ಬೆಂಗಳೂರು; ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸಿವೆ, ಕಾಂಗ್ರೆಸ್ ಸರ್ಕಾರದಿಂದ ಹೋರಾಟ, ಪ್ರತಿಭಟನೆಯನ್ನು ಮಾಡಿವೆ. ಆದರೆ ಇದೀಗ ಇದ್ದಕ್ಕಿದ್ದ ಹಾಗೇ ಅದ್ಯಾಕೋ ಏನೋ ಅಜೆಂಡಾ ಒಂದೇ ಆದರೂ ಎರಡು ಪಕ್ಷಗಳು ಬೇರೆ ಬೇರೆ ಹೋರಾಟ ನಡೆಸುತ್ತಿದ್ದಾರೆ. ಇದರಿಂದ ಎರಡು ಪಕ್ಷಗಳ ನಡುವೆ ಹೋರಾಟದಲ್ಲಿ ಭಿನ್ನಾಭಿಪ್ರಾಯವೇನಾದ್ರೂ ಮೂಡೀತಾ ಎಂಬ ಅನುಮಾನ ಶುರುವಾಗಿದೆ.
ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಆಗುತ್ತಲೇ ಇರುವ ಕಾರಣದಿಂದ ಬಿಜೆಪಿ, ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿದೆ. ಇದರಿಂದ ಜನಾಕ್ರೋಶ ಯಾತ್ರೆಯನ್ನು ಬಿಜೆಪಿ ಶುರು ಮಾಡಿದೆ. ಆದರೆ ಹೋರಾಟದಲ್ಲಿ ಬಿಜೆಪಿ ಜೊತೆಗೆ ಕೈ ಜೋಡಿಸದ ಜೆಡಿಎಸ್ ಸಪರೇಟ್ ಆಗಿ ಯಾತ್ರೆಯನ್ನು ಶುರು ಮಾಡಿದೆ. ಸರ್ಕಾರದ ವಿರುದ್ಧ ಒಂದೇ ಅಜೆಂಡಾ ಇಟ್ಟುಕೊಂಡಿದ್ರು, ಬಿಜೆಪಿ ಹಾಗೂ ಜೆಡಿಎಸ್ ಬೇರೆ ಬೇರೆಯಾಗಿ ಹೋರಾಟ ನಡೆಸುತ್ತಿವೆ. ಜೆಡಿಎಸ್ ಇಲ್ಲದೆಯೂ ಬಿಜೆಪಿ ಅದ್ದೂರಿಯಾಗಿ ಜನಾಕ್ರೋಶ ಯಾತ್ರೆಯನ್ನ ಶುರು ಮಾಡಿದೆ.
ಪ್ರತಿಭಟನೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಬಿಜೆಪಿ, ಸರ್ಕಾರದ ವಿರುದ್ಧ ಅಹೋರಾತ್ರಿ ಹೋರಾಟ ನಡೆಸಿದೆ. ಆದರೆ ಜೆಡಿಎಸ್ ನಾಯಕರಿಗೆ ಆಹ್ವಾನವನ್ನು ನೀಡಿಲ್ಲ. ಇದಕ್ಕೆ ಸ್ವತಃ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರೇ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಮಾತುಗಳನ್ನು ಕೇಳಿದಾಗ ಮೈತ್ರಿ ನಾಯಕರ ನಡುವೆ ಭಿನ್ನಾಭಿಪ್ರಾಯ ಇರುವುದು, ಅಸಮಾಧಾನ ಹೊಗೆಯಾಡುತ್ತಿರುವುದು ಸ್ಪಷ್ಟವಾದಂತೆ ಕಾಣಿಸುತ್ತಿದೆ. ನಮ್ಮ ಹೋರಾಟ ನಮ್ಮದು ನಿಮ್ಮ ಹೋರಾಟ ನಿಮ್ಮದು ಎಂಬಂತೆ ನಡೆದುಕೊಳ್ಳುತ್ತಿರುವ ಮೈತ್ರಿ ನಾಯಕರ ನಡೆ ಹೈಕಮಾಂಡ್ ನಿದ್ದೆಕೆಡಿಸಿರುವುದು ಸುಳ್ಳಲ್ಲ. ರಾಜ್ಯ ಬಿಜೆಪಿ ನಾಯಕರ ಹೋರಾಟದ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಈಗಾಗಲೇ ಬಿಜೆಪಿ ಹೈಕಮಾಂಡ್ ನಾಯಕರ ಗಮನಕ್ಕೂ ತಂದಿದ್ದಾರೆ ಎಂಬುದು ಕೂಡ ಸಾಕಷ್ಟು ಚರ್ಚೆಯಾಗುತ್ತಿದೆ.


