ಹಿರಿಯೂರು : ನಗರದ ತಾಲೂಕು ಕಚೇರಿ ಮುಂಭಾಗ ತಾಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘದ ವತಿಯಿಂದ ಸೋಮವಾರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಎರಡನೇ ಹಂತದ ಆನಿರ್ಧಿಷ್ಟಾವಧಿ ಮುಷ್ಕರ ನಡೆಸಿದರು.
ಧರಣಿ ಕುರಿತು ಸಂಘದ ತಾಲೂಕು ಅಧ್ಯಕ್ಷ ಗಂಗಾಧರ್ ಮಾತನಾಡಿ ಎರಡನೇ ಹಂತದ ಮುಷ್ಕರ ಶುರುವಾಗಿದ್ದು ಈ ಹಿಂದೆ ಮಾಡಿದ ಪ್ರತಿಭಟನೆಗೆ ಸರ್ಕಾರ ಸ್ಪಂದಿಸಲಿಲ್ಲ. ನಮಗೆ ಮೂಲಭೂತ ಸೌಕರ್ಯಗಳೇ ಇಲ್ಲ. ಯಾವುದೇ ತಾಂತ್ರಿಕ ತರಬೇತಿ ಇಲ್ಲದೇ ಆಪ್ ಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದೆ. ಅಕಸ್ಮಾತ್ ತಪ್ಪುಗಳಾದಾಗ ನಮ್ಮನ್ನೇ ಗುರಿ ಮಾಡಲಾಗುತ್ತಿದೆ. 25 ವರ್ಷಗಳಾದರೂ ಪ್ರಮೋಷನ್ ಇಲ್ಲ. ಪತಿ ಪತ್ನಿ ವರ್ಗಾವಣೆ ನೀತಿ ಉಪಯೋಗವಿಲ್ಲ. ಪೌತಿ ಆಂದೋಲನದಲ್ಲಿ ತಪ್ಪು ಆದರೆ ಅಪೀಲ್ ಹೋಗುವ ಕಾನೂನು ತರುತ್ತಿದ್ದಾರೆ. ಸರ್ಕಾರದ ಕೆಲ ನಿಯಮಗಳು ನಮಗೂ ರೈತರಿಗೂ ಇಬ್ಬರಿಗೂ ತೊಂದರೆ ಆಗುತ್ತಿವೆ ಎಂದು ಹೇಳಿದರು.
ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳನ್ನು ಆಲಿಸಿ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದ ಸರ್ಕಾರವು ಇದುವರೆಗೂ ಯಾವುದೇ ತೃಪ್ತಿಕರ ಕ್ರಮಗಳನ್ನು ಕೈಗೊಂಡಿಲ್ಲ.ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿ, ಪೀಟೋಪಕರಣಗಳನ್ನು ಒದಗಿಸಿಲ್ಲ. ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ಹೊರಡಿಸಬೇಕು.ಅಂತರ್ ಜಿಲ್ಲಾ ವರ್ಗಾವಣೆಯ ನಿಯಮವನ್ನು ಮರು ಸ್ಥಾಪಿಸಬೇಕು ಇಲ್ಲವೇ ಇತರೆ ಇಲಾಖೆಗಳಲ್ಲಿರುವಂತೆ ಕಂದಾಯ ಇಲಾಖೆಯಲ್ಲೂ ವಿಶೇಷ ಮಾರ್ಗಸೂಚಿ ರಚಿಸಬೇಕು. ವಂಶವೃಕ್ಷ, ಜಾತಿ ಪ್ರಮಾಣ ಪತ್ರ ಮುಂತಾದ ಪ್ರಮಾಣ ಪತ್ರಗಳ ವಿಚಾರವಾಗಿ ಕಂದಾಯ ಇಲಾಖೆಯ ಅಧಿಕಾರಿಗಳನ್ನೆ ಹೊಣೆಗಾರರನ್ನಾಗಿಸಿ ದೂರು ದಾಖಲಿಸಲಾಗುತ್ತಿದೆ. ಅದನ್ನು ನಿಲ್ಲಿಸಿ ತಪ್ಪು ಮಾಹಿತಿ ನೀಡಿದ ಅರ್ಜಿದಾರರನ್ನು ನೇರ ಹೊಣೆಗಾರರನ್ನಾಗಿ ಮಾಡಿ ಪ್ರಕರಣ ದಾಖಲಿಸುವಂತಾಗಬೇಕು. ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗೆ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ಹೊರಡಿಸಬೇಕು. ನಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸುವವರೆಗೆ ಎಲ್ಲಾ ಬಗೆಯ ಮೊಬೈಲ್ ಆಪ್ ಹಾಗೂ ವೆಬ್ ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಉಪಾಧ್ಯಕ್ಷೆ ರೇಖಾ, ಖಜಾoಚಿ ಕಾವ್ಯ, ಪ್ರಧಾನ ಕಾರ್ಯದರ್ಶಿ ರವಿ, ಲಕ್ಷ್ಮೀಪತಿ, ಶಿವಪ್ಪ, ಮಾಯಾವರ್ಮ, ವೇದಮೂರ್ತಿ, ಶ್ರೀನಿವಾಸ್, ರಾಜು, ಟಿ ಸ್ವಾಮಿ, ವಾಣಿ, ಜೆಪಿಎಂ ಸ್ವಾಮಿ, ತಿಪ್ಪೇಸ್ವಾಮಿ, ಚಿಕ್ಕಣ್ಣ, ವಿಲಾಸ್, ಮುಂತಾದವರು ಹಾಜರಿದ್ದರು.