ಧಾರವಾಡ: ವಿವಿಯ ಪ್ರಸಾರಾಂಗದಿಂದ ಮುದ್ರಿತವಾಗಿರುವ ವಿವಿಯ ಪದವಿ ಪುಸ್ತಕ ಬೆಳಗು -1ರಲ್ಲಿ ಯಡವಟ್ಟಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಬಿಎ, ಬಿ ಮ್ಯೂಸಿಕ್, ಬಿಎಫ್ಎ, ಬಿಎಸ್ಡಬ್ಲ್ಯೂ, ಬಿವಿಎ ಪದವಿಗಳ ಪ್ರಥಮ ಸೆಮಿಸ್ಟರ್ ಕನ್ನಡ ಪಠ್ಯ ಪುಸ್ತಕದಲ್ಲಿ ಬಲಪಂಥೀಯ ಚಿಂತನೆಯನ್ನು ಹೇರಲಾಗಿದೆ ಎಂದು ಧಾರವಾಡದ ಹಿರಿಯ ನ್ಯಾಯವಾದಿ ಅರುಣ ಜೋಶಿ ಆರೋಪಿಸಿದ್ದಾರೆ. ರಾಷ್ಟ್ರ ಚಿಂತನೆಯ ಮಹತ್ವ ಹೇಳುವ ಎನ್ಇಪಿ ಪದ್ಧತಿ ಅನ್ವಯ ಮುದ್ರಣಗೊಂಡಿರುವ ಅನೇಕ ವಿಷಯ ತಜ್ಞರು ಪರಿಷ್ಟರಿಸಿರುವ ಮಹತ್ವದ ಪಠ್ಯ ಪುಸ್ತಕವೇ ಇದೀಗ ವಿವಾದಕ್ಕೆ ಈಡಾಗಿದೆ.
ಪುಸ್ತಕದಲ್ಲಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುವುದರ ಜೊತೆಗೆ ಕೋಮು ದ್ವೇಷ ಹುಟ್ಟಿಸುವ ರೀತಿಯಲ್ಲಿ ಪಠ್ಯ ಅಳವಡಿಸಲಾಗಿದೆ ಎಂದು ನ್ಯಾಯವಾದಿ ಅರುಣ ಜೋಶಿ ಆರೋಪಿಸಿದ್ದಾರೆ. ಈ ಸಂಬಂಧ ವಿವಿ ಕುಲಪತಿಗೆ ಎಚ್ಚರಿಕೆಯ ಪತ್ರವನ್ನೂ ರವಾನಿಸಿದ್ದು, ಪಠ್ಯ ವಾಪಾಸ್ ಪಡೆಯಲು ಆಗ್ರಹಿಸಿದ್ದಾರೆ. ಇಲ್ಲದೆ ಹೋದಲ್ಲಿ ಕೋರ್ಟ್ ನಲ್ಲಿ ದಾವೆ ಹೂಡುವ ಎಚ್ಚರಿಕೆಯನ್ನು ನೀಡಿದ್ದಾರೆ. ಪಠ್ಯಪುಸ್ತಕದಲ್ಲಿ ಧಾರಾವಾಡದ ಕರ್ನಾಟಕ ವಿವಿ ಯಡವಟ್ಟು ಮಾಡಿಕೊಂಡಿದೆ.
ಪಠ್ಯ ಪುಸ್ತಕ ವಿವಾದಕ್ಕೀಡಾಗಲೂ ಪುಸ್ತಕದ 4ನೇ ಅಧ್ಯಾಯದಲ್ಲಿ ರಾಷ್ಟ್ರೀಯತೆಯ ಆಚರಣೆಯ ಸುತ್ತ ಎಂಬ ಲೇಖನವಿದೆ. ಇದೇ ವಿವಾದಕ್ಕೆ ಕಾರಣವಾಗಿರುವುದು. ಇದರ ವಿಚಾರವಾಗಿಯೇ ಅರುಣ ಜೋಶಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾರತಾಂಬೆಯ ಕಲ್ಪನೆ ಎಂಬ ಉಪ ಅಧ್ಯಾಯದಲ್ಲಿ ಭಾರತ ಮಾತೆಯ ಚಿತ್ರವು ಹಿಂದೂ ಮಾತೆಯ ಚಿತ್ರವಾಗಿದೆ. ಇದು ಒಂದು ವರ್ಗದ ಸಮುದಾಯದ ಕಲ್ಪನೆಯಾಗಿದೆ. ಇದನ್ನು ಇತರರು ಒಪ್ಪುವಂತೆ ಒತ್ತಾಯಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಪ್ರತಿ ಸಭೆ ಸಮಾರಂಭಗಳಲ್ಲಿ ಭಾರತ ಮಾತಾಕೀ ಜೈ ಎಂದಾಗ ಇತರರು ಜೈ ಎನ್ನುತ್ತಾರೆ. ಆದರೆ ಈ ಜೈ ಎನ್ನುವ ಕಲ್ಪನೆ ಇನ್ನೊಬ್ಬರ ಸೋಲನ್ನು ನೆನಪಿಸುತ್ತದೆ ಎಂದು ಬರೆಯಲಾಗಿದೆ ಎಂದು ಅರುಣ ಜೋಶಿ ಆರೋಪಿಸಿದ್ದಾರೆ.