ದಾವಣಗೆರೆ: ಉಪಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಆಂಜನೇಯನ ಬಾಲ ಬೆಳೆದಂತೆ ಬೆಳೆಯುತ್ತಾ ಹೋಗ್ತಿದೆ. ಅತ್ತ ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತರು ಕೂಡ ನಮಗೆ ಈ ಬಾರಿಯ ಟಿಕೆಟ್ ಕೊಡಿ ಎಂಬ ಹಠ ಮಾಡಿದ್ದಾರೆ. ಇತ್ತ ಬಿಜೆಪಿಯಲ್ಲಿ ದಶಕಗಳಿಂದ ಇರುವ ಗಲಾಟೆಯಿಂದ ಮೂರನೇಯವರಿಗೆ ಲಾಭವಾಗುವ ಎಲ್ಲಾ ಸಾಧ್ಯತೆಗಳು ಕೂಡ ಎದ್ದು ಕಾಣುತ್ತಿದೆ.
ಈಗಾಗಲೇ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ದಿನಾಂಕ ಅನೌನ್ಸ್ ಆಗಿದ್ದು, ಬಿ.ಜಿ. ಅಜಯ್ ಕುಮಾರ್, ಯಶವಂತ್ ರಾವ್ ಜಾಧವ್, ದೇವರಮನೆ ಶಿವಕುಮಾರ್, ಶ್ರೀನಿವಾಸ್ ದಾಸ್ ಕರಿಯಪ್ಪ, ರಾಜನಹಳ್ಳಿ ಶಿವಕುಮಾರ್ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಆಕಾಂಕ್ಷಿಗಳಾಗಿದ್ದಾರೆ. 2023ರ ಪರಾರ್ಜಿತ ಅಭ್ಯರ್ಥಿ ಬಿ.ಜಿ.ಅಜಯ್ ಕುಮಾರ್ ಪರ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಟೀಂ ಬೆಂಬಲ ನೀಡಿದ್ದರೆ, ಯಶವಂತರಾವ್ ಜಾಧವ್ ಪರ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಟೀಂ ಬೆಂಬಲ ಸೂಚಿಸಿದೆ. ಹೀಗಾಗಿ ಎರಡೂ ಬಣಗಳ ಕುಸ್ತಿಗೆ ಬ್ರೇಕ್ ಹಾಕಲು ಪ್ರಯತ್ನ ಪಟ್ಟು ಸುಸ್ತಾಗಿರುವ ಬಿಜೆಪಿ ನಾಯಕತ್ವ ಈಗ 2024ರ ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯಕುಮಾರ್ ಬಗ್ಗೆಯೂ ಚಿಂತನೆ ನಡೆಸಿದೆ.
ಎರಡೂ ಬಣಗಳ ಕಿತ್ತಾಟಕ್ಕೆ ಬ್ರೇಕ್ ಹಾಕಲು ವಿನಯ್ ಕುಮಾರ್ ಗೆ ಟಿಕೆಟ್ ನೀಡುವ ಬಗ್ಗೆಯೂ ಗಂಭೀರ ಚಿಂತನೆಯಲ್ಲಿದ್ದು, ಈಗಾಗಲೇ ವಿನಯಕುಮಾರ್ ಜೊತೆ ಒಂದು ಸುತ್ತಿನ ಮಾತುಕತೆಯನ್ನೂ ದೆಹಲಿ ಮಟ್ಟದ ನಾಯಕರು ಮುಗಿಸಿದ್ದಾರೆ. ಇದರ ಬೆನ್ನಲ್ಲೇ ರೇಣುಕಾಚಾರ್ಯ ಟೀಂ ಅಲರ್ಟ್ ಆಗಿದ್ದು, ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಈ ಮೂಲಕ ಟಿಕೆಟ್ ಗಾಗಿ ಲಾಭಿ ಮಾಡುವ ಎಲ್ಲಾ ಸಾಧ್ಯತೆಗಳು ಇದಾವೆ.






