ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಈಗ ಮತ್ತಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಸಿಎಂ ಕುರ್ಚಿ ಕದನದ ನಡುವೆ ಫಾರಿನ್ ಟೂರ್, ಗೋವಾ ರೆಸಾರ್ಟ್ ಎಂಬ ವಿಚಾರಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಡಿಕೆ ಶಿವಕುಮಾರ್ ದೆಹಲಿಗೂ ಹೋಗಿ ಬಂದಿದ್ದಾರೆ. ಅವರ ಸಿಎಂ ಆಗುವ ಕನಸಿನ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೊಳಿ ಮಾತನ್ನಾಡಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗುವ ಶುಭ ಗಳಿಗೆ, ಶುಭ ಕಾಲ ಹತ್ತಿರ ಬಂದಿದೆ ಎಂಬ ಮಾತನ್ನ ಹೇಳಿದ್ದಾರೆ.
ನಮ್ಮ ನಾಯಕರು ಯಾವಾಗಲೂ ಹೇಳ್ತಾ ಇದ್ರು ಶುಭ ಗಳಿಗೆ ಬರ್ಬೇಕು ಅಂತ. ಶುಭ ಗಳಿಗೆ, ಶುಭ ಕಾಲ ಬರ್ಬೇಕು ಅದು ಹತ್ತಿರ ಬಂದಿದೆ ಅಂತ ನಮಗೆ ಅನ್ನಿಸ್ತಾ ಇದೆ. ದೆಹಲಿಯಲ್ಲಿ ನಮ್ಮ ನಾಯಕರಾದಂತ ಡಿಕೆ ಶಿವಕುಮಾರ್ ಅವರು ವರಿಷ್ಠರನ್ನ ಭೇಟಿಯಾಗಿ ಸಾಕಷ್ಟು ವಿಚಾರಗಳನ್ನ ಚರ್ಚೆ ಮಾಡಿದ್ದಾರೆ. ಮಾರ್ಚ್ 10ಕ್ಕೆ ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರ್ಣ ಆಗ್ತಾ ಇದೆ. 100 ಕಾಂಗ್ರೆಸ್ ಭವನಗಳಿಗೆ ಅಡಿಗಲ್ಲು ಹಾಕಬೇಕೆಂದು ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ಅವರು ಸಾಕಷ್ಟು ಶ್ರಮ ಹಾಕಿದ್ದಾರೆ ಎಂದಿದ್ದಾರೆ.
ಇದೆ ವೇಳೆ ಗೋವಾದಲ್ಲಿ ರೆಸಾರ್ಟ್ ಬುಕ್ ಆಗಿದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿ, ಈಗಾಗಲೇ ವಿದೇಶಕ್ಕೆ ಹೊರಟಿರುವವರು ಸ್ಪಷ್ಟನೆ ನೀಡಿದ್ದಾರೆ. ಯಾಕಾಗಿ ವಿದೇಶಕ್ಕೆ ಹೊರಟಿದ್ದೇವೆ ಎಂಬುದನ್ನ. ಯಾವುದೇ ಗೊಂದಲವಿಲ್ಲ. ಗೋವಾದಲ್ಲಿ ರೆಸಾರ್ಟ್ ಬುಕ್ ಮಾಡಿದ್ದಾರೆ ಎಂಬ ವಿಚಾರ ಸತ್ಯಕ್ಕೆ ದೂರವಾದಂತ ವದಂತಿ. ಅಧ್ಯಕ್ಷರು ಕೂಡ ಈ ಬಗ್ಗೆ ಹೇಳಿದ್ದಾರೆ. ಡಿಕೆ ಶಿವಕುಮಾರ್ ಅವರಲ್ಲಿ ಗುಂಪುಗಾರಿಕೆ ಎಂಬುದೇ ಇಲ್ಲ ಎಂದಿದ್ದಾರೆ.


