ಉತ್ತಮ ಜೀವನಶೈಲಿಯಿಂದ ಮಧುಮೇಹ ನಿಯಂತ್ರಣ : ಡಾ. ಸತೀಶ್

2 Min Read

 

ಸುದ್ದಿಒನ್, ಚಿತ್ರದುರ್ಗ:ನ. 14 : ಮಧುಮೇಹ ಅಂದರೆ ಭಯ ಪಡಬೇಕಿಲ್ಲ. ಅದು ಜೀವನದ ಕೊನೆಯೂ ಅಲ್ಲ. ಬದುಕಿಯೂ ಬದುಕದಂತೆ ಜೀವಿಸುವುದು ಸರಿಯಲ್ಲ. ಮಧುಮೇಹಿಗಳು ಜೀವನವನ್ನು ನೋಡುವ ದೃಷ್ಟಿಕೋನವನ್ನೂ ಬದಲಾಯಿಸಿಕೊಳ್ಳಬೇಕು. ನಾನು ಮಧುಮೇಹಿ ಎಂಬ ಕಹಿ ಭಾವನೆಯೊಂದಿಗೆ ಬದುಕುವುದನ್ನು ಬಿಟ್ಟು ಉತ್ತಮ ಆಹಾರ ಪದ್ಧತಿ, ಯೋಗವ್ಯಾಯಾಮ ಯುಕ್ತ ಮತ್ತು ಒತ್ತಡ ಮುಕ್ತ ಆನಂದಮಯ ಜೀವನ ಶೈಲಿಯನ್ನು ನಡೆಸುವುದರೊಂದಿಗೆ ಮಧುಮೇಹ ರೋಗ ​ ನಿಯಂತ್ರಿಸಲು ಸಾಧ್ಯ ಎಂದು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಮಧುಮೇಹ ತಜ್ಞರಾದ ಡಾ || ಸತೀಶ್ ಅಭಿಪ್ರಾಯ ತಿಳಿಸಿದ್ದಾರೆ.

 

ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ ಸಹಯೋಗದೊಂದಿಗೆ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಚಿತ್ರದುರ್ಗ ಇವರು ವಿಶ್ವ ಮಧುಮೇಹ ದಿನಾಚರಣೆ-2024 ಅಂಗವಾಗಿ ಗುರುವಾರ ನಗರದ ತುರುವನೂರು ರಸ್ತೆಯ ಶ್ರೀ ಪ್ರಸನ್ನ ವೆಂಕಟೇಶ್ವರಸ್ವಾಮಿ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ಮಧುಮೇಹ ಪರೀಕ್ಷೆ, ರಕ್ತದೊತ್ತಡ ಹಾಗೂ ಕಣ್ಣುಗಳ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

 

ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಹೊಳಲ್ಕೆರೆಯ ಸರ್ಕಾರಿ ಆಸ್ಪತ್ರೆಯ ನೇತ್ರ ತಜ್ಞರಾದ ಡಾ. ಮಂಜುನಾಥ್ ಮಾತನಾಡಿ ಮಧುಮೇಹ ರೋಗದ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ನವಂಬರ್ 14ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತದೆ. 2024ರ ವಿಶ್ವ ಮಧುಮೇಹ ದಿನ 2024ರ ಘೋಷವಾಕ್ಯ ‘ಮಧುಮೇಹ ಮತ್ತು ಯೋಗಕ್ಷೇಮ’ ಆಗಿದ್ದು ಇದು ಮನುಷ್ಯನ ವೈಯಕ್ತಿಕ ಆರೋಗ್ಯ ಮಾತ್ರವಲ್ಲದೆ ವಿಶ್ವದಲ್ಲಿ ಬೆಳೆಯುತ್ತಿರುವ ಮಧುಮೇಹ ಬಿಕ್ಕಟ್ಟನ್ನು ಪರಿಹರಿಸಲು ಸಮುದಾಯಗಳ ಸಾಮೂಹಿಕ ಶಕ್ತಿಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ಇತ್ತೀಚಿನ ಆತಂಕದ ವಿಷಯವೇನೆಂದರೆ ಮಕ್ಕಳು ಮತ್ತು ಹದಿಹರೆಯದವರು ಸೇರಿದಂತೆ ಯುವ ವಯಸ್ಕರಲ್ಲಿ ಮಧುಮೇಹದ ಆರಂಭವು ಗಮನಾರ್ಹವಾಗಿ ಏರಿಕೆ ಕಂಡು ಬಂದಿರುವುದು ಮಕ್ಕಳಲ್ಲಿ ಟೈಪ್ 1 ಮಧುಮೇಹವು ಪ್ರಧಾನವಾಗಿದ್ದು, ಇದನ್ನು ಜೀವನದುದ್ದಕ್ಕೂ ಇನ್ಸುಲಿನ್ ಪೂರೈಕೆಯ ಚಿಕಿತ್ಸೆಯೊಂದಿಗೆ ನಿರ್ವಹಿಸಲಾಗುತ್ತಿರುವುದು . ಚಿಂತಾಜನಕ ವಿಷಯವಾಗಿದೆ . ಬಾಲ್ಯದ ಸ್ಥೂಲಕಾಯತೆ, ಸಂಸ್ಕರಿಸಿದ ಸಕ್ಕರೆ ಇರುವ ಹೆಚ್ಚಿನ ಆಹಾರಗಳ ಸೇವನೆ ಮತ್ತು ಕಡಿಮೆ ದೈಹಿಕ ಚಟುವಟಿಕೆಯಂತಹ ಅಂಶಗಳು ಇದಕ್ಕೆ ಮುಖ್ಯ ಕಾರಣವಾಗಿದೆ ಅದಕ್ಕಾಗಿ ಮಕ್ಕಳು ಕ್ರೀಡೆ ಮತ್ತು ಯೋಗಭ್ಯಾಸಗಳಲ್ಲಿ ತೊಡಗಿಕೊಳ್ಳುವುದು ಹೆಚ್ಚು ಸೂಕ್ತ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಟಿ. ಶ್ರೀನಿವಾಸ್ ಮೂರ್ತಿ ಮಾತನಾಡಿ ಡಯಾಬಿಟಿಸ್ ಎಂದರೆ ಸ್ವಂತ ನಾವೇ ನೋಡಿಕೊಂಡು ಸರಿ ಮಾಡಿಕೊಳ್ಳುವ ಕಾಯಿಲೆ. ನಾವು ಹೇಗೆ ನಮ್ಮ ಲೈಫ್​ ಸ್ಟೈಲ್ ಹೇಗೆ ಇರುತ್ತದೆ‌ಯೋ ಅದರ ಮೇಲೆ ನಿರ್ಧಾರವಾಗುತ್ತದೆ. ಇದರಿಂದ ಭಯ ಪಡುವ ಅಗತ್ಯವಿಲ್ಲ. ಕೆಲವೊಂದು ಜನ ಪ್ರತಿದಿನ ವಾಕಿಂಗ್ ಮಾಡಿದ ನಂತರ ಹೋಟೆಲಿಗೆ ಹೋಗಿ ನಾಲ್ಕು ಇಡ್ಲಿ ಉದ್ದಿನ ವಡೆಗಳನ್ನು ಸೇವಿಸಿ ಮನೆಗೆ ಹೋಗುತ್ತಾರೆ ಈ ರೀತಿಯ ಜೀವನಶೈಲಿಯಿಂದ ನಾವು ಹೊಸ ರೋಗವನ್ನು ತಂದುಕೊಳ್ಳಬಹುದೇ ಹೊರತು ಕಾಯಿಲೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

 

ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು 95ಕ್ಕೂ ಸಾರ್ವಜನಿಕರು ಭಾಗವಹಿಸಿ ಚಿಕಿತ್ಸೆ ಪಡೆದರು. ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲಾಸ್ಪತ್ರೆ ನೇತ್ರಾಧಿಕಾರಿ ರಾಮು, ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನೀರೀಕ್ಷಣಾಧಿಕಾರಿ ಮಹೇಶ್ ಡಿ., ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಆಯೋಜಕರಾದ ರವಿ ಕೆ. ಅಂಬೇಕರ್, ಸಮುದಾಯ ಆರೋಗ್ಯಾಧಿಕಾರಿಗಳಾದ ಕು. ಶಭಾನ, ಜಯಲತಾ, ಯೋಗ ತರಬೇತುದಾರರಾದ ಮಂಜುನಾಥ್ವ ಎಂ ಆರ್, ವಸಂತಲಕ್ಷ್ಮಿ, ಮಂಜುಳಾ ಇನ್ನಿತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *