ತುಮಕೂರು: ಧರ್ಮಸ್ಥಳದ ಬಂಗ್ಲೆ ಗುಡ್ಡದಲ್ಲಿ ಎಸ್ಐಟಿ ಮತ್ತೆ ಅಗೆಯುವುದಕ್ಕೆ ಶುರು ಮಾಡಿದ್ದಾರೆ. ಮತ್ತೆ ಒಂದಷ್ಟು ತಲೆ ಬುರುಡೆ, ಅಸ್ಥಿಪಂಜರಗಳು ಸಿಕ್ಕಿವೆ. ಹೀಗಾಗಿ ತನಿಖೆ ಮತ್ತಷ್ಟು ಚುರುಕಾಗಿದೆ. ಮೊನ್ನೆಯಷ್ಟೇ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಅವರನ್ನು ಭೇಟಿ ಮಾಡಿ ವರದಿಯನ್ನ ಒಪ್ಪಿಸಿದ್ದಾರೆ. ಇದರ ನಡುವೆ ಡಿಎಲ್ ಸಿಕ್ಕಿದ್ದು, 12 ವರ್ಷಗಳ ಹಿಂದಿನ ಘಟನೆ ಬೆಳಕಿಗೆ ಬಂದಿದೆ.
ಅಲ್ಲಿ ಸಿಕ್ಕಿರುವ ಡಿಎಲ್ ಆದಿಶೇಷ ಎಂಬ ವ್ಯಕ್ತಿಯದ್ದು. ಅದರ ಮೂಲ ಹುಡುಕುತ್ತಾ ಹೊರಟಾಗ ತಿಳಿದದ್ದು, ತುಮಕೂರಿನಲ್ಲಿ ಎಂಬುದು ಗೊತ್ತಾಗಿದೆ. ಆದಿಶೇಷ ಕಳೆದ ಹನ್ನೆರಡು ವರ್ಷಗಳ ಹಿಂದೆ ಮನೆಯಿಂದ ಹೊರಟವನು ಇನ್ನು ಬಂದಿಲ್ಲವಂತೆ. ಮಗನಿಗಾಗಿ ಕಯುತ್ತಿರುವ ತಾಯಿಗೆ ಈ ಸುದ್ದಿ ಬಿರುಗಾಳಿ ಬಡಿದಂತೆ ಆಗಿದೆ.
ಮಗನ ಡಿಎಲ್ ಸಿಕ್ಕಿರುವ ಬಗ್ಗೆ ಮಾತನಾಡಿದ ಆದಿಶೇಷನ ತಾಯಿ ಚನ್ನಮ್ಮ, ಅವತ್ತು ಮನೆಯಲ್ಲಿ ಊಟ ಮಾಡಿ ಹೊರಟ. ಇವತ್ತೇನು ಹೋಗ್ಬೇಡಪ್ಪ, ಸಂಜೆ ಆಗಿದೆ ಅಂತಾನೇ ಹೇಳಿದ್ದೆ. ಆದರೂ ಏನು ಆಗಲ್ಲ ನಾನು ಹೊರಡ್ತೀನಿ ಅಂದ. ಹಬ್ಬವನ್ನ ಜೋರಾಗಿ ಮಾಡೋಣಾ ನಾನು ಬರ್ತೀನಿ ಅಂತ ಹೇಳಿ ಹೋದವ ಆ ಬಳಿಕ ಫೋನ್ ಇಲ್ಲ ಏನಿಲ್ಲ. ವಾಪಸ್ ಬಂದು ಇಲ್ಲ. ಮಗನ ಬಗ್ಗೆ ಯಾರೂ ಸರಿಯಾದ ಮಾಹಿತಿಯನ್ನು ನೀಡ್ತಿಲ್ಲ. ಅವನು ಎಲ್ಲಾದರೂ ಇರಲಿ ಹುಷಾರಾಗಿದ್ದು, ಮನೆ ಸೇರಿಕೊಂಡರೆ ಸಾಕಾಗಿದೆ. ಮಗನನ್ನ ನೋಡಿ ಹನ್ನೆರಡು ವರ್ಷವಾಗಿದೆ. ಬೇಗ ಮನೆಗೆ ಬಾರಪ್ಪ ಎಂದು ಕಣ್ಣೀರು ಹಾಕಿದ್ದಾರೆ. ಸದ್ಯ ಆ ಡಿಎಲ್ ಸಿಕ್ಕ ಬೆನ್ನಲ್ಲೇ ಹುಡುಕಾಟವು ಶುರುವಾಗಿದೆ.














