ಬೆಂಗಳೂರು: ಇತ್ತೀಚೆಗೆ ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿದ್ದ ಮಾತು ಕಾಂಗ್ರೆಸ್ ನಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಇದ್ದಂತ ಸಿಎಂ ಕುರ್ಚಿ ಕದನ ಮತ್ತೆ ಹೊಗೆಯಾಡುವಂತೆ ಮಾಡಿದೆ. ನಮ್ಮ ತಂದೆಯೇ ಐದು ವರ್ಷ ಸಿಎಂ ಆಗಿರ್ತಾರೆ. ಹೈಕಮಾಂಡ್ ನಾಯಕರು ಕೂಡ ಒಪ್ಪಿದ್ದಾರೆ ಎಂಬ ಮಾತನ್ನ ಹೇಳಿದ್ದಾರೆ. ಇದು ಕಾಂಗ್ರೆಸ್ ನಾಯಕರಲ್ಲಿಯೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಡಿಕೆ ಶಿವಕುಮಾರ್ ಬಣದ ನಾಯಕರು ಈ ಮಾತಿಗೆ ರೊಚ್ಚಿ ಗೆದ್ದಿದ್ದಾರೆ.
ಅದರಲ್ಲೂ ಮೊದಲಿನಿಂದಲೂ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಆಸೆ ಪಡುತ್ತಿರುವ, ಡಿಕೆ ಶಿವಕುಮಾರ್ ಸಿಎಂ ಆಗಿಯೇ ಆಗ್ತಾರೆ ಎಂದು ಹೇಳುತ್ತಾ ಬಂದಿರುವ ಡಿಕೆಶಿ ಆಪ್ತ, ರಾಮನಗರದ ಶಾಸಕ ಇಕ್ಬಾಲ್ ಇದೀಗ ಮತ್ತೆ ಮಾತನ್ನಾಡಿದ್ದಾರೆ. ಯತೀಂದ್ರ ಅವರ ಹೇಳಿಕೆಗೆ ಖಡಕ್ಕಾಗಿಯೇ ಎಚ್ಚರಿಕೆ ಕೊಟ್ಟಿದ್ದಾರೆ. ಈ ವಿಚಾರಕ್ಕೆ ನಮ್ಮನ್ನು ಪ್ರಚೋದಿಸಬೇಡಿ ಎಂದಿದ್ದಾರೆ.
ಈ ಎಲ್ಲಾ ಬೆಳವಣಿಗೆಯ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ರಾಜ್ಯದ ನೀರಾವರಿ ಯೋಜನೆಗಳ ಸಂಬಂಧ ಈ ಯಾತ್ರೆಯನ್ನ ಮಾಡಲಾಗ್ತಿದೆ ಅಂತ ಖುದ್ದು ಡಿಸಿಎಂ ಡಿಕೆ ಶಿವಕುಮಾರ್ ಅವರೇ ಹೇಳಿದ್ದಾರೆ. ಆದರೆ ಅವರು ದೆಹಲಿಗೆ ಹೋಗ್ತಿದ್ದಾರೆ ಅಂದ್ರೆ ಒಂದಷ್ಟು ಚರ್ಚೆಗಳು ಹುಟ್ಟಿಕೊಳ್ತವೆ. ಹೈಕಮಾಂಡ್ ಮುಂದೆ ಮತ್ತೆ ತಮ್ಮ ಬೇಡಿಕೆಯನ್ನ ಇಡಬಹುದು, ಆ ಬಗ್ಗೆ ಚರ್ಚೆ ಮಾಡಬಹುದು ಎಂಬ ನಿರೀಕ್ಷೆ ಇದೆ. ಇತ್ತ ಮುಂದೆ ಪಂಚ ರಾಜ್ಯಗಳ ಚುನಾವಣಾ ಅಗ್ನಿಪರೀಕ್ಷೆ ಎದುರಾಗಿದೆ, ಹೀಗಾಗಿ ಸಿಎಂ ಚೇಂಜ್ ವಿಚಾರ ಹೈಕಮಾಂಡ್ಗೆ ಧರ್ಮ ಸಂಕಟ ತಂದಿಟ್ಟಿದೆ..

