದಂತೆ ಆಚರಿಸಿ : ತಾ.ಪಂ ಇಒ ವೈ.ರವಿಕುಮಾರ್

1 Min Read

 

ಚಿತ್ರದುರ್ಗ. ಮಾ.09: ಶಾಲಾ ವಾರ್ಷಿಕ ಪರೀಕ್ಷೆಗಳು ವರ್ಷಕ್ಕೊಮ್ಮೆ ಬರುತ್ತವೆ, ಅದೇ ರೀತಿ ಹಬ್ಬಗಳು ಸಹ ವರ್ಷಕ್ಕೊಮ್ಮೆ ಬರುತ್ತವೆ. ಹಬ್ಬವನ್ನು ಹೇಗೆ ಸಂಭ್ರಮದಿಂದ ಆಚರಿಸುತ್ತೇವೆಯೋ, ಹಾಗೆಯೇ ಪರೀಕ್ಷೆಯನ್ನೂ ಸಂಭ್ರಮದಿಂದ ಎದುರಿಸಬೇಕು ಎಂದು ಚಿತ್ರದುರ್ಗ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳು ಹಾಗೂ ತಾಲ್ಲೂಕು ಬಾಲ ಭವನ ಸಮಿತಿಯ ಅಧ್ಯಕ್ಷ ವೈ.ರವಿಕುಮಾರ್ ತಿಳಿಸಿದರು.

ನಗರದ ಕೆ.ಕೆ. ನ್ಯಾಷನಲ್ ಆಂಗ್ಲ ಮಾಧ್ಯಮಿಕ ಶಾಲೆಯಲ್ಲಿ ಈಚೆಗೆ ರಾಜ್ಯ ಬಾಲ ಭವನ ಸೊಸೈಟಿ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮತ್ತು ತಾಲೂಕು ಬಾಲ ಭವನ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಮಕ್ಕಳ ಕಲಾ ಪ್ರತಿಭೆ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 

ಪರೀಕ್ಷೆಯ ಒತ್ತಡಕ್ಕೆ ಒಳಗಾಗದೆ ಏಕಾಗ್ರತೆಯಿಂದ ಪರೀಕ್ಷೆ ಬರೆಯಬೇಕು. ಮಕ್ಕಳ ಮನಸ್ಸು ಹೂವಿನಂತೆ, ಅದಕ್ಕೆ ಜ್ಞಾನವೆಂಬ ಗೊಬ್ಬರ ಹಾಕಿ ಸಮಾಜದಲ್ಲಿ ಉತ್ತಮ ವಿನಯದೊಂದಿಗೆ ಬೆಳೆಸುವುದು ಪೋಷಕರ ಆದ್ಯ ಕರ್ತವ್ಯ. ಪರೀಕ್ಷೆ ಸಂದರ್ಭದಲ್ಲಿ ಪೋಷಕರು ಮಕ್ಕಳಿಗೆ ಒತ್ತಡ ಹಾಕಬಾರದು ಎಂದು ಕಿವಿಮಾತು ಹೇಳಿದರು.

 

ಜಿಲ್ಲಾ ಬಾಲಭವನ ಕಾರ್ಯಕ್ರಮ ಸಂಯೋಜಕ ಡಿ. ಶ್ರೀಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಬಾಲ ಭವನದ ಕಲಾಪ್ರತಿಭೆ ಕಾರ್ಯಕ್ರಮವು ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ನಡೆಯುತ್ತಿದೆ. ರಾಜ್ಯ ಬಾಲ ಸೊಸೈಟಿಯ ಅಧ್ಯಕ್ಷರಾದ ಬಿ.ಆರ್. ನಾಯ್ಡು ಹಾಗೂ ಕಾರ್ಯದರ್ಶಿ ನಿಶ್ಚಲ್ ಅವರ ಮಾರ್ಗದರ್ಶನದಂತೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆಕಾಶ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್.ವಿಜಯಕುಮಾರ್ ಅವರ ನಿರ್ದೇಶನದ ಮೇರೆಗೆ ಜಿಲ್ಲೆಯಾದ್ಯಂತ ಮಕ್ಕಳಿಗೆ ಈ ಕಾರ್ಯಕ್ರಮ ಆಯೋಜಿಸಿ ಬಹುಮಾನ ನೀಡಲಾಗುತ್ತಿದೆ ಎಂದರು.

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಮಹೇಶ್ವರಪ್ಪ ಮಾತನಾಡಿ, ಮಕ್ಕಳಿಗೆ ಬಾಲ ಭವನದ ಚಟುವಟಿಕೆಗಳು ಬಹಳ ಅವಶ್ಯಕ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರ ಹಾಗೂ ಪೆನ್ನುಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕಿಯರಾದ ವಿಜಯಲಕ್ಷ್ಮಿ, ಅಮೋಘ, ವೀಣಾ, ತಮಸುಮ್, ರೂಪಿಣಿ, ರೂಪಾ, ತೌಷಿತ ಹಾಗೂ ದೈಹಿಕ ಶಿಕ್ಷಕರಾದ ಡಿ.ಅಣ್ಣೇಶ್, ನಾಗಾರ್ಜುನ್ ಉಪಸ್ಥಿತರಿದ್ದರು.

Share This Article