ಬೆಂಗಳೂರು, ಮೇ. 03: ಮಾದಿಗ ಸಮುದಾಯದ 30 ವರ್ಷಗಳ ನಿರಂತರ ಹೋರಾಟದ ಫಲ, ಸುಪ್ರೀಂ ಕೋರ್ಟ್ ತೀರ್ಪು ಪರಿಣಾಮ ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಿರುವುದನ್ನು ಸ್ವಾಗತಿಸುವ ಜೊತೆಗೆ ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸುವಂತೆ ಮಾದಿಗರ ಚಿಂತಕರ ದುಂಡು ಮೇಜಿನ ಸಭೆ ಒತ್ತಾಯಿಸಿದರು.


ಬೆಂಗಳೂರಿನ ಶಾಸಕರ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾದಿಗರ ಚಿಂತಕರ ದುಂಡು ಮೇಜಿನ ಸಭೆಯಲ್ಲಿ ಮಾಜಿ ಸಚಿವರು, ಮಾಜಿ ಸಂಸದರು, ನಿವೃತ್ತ ಅಧಿಕಾರಿಗಳು, ಚಿಂತಕರು, ಸಾಹಿತಿಗಳು ಸೇರಿ ಅನೇಕರು ಸುಧೀರ್ಘ ಚರ್ಚೆ ನಡೆಸಿದರು.
ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಗಳಿಗೆ ಬರುವ ಹುದ್ದೆಗಳ ಸಂಖ್ಯೆ 3ಕ್ಕಿಂತ ಕಡಿಮೆ ಇದ್ದರೇ ಎಸ್ಸಿ ಸಾಮಾನ್ಯ ಎಂದು ಪರಿಗಣಿಸುವ ಆದೇಶ ಹಿಂಪಡೆಯಬೇಕು. ರೋಸ್ಟರ್ ಬಿಂದುವಿನಲ್ಲಿ ಇರುವ ದೋಷಗಳನ್ನು ಸರಿಪಡಿಸಲು ಸಮಾಜ ಕಲ್ಯಾಣ ಇಲಾಖೆಗೆ ವಹಿಸಿರುವ ಜವಾಬ್ದಾರಿಯನ್ನು ಹಿಂಪಡೆದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವಹಿಸಬೇಕು. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆ. ಆದ್ದರಿಂದ ಎರಡು ಕಡೆ ಒಳಮೀಸಲಾತಿ ನೀತಿ ಒಂದೇ ರೀತಿ ಇರಬೇಕು. ತೆಲಂಗಾಣ ಮಾದರಿ ಒಳಮೀಸಲಾತಿ ನೀತಿಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಬೇಕು.
ರಾಜ್ಯದಲ್ಲಿ ಆದಿಕರ್ನಾಟಕ, ಆದಿದ್ರಾವಿಡ, ಆದಿಆಂಧ್ರ ಜಾತಿ ಸೂಚಕದಡಿ ಮಾದಿಗರು, ಛಲವಾದಿಗರು ಇಬ್ಬರು ಪ್ರಮಾಣ ಪತ್ರ ಪಡೆಯುತ್ತಿದ್ದು, ಪ್ರಸ್ತುತ ಎ, ಬಿ, ಸಿ ಎಂದು ಒಳಮೀಸಲಾತಿ ವರ್ಗೀಕರಣ ಮಾಡಲಾಗಿದೆ. ವರ್ಗ 1 ಗುಂಪಿನಲ್ಲಿ ಮಾದಿಗ ಮತ್ತು ಸಂಬಂಧಿತ ಜಾತಿಗಳಿದ್ದು, ಈ ಗುಂಪಿಗೆ ಕಳ್ಳದಾರಿಯಲ್ಲಿ ಅನೇಕರು ನುಸುಳುವ ಸಾಧ್ಯತೆ ಇದೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಕ್ರಮಕೈಗೊಳ್ಳಬೇಕೆಂದು ಸಭೆ ನಿರ್ಣಯ ಕೈಗೊಂಡಿತು.
ಒಳಮೀಸಲಾತಿ ಜಾರಿಗೊಂಡಿದ್ದು, ಈ ನಿಟ್ಟಿನಲ್ಲಿ ಒಳಮೀಸಲಾತಿ ಜಾರಿ ಹೋರಾಟದಅಗತ್ಯವಿಲ್ಲ. ಆದರೆ, ಒಳಮೀಸಲಾತಿ ಅನುಷ್ಠಾನದಲ್ಲಿ ಲೋಪ, ವರ್ಗ 1 ಗುಂಪಿಗೆ ನುಳುಸುವುದು ಸೇರಿ ವಿವಿಧ ಸಮಸ್ಯೆಗಳಿಗೆ ಕಡಿವಾಣ ಹಾಕಲು ಮಾದಿಗರ ಒಳಮೀಸಲಾತಿ ಸಂರಕ್ಷಣಾ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಎಚ್.ಆಂಜನೇಯ, ಗೌರವಾಧ್ಯಕ್ಷರಾಗಿ ಡಾ.ಎಲ್.ಹನುಮಂತಯ್ಯ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಜೊತೆಗೆ ಜಿಲ್ಲಾ-ತಾಲ್ಲೂಕು ಮಟ್ಟದಲ್ಲಿ ಸಮಿತಿ ರಚಿಸುವ ಅಧಿಕಾರವನ್ನು ಎಚ್.ಆಂಜನೇಯವರಿಗೆ ವಹಿಸಲಾಯಿತು.
ಒಳಮೀಸಲಾತಿಯಲ್ಲಿನ ಲೋಪಗಳ ಕುರಿತು ಸುಧೀರ್ಘ ಚರ್ಚೆ ನಡೆಸಿದ ಬಳಿಕ ರೋಸ್ಟರ್ ಬಿಂಧು, 3ಕ್ಕಿಂತ ಕಡಿಮೆ ಸಂಖ್ಯೆ ಹುದ್ದೆಗಳನ್ನು ಎಸ್ಸಿ ಸಾಮಾನ್ಯ. ಹೀಗೆ ಸಣ್ಣಪುಟ್ಟ ಲೋಪಗಳನ್ನು ಪಟ್ಟಿ ಮಾಡಲಾಯಿತು. ಇವುಗಳನ್ನು ಸರಿಪಡಿಸುವಂತೆ ಸಚಿವರಾದ ಕೆ.ಎಚ್.ಮುನಿಯಪ್ಪ, ತಿಮ್ಮಾಪುರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಗೆ ನಿಯೋಗ ತೆರಳಿ ಒತ್ತಾಯಿಸಲು ಸಭೆ ನಿರ್ಣಯಿಸಿತು. ಜೊತೆಗೆ ಮಾದಿಗರ ಹೋರಾಟಕ್ಕೆ ಆರಂಭದಿಂದಲೂ ಬೆಂಬಲಿಸಿದ, ಜತೆಗೂಡಿದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಬಿಎಸ್ಪಿಹಾಗೂ ವಿವಿಧ ಸಂಘಟನೆಗಳ ನಡೆಯನ್ನು ಸ್ಮರಿಸಲಾಯಿತು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಯಾರೊಂದಿಗೂ ಸ್ಪರ್ಧೆ ಮಾಡಲು ಶಕ್ತರಲ್ಲವೆಂದೇ ಒಳಮೀಸಲಾತಿ ಜಾರಿಗೆ ಮಾದಿಗರು ಹೋರಾಟ ನಡೆಸಿರುವುದು. ಚಪ್ಪಲಿ ಹೊಲಿಯುವುದು, ಕಸ ಗುಡಿಸುವುದು, ಕೃಷಿ-ಕಟ್ಟಡ ಕಾರ್ಮಿಕರಾಗಿರುವ ಮಾದಿಗರ ಬದುಕು ನಿಕೃಷ್ಠವಾಗಿದೆ ಎಂದರು.
ತಿಳಿವಳಿಕೆ ಕೊರತೆ ಸೇರಿ ಹೀಗೆ ವಿವಿಧ ಕಾರಣಕ್ಕೆ ಶಿಕ್ಷಣ ಪಡೆಯುವಲ್ಲಿ ಹಿಂದುಳಿದಿದ್ದು, ಮೀಸಲಾತಿ ಪಡೆಯುವಲ್ಲಿ ನಿರಂತರ ವಿಫಲವಾಗಿರಿದ್ದೇವೆ. ಇಂತಹ ಸ್ಥಿತಿಯಲ್ಲಿರುವ ನಾವು ಯಾರೊಂದಿಗೂ ಸ್ಪರ್ಧೆ ಮಾಡುವ ಶಕ್ತಿ ಇಲ್ಲ. ಆದ್ದರಿಂದ ಸಂಪೂರ್ಣವಾಗಿ ಒಳಮೀಸಲಾತಿ ಜಾರಿಗೊಳಿಸಬೇಕು. ಯಾವುದೇ ಹುದ್ದೆಗಳನ್ನು ಒಳಮೀಸಲಾತಿ ಇಲ್ಲದೆ ತುಂಬುವಂತಿಲ್ಲ. ಆಗ ಮಾತ್ರ ಮಾದಿಗರಿಗೆ ನ್ಯಾಯ ಕಲ್ಪಿಸಲು ಸಾಧ್ಯ ಎಂದು
ತಿಳಿಸಿದರು.
ಪರಿಶಿಷ್ಟ ಜಾತಿಯಲ್ಲಿಯೇ ಸಿಂಹಪಾಲು ಆಗಿರುವ ನಾವು ಬಡತನ, ಸಂಕಷ್ಟದಿಂದ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ. ನಮ್ಮ ಕೂಗಿಗೆ ಸಿದ್ದರಾಮಯ್ಯ ನ್ಯಾಯ ಕೊಟ್ಟಿದ್ದಾರೆ. ಆದರೆ, ಸಣ್ಣಪುಟ್ಟ ಲೋಪಗಳು ಇದ್ದು ಅವುಗಳನ್ನು ಸರಿಪಡಿಸಿದರೆ ಇನ್ನಷ್ಟು ಸಹಕಾರ ಮಾಡಿದಂತೆ ಆಗಲಿದೆ ಎಂದರು.
ಗಿಡಕ್ಕೆ ನೀರೇರೆಯುವ ಮೂಲಕ ಕಾರ್ಯಕ್ರಮವನ್ನು ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಗೋನಾಳ್ ಭೀಮಪ್ಪ ಉದ್ಘಾಟಿಸಿದರು. ಮಾಜಿ ಸದಸ್ಯ ಎಚ್.ದುಗ್ಗಪ್ಪ, ರಾಜ್ಯಸಭೆ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ, ನಿವೃತ್ತ ಅಧಿಕಾರಿ ಬಾಬುರಾವ್ ಮುಡಬಿ, ವಾಣಿಜ್ಯ ತೆರಿಗೆ ಇಲಾಖೆ ಹಿರಿಯ ನಿವೃತ್ತ ಅಧಿಕಾರಿ ಎಚ್.ಆರ್.ತೇಗನೂರು, ಭೀಮಾಶಂಕರ್, ಸಾಹಿತಿ ದಾಸನೂರು ಕೂಸಣ್ಣ, ಮಾದಿಗ ನೌಕರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್ ಹೊಣಿಕೇರಿ, ಪ್ರ.ಕಾರ್ಯದರ್ಶಿ ಸುಮಂತ್ ಕಟ್ಟಿಮನಿ, ದೇವೇಂದ್ರಪ್ಪ, ಕೆ.ಜಿ.ಜಗದೀಶ್, ರೇವಣ್ಣಸಿದ್ದಪ್ಪ,ಡಾ.ಲಕ್ಷೀನಾರಾಯಣ, ಕೆಂಚಮಾರಯ್ಯ, ಶರಣು ರಾಯಚೂರು, ಸತೀಶ್, ಕಿರಣ್ ಶಿವಪುರ, ವಕೀಲ ರವೀಂದ್ರ ಸೇರಿದಂತೆ ಅನೇಕ ಚಿಂತಕರು ಪಾಲ್ಗೊಂಡಿದ್ದರು.




















