ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗವು ಮಧ್ಯ ಕರ್ನಾಟಕದ ಜನರ ಬಹುಕಾಲದ ಕನಸು. ಈ ಯೋಜನೆ ಪೂರ್ಣಗೊಂಡರೆ ಬೆಂಗಳೂರು-ದಾವಣಗೆರೆ ನಡುವಿನ ಅಂತರ ಕಡಿಮೆ ಆಗಲಿದೆ. ರೈಲುಗಳು ಅರಸೀಕೆರೆ ಮೂಲಕ ಸಾಗುವುದು ತಪ್ಪಲಿದ್ದು, ಪ್ರಯಾಣದ ಸಮಯ ಉಳಿತಾಯ ಆಗಲಿದೆ.
ದಾವಣಗೆರೆ-ಚಿತ್ರದುರ್ಗ-ತುಮಕೂರು ನಡುವೆ ನಿರ್ಮಾಣ ಆಗುತ್ತಿರುವ ನೇರ ರೈಲು ಮಾರ್ಗವನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಗುರುವಾರ ಪರಿಶೀಲನೆ ನಡೆಸಿದ್ದಾರೆ. ವಿಶೇಷ ರೈಲಿನಲ್ಲಿ ಬೆಂಗಳೂರಿನಂದ ದಾವಣಗೆರೆಗೆ ಬಂದ ಅವರು ತಾಲ್ಲೂಕಿನ ತೋಳಹುಣಸೆ ರೈಲು ನಿಲ್ದಾಣದಿಂದ ಪರಿಶೀಲನೆ ಆರಂಭಿಸಿದರು.
ನೇರ ರೈಲು ಮಾರ್ಗ ನಿರ್ಮಾಣ ಕಾಮಗಾರಿ ದಾವಣಗೆರೆ ತಾಲ್ಲೂಕಿನ ಹೆಬ್ಬಾಳ ಗ್ರಾಮದ ವರೆಗೆ ಪೂರ್ಣಗೊಂಡಿದೆ. ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯ ಅಲ್ಲಲ್ಲಿ ರೈಲು ಹಳಿ ಅಳವಡಿಕೆ ಮಾಡಲಾಗಿದೆ. ದಾವಣಗೆರೆಯಿಂದ ಆರಂಭವಾದ ರೈಲು ಮಾರ್ಗದ ಪರಿಶೀಲನೆ ತುಮಕೂರಿನವರೆಗೆ ನಡೆಯಲಿದೆ.
ಬ್ಯಾಟರಿ ಚಾಲಿತ ಮೋಟಾರು ಟ್ರಾಲಿಯಲ್ಲಿ ರೈಲು ಹಳಿಯ ಮೇಲೆ ಸಾಗಿದರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಹಾಗೂ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಜೊತೆಗೆ ಇದ್ದರು.ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್ ಇದ್ದರು.



