ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕೂಗು ದೊಡ್ಡ ಮಟ್ಟದಲ್ಲಿಯೇ ಕೇಳಿ ಬರ್ತಿದೆ. ಡಿಕೆ ಶಿವಕುಮಾರ್ ಬಣದವರು ಡಿಕೆಶಿಗೆ ಜೈಕಾರ ಹಾಕಿ, ನ್ಯಾಯ ಸಿಗಬೇಕು ಅಂದ್ರೆ, ಸಿದ್ದರಾಮಯ್ಯ ಬಣದವರು ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಅಂತಾರೆ. ಈ ಗುದ್ದಾಟದ ನಡುವೆ ಆಗಾಗ ಚಾಲ್ತಿಗೆ ಬರೋದೆ ದಲಿತ ಸಿಎಂ ಕೂಗು. ಈ ಬಾರಿಯು ದಲಿತ ಸಿಎಂ ಕೂಗು ಕೇಳಿಸಿದೆ. ಆದರೆ ಇದಕ್ಕೆ ಗೃಹ ಜಿ ಪರಮೇಶ್ವರ್ ಸೊಪ್ಪು ಹಾಕಿಲ್ಲ. ತಮ್ಮ ನಾಯಕರ ಪರವಾಗಿಯೇ ಮಾತನ್ನಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ಮೇಲೆ ಬದ್ಧರಾಗಿದ್ದಾರೆ. ಹಿಂದಿನಿಂದಲೂ ಕೂಡ ಸಾಮಾಜಿಕ ನ್ಯಾಯದ ಪರವಾಗಿದ್ದಾರೆ. ಅವರ ರಾಜಕೀಯದ ಅಡಿಪಾಯವೇ ಸಾಮಾಜಿಕ ನ್ಯಾಯ. ಹೊಸದಾಗಿ ಇವತ್ತು ಮಾಡುತ್ತಿಲ್ಲ ಎಂದಿದ್ದಾರೆ. ಇದೇ ವೇಳೆ ದಲಿತ ಸಿಎಂ ಕೂಗಿನ ಬಗ್ಗೆ ಮಾತನ್ನಾಡಿ, ಇದೆಲ್ಲಾ ವಿರೋಧ ಪಕ್ಷದವರು ಮಾಡುತ್ತಿರುವ ಕೆಲಸ.
ವಿರೋಧ ಪಕ್ಷಗಳು ತಮ್ಮ ವಿಚಾರಗಳನ್ನ ಮುಚ್ಚಿಟ್ಟುಕೊಳ್ಳಲು ಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಆಡಳಿತ ಮಾಡುತ್ತಿಲ್ವಾ..? ಕಳೆದ ಹನ್ನೆರಡು ದಿನದಿಂದ ಬಜೆಟ್ ಕುರಿತು ವಿವಿಧ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಕೂಗು ವಿಚಾರವನ್ನು ವಿರೋಧ ಪಕ್ಷದವರು ಸುಮ್ಮನೆ ಹೊರಗೆ ತರುತ್ತಿದ್ದಾರೆ. ದಲಿತ ಸಿಎಂ ಕಾಂಗ್ರೆಸ್ ಪಕ್ಷದವರೆ ಮಾಡಬೇಕು ಅಲ್ವಾ. ಇನ್ನ್ಯಾರು ಮಾಡುತ್ತಾರೆ. ಅಂತಹ ಸಂದರ್ಭ ಬಂದಾಗ ಹೈಕಮಾಂಡ್ ನಾಯಕರೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ದಲಿತ ಸಿಎಂ ವಿಚಾರಕ್ಕೆ ಸ್ಪಷ್ಟನೆಯನ್ನ ನೀಡಿದ್ದಾರೆ. ಸದ್ಯಕ್ಕೆ ಸಿಎಂ ಬದಲಾವಣೆಯ ವಿಷಯದ ಜೊತೆಗೆ ದಲಿತ ಸಿಎಂ ಚರ್ಚೆ ಕೂಡ ಜೋರಾಗಿದೆ.



