ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಬದಲಾವಣೆ ವಿಚಾರ ಆಗಾಗ ಚರ್ಚೆಗೆ ಬರ್ತಾನೆ ಇದೆ. ಅದರಲ್ಲೂ ಕಾಂಗ್ರೆಸ್ ಎರಡೂವರೇ ವರ್ಷವನ್ನ ಸರ್ಕಾರ ಪೂರೈಸಿದ ಕೂಡಲೇ ಸಿಎಂ ಸ್ಥಾನ ಬದಲಾವಣೆ ವಿಚಾರ ಹೆಚ್ಚಾಗಿ ಬಂದಿತ್ತು. ಈ ಬಾರಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಿನೇ ಆಗ್ತಾರೆ ಎಂಬ ಚರ್ಚೆಯಾಗಿತ್ತು. ಆದ್ರೆ ಇತ್ತೀಚೆಗೆ ಆ ವಿಚಾರ ತಣ್ಣಗೂ ಆಗಿತ್ತು. ಇದರ ನಡುವೆ ಹೊಸ ವಿಷಯ ಏನಂದ್ರೆ ಡಿಕೆ ಶಿವಕುಮಾರ್ ಹಾಕಿರುವ ಆ ಒಂದು ಸಾಲಿಂದ ನೂರೆಂಟು ಪ್ರಶ್ನೆಗಳು ಉದ್ಭವವಾಗಿವೆ. ರಾಜಕೀಯ ಪಡಸಾಲೆಯಲ್ಲಿ ಚರ್ಚೆಗಳು ಶುರುವಾಗಿದೆ.
ಎರಡೂವರೆ ವರ್ಷವಾದ ಮೇಲೆ ಡಿಕೆ ಶಿವಕುಮಾರ್ ಅವರು ಸಹ ನಾನೇ ಮುಖ್ಯಮಂತ್ರಿ ಆಗ್ತೀನಿ ಎಂಬ ನಂಬಿಕೆಯನ್ನ ಇಟ್ಟುಕೊಂಡಿದ್ದರು. ಆದರೆ ಐದು ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯ ಅವರು ಒತ್ತಿ ಒತ್ತಿ ಹೇಳಿದ ಮೇಲೆ ಆ ವಿಚಾರವೂ ತಣ್ಣಗಾಗಿತ್ತು. ನಿನ್ನೆ ಸಿದ್ದರಾಮಯ್ಯ ಅವರ ಹುಟ್ಟುಹಬ್ಬವಿತ್ತು. ಹೀಗಾಗಿ ಆಪ್ತ ಬಳಗದವರೆಲ್ಲ ಸೇರು ಹುಟ್ಟುಹಬ್ಬಕ್ಕೆ ಶುಭಕೋರಿದರು. ಡಿಸಿಎಂ ಡಿಕೆ ಶಿವಕುಮಾರ್ ಅವರು ಸಹ ಹೂ ಗುಚ್ಛ ಕೊಟ್ಟು ಶುಭಕೋರಿದ್ದು, ಆ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕಿ, ಒಂದಷ್ಟು ಸಾಲುಗಳನ್ನ ಬರೆದಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಗೆ ಜನ್ಮದಿನದ ಶುಭಾಶಯಗಳು. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ ಒದಗಿಸುವ ಮೂಲಕ ಉತ್ತಮ ಆಡಳಿತಕ್ಕೆ ಹೆಸರುವಾಸಿಯಾಗಿದ್ದೀರಿ. ಕನ್ನಡಿಗರ ಹಿತವನ್ನು ಕಾಪಾಡಲು, ಕರ್ನಾಟಕದ ಕಲ್ಯಾಣಕ್ಕಾಗಿ ನಮ್ಮ ‘ಕೈ’ ಹೀಗೆ ಜೊತೆಯಾಗಿರಲಿದೆ. ದೇವರು ತಮಗೆ ಉತ್ತಮ ಆಯುರಾರೋಗ್ಯ ನೀಡಿ ಕಾಪಾಡಲಿ ಎಂದು ಶುಭ ಹಾರೈಸುತ್ತೇನೆ ಎಂದಿದ್ದಾರೆ. ‘ಕೈ’ ಹೀಗೆ ಜೊತೆಯಾಗಿರಲಿದೆ ಎಂಬ ಸಾಲು ಈಗ ಚರ್ಚೆಗೆ ಕಾರಣವಾಗಿದೆ. ಸಿಎಂ ಸ್ಥಾನದಿಂದ ಹಿಂದೆ ಸರಿದರಾ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.






