ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಜೂ. 30 : ವಸತಿ ಇಲಾಖೆಯಲ್ಲಿ ಸಚಿವರು ಹಣವನ್ನು ಪಡೆದು ಮನೆ ನೀಡುವ ಕಾರ್ಯ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಬಿಜೆಪಿ ಸರ್ಕಾರ 40% ರಷ್ಟು ಭ್ರಷ್ಟ ಸರ್ಕಾರ ಅನ್ನುತಿದ್ದರು. ಆದರೆ ಈಗ ಕಾಂಗ್ರೆಸ್ ಸರ್ಕಾರ 50% ರಿಂದ 60% ರಷ್ಟು ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಬಿ.ಇ.ಜಗದೀಶ್ ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮುಗಿಲುಮಟ್ಟಿದೆ. ಹಣ ಕೊಡದೇ ಯಾವುದೇ ಸರ್ಕಾರಿ ಕಛೇರಿಗಳಲ್ಲಿ ಕೆಲಸವಾಗುತ್ತಿಲ್ಲ ಇದರಿಂದ ಬಡವರ ಬದುಕು ದುಸ್ಥಿತಿಯಲ್ಲಿದೆ.ಭ್ರಷ್ಟಾಚಾರವನ್ನು ಮಟ್ಟ ಹಾಕುತ್ತಿದ್ದ ಲೋಕಾಯುಕ್ತ ಅಧಿಕಾರವನ್ನು ಮೊಟುಕುಗೊಳಿಸಿದ್ದಾರೆ. ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರದ ನೀತಿಗಳಿಂದ ಬೇಸತ್ತಿದ್ದಾರೆ.ಲಂಚವಿಲ್ಲದೇ ಯಾವುದೇ ಕಾರ್ಯಗಳು ನಡೆಯುತ್ತಿಲ್ಲ.ಬಿಜೆಪಿ ಪಕ್ಷದ ಮೇಲೆ ಲಂಚದ ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಅವರ ನೀತಿಯನ್ನೇ ಮುಂದುವರಿಸಿದೆ ಎಂದು ದೂರಿದರು.
ಈ ಎರಡು ರಾಜಕೀಯ ಪಕ್ಷಗಳ ಬಗ್ಗೆ ಮತದಾರರು ಬೇಸತ್ತಿದ್ದಾರೆ.. ಮುಂದಿನ ಚುನಾವಣೆಯಲ್ಲಿ ಪರ್ಯಾಯ ಪಕ್ಷವನ್ನು ಗೆಲ್ಲಿಸಬೇಕಾಗಿದೆ.ಇಂದಿನ ಅಧಿಕಾರ ಶೇ 30% ರಷ್ಟು ಇರುವ ಶ್ರೀಮಂತರ ಕೈಯಲ್ಲಿದೆ.. ಶೇ 70% ರಷ್ಟು ಇರುವ ಬಡವರು ಮತ್ತೆ ಬಡವರಾಗುತ್ತಿದ್ದಾರೆ.ಕಾಂಗ್ರೆಸ್ ಪಕ್ಷದ ಶಾಸಕರುಗಳೇ ತಮ್ಮ ಪಕ್ಷದ ಸಚಿವರ ವಿರುದ್ಧ ಕಿಡಿ ಕಾರುತ್ತಿದ್ದಾರೆ.ಅಧಿಕಾರಿಗಳ ಮೂಲಕ ರಾಜಕಾರಣಿಗಳು ಹಣವನ್ನು ಸಂಗ್ರಹಿಸುತ್ತಿದ್ದಾರೆ.. ಇದಕ್ಕೆ ಯಾವುದೇ ಸಾಕ್ಷಿ ಸಿಗುತ್ತಿಲ್ಲ ಆದ್ದರಿಂದ ರಾಜಕಾರಣಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.ರಾಜ್ಯದಲ್ಲಿನ ಒಂದು ಪಕ್ಷ ಧರ್ಮದ ಕಡೆಯಾದರೆ.. ಮತ್ತೊಂದು ಪಕ್ಷ ನಿಗದಿತವಾದ ಜಾತಿಯನ್ನು ಓಲೈಕೆ ಮಾಡುತ್ತಿದೆ.. ಇದರಿಂದ ಇತರೆಯವರು ಸಂಕಷ್ಟಕ್ಕೆ ಈಡಾಗಿದ್ದಾರೆ ಎಂದ ಅವರು ಕಾಂಗ್ರೆಸ್ ಸರ್ಕಾರ ತನ್ನ ಚಾಳಿಯನ್ನು ಸರಿಪಡಿಸಿಕೊಳ್ಳದಿದ್ದರೆ ಅವರ ವಿರುದ್ದ ಹೋರಾಟವನ್ನು ಮಾಡುವುದಾಗಿ ಎಚ್ಚರಿಸಿದರು.
ಗೋಷ್ಟಿಯಲ್ಲಿ ಕಾರ್ಯದರ್ಶಿ ರಾಮಣ್ಣ, ಸಂಘಟನಾ ಕಾರ್ಯದರ್ಶಿ ರವಿ, ಪ್ರಧಾನ ಕಾರ್ಯದರ್ಶಿ ಲೋಕೇಶ್, ಜಂಟಿ ಕಾರ್ಯದರ್ಶಿ ದಾಸಪ್ಪ ಭಾಗವಹಿಸಿದ್ದರು.

