ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ. 27 : ಕಟ್ಟಡ ನಿರ್ಮಾಣದ ಕೆಲಸ ಮಾಡುವಾಗ ಸುರಕ್ಷಾ ಕಿಟ್ಗಳನ್ನು ಧರಿಸಿಕೊಳ್ಳುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಾಲಚಂದ್ರ ಬಗಟಿ ಕಾರ್ಮಿಕರಿಗೆ ಸೂಚಿಸಿದರು.
ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದಿಂದ ಪತ್ರಕರ್ತರ ಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಹದಿನಾರನೆ ವರ್ಷದ ಕಾರ್ಮಿಕರ ದಿನಾಚರಣೆ ಹಾಗೂ ನೊಂದಾಯಿತ ಕಟ್ಟಡ ಕಾರ್ಮಿಕರ ಪ್ರತಿಭಾವಂತ ಮಕ್ಕಳ ಸನ್ಮಾನ ಸಮಾರಂಭ ಉದ್ಗಾಟಿಸಿ ಮಾತನಾಡಿದರು.
ಕಟ್ಟಡ ಕಾರ್ಮಿಕರು ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಪಡೆದುಕೊಳ್ಳಬೇಕಾದರೆ ಆಧಾರ್ ಕಾರ್ಡ್ನಲ್ಲಿರುವಂತೆ ಹೆಸರುಗಳನ್ನು ನಮೂದಿಸಬೇಕು. ಮಕ್ಕಳ ವಿದ್ಯಾರ್ಥಿವೇತನ, ವಿವಾಹಕ್ಕೆ ಧನ ಸಹಾಯಕ್ಕಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಕಾಲ ಕಾಲಕ್ಕೆ ತಕ್ಕಂತೆ ಗುರುತಿನ ಚೀಟಿ ನವೀಕರಣವಾಗಬೇಕು. ನಿಜವಾದ ಕಾರ್ಮಿಕರು ಗುರುತಿನ ಚೀಟಿಗಳನ್ನು ಪಡೆದುಕೊಳ್ಳಬೇಕು. ವಿವಾಹವಾಗಿ ಒಂದು ತಿಂಗಳ ನಂತರ ಸಹಾಯ ಧನಕ್ಕೆ ಅರ್ಜಿಗಳನ್ನು ಸಲ್ಲಿಸಿದರೆ ಒಳ್ಳೆಯದು ಎಂದು ಕಾರ್ಮಿಕರಿಗೆ ತಿಳಿಸಿದರು.
ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಕಾರ್ಮಿಕರು ಚಿಕಿತ್ಸೆ ಪಡೆದುಕೊಂಡಾಗ ಮಾತ್ರ ವೈದ್ಯಕೀಯ ವೆಚ್ಚ ಭರಿಸಲು ಸಾಧ್ಯ. ಅರವತ್ತು ವರ್ಷಗಳ ನಂತರ ಕಟ್ಟಡ ಕಾರ್ಮಿಕರು ಪಿಂಚಣಿ ಪಡೆದುಕೊಳ್ಳಲು ಅರ್ಹರು. 55 ವರ್ಷಗಳಾದ ನಂತರ ಗುರುತಿನ ಚೀಟಿ ನವೀಕರಣಗೊಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ಸೌಲಭ್ಯಗಳನ್ನು ಪಡೆಯುವುದು ಕಷ್ಟವಾಗುತ್ತದೆ. ಕಟ್ಟಡ ಕಟ್ಟುವಾಗ ಆದಷ್ಟು ಮೊಬೈಲ್ನಲ್ಲಿ ಮಾತನಾಡುವುದನ್ನು ಕಮ್ಮಿ ಮಾಡಿ. ಸೇಫ್ಟಿ ಬೆಲ್ಟ್ಗಳನ್ನು ಹಾಕಿಕೊಳ್ಳಿ. ವಿಜ್ಞಾನ-ತಂತ್ರಜ್ಞಾನ ಮುಂದುವರೆದಂತೆ ಕೆಲಸದಲ್ಲಿ ನೈಪುಣ್ಯತೆಯನ್ನು ಕಂಡುಕೊಳ್ಳಿ. ದುಶ್ಚಟಗಳಿಂದ ದೂರವಿದ್ದು, ಉತ್ತಮ ಆರೋಗ್ಯ ಕಾಪಾಡಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ತೇರ್ಗಡೆಯಾಗಿರುವ ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ ನಡೆಸುವ ಚಿಂತನೆಯಿದೆ. ಇದರಿಂದ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ನೆರವಾಗಲಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡಿ ದಿನವಿಡೀ ಕಷ್ಟಪಟ್ಟು ದುಡಿಯುವ ಹಣವನ್ನು ದುಶ್ಚಟಕ್ಕೆ ಬಳಸುವ ಬದಲು ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಡಿಸಿ ಉನ್ನತ ಅಧಿಕಾರಿಗಳನ್ನಾಗಿ ಮಾಡಿ. ಆಗ ನೀವುಗಳು ಪಡುವ ಶ್ರಮಕ್ಕೆ ತಕ್ಕ ಫಲ ಸಿಕ್ಕಂತಾಗುತ್ತದೆ. ಧೂಮಪಾನ, ಮದ್ಯಪಾನ, ಗುಟ್ಕದಿಂದ ದೂರವಿದ್ದು ಆರೋಗ್ಯಂತರಾಗಿರಿ ಎಂದು ಕಾರ್ಮಿಕರಿಗೆ ಕಿವಿಮಾತು ಹೇಳಿದರು.
ಶ್ರಮ ಪಟ್ಟು ದುಡಿಯುವ ನೀವುಗಳು ಯಾವುದೇ ಕಾರಣಕ್ಕೂ ಸೋಮಾರಿಗಳಾಗಬೇಡಿ. ಶ್ರಮಜೀವಿಗಳಾಗಿರುವ ನಿಮ್ಮಲ್ಲಿ ಶಕ್ತಿಯಿಲ್ಲದಂತಾದರೆ ಕಟ್ಟಡವನ್ನು ಹೇಗೆ ಕಟ್ಟುತ್ತೀರಾ ಎಂದು ಕಾರ್ಮಿಕರನ್ನು ಪ್ರಶ್ನಿಸಿದ ವೈ.ತಿಪ್ಪೇಸ್ವಾಮಿ ವಾಹನ ಚಾಲನೆ ಹಾಗೂ ಕಟ್ಟಡ ನಿರ್ಮಾಣ ಸಮಯದಲ್ಲಿ ಮೊಬೈಲ್ನಲ್ಲಿ ಮಾತನಾಡಿದರೆ ಅಪಘಾತವಾಗುವ ಸಾಧ್ಯತೆಗಳಿರುತ್ತವೆ. ಆಕಸ್ಮಿಕವಾಗಿ ಪ್ರಾಣ ಕಳೆದುಕೊಂಡರೆ ನಿಮ್ಮನ್ನೆ ನಂಬಿರುವ ಕುಟುಂಬ ಬೀದಿಗೆ ಬೀಳುತ್ತದೆ. ಅದಕ್ಕಾಗಿ ಎಚ್ಚರದಿಂದಿರಿ ಕಾನೂನು ಉಲ್ಲಂಘನೆ ಮಾಡಬೇಡಿ ಎಂದು ತಿಳಿಸಿದರು.
ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವೈ.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಹೆಚ್.ಹಾಲೇಶಪ್ಪ, ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ಎಂ.ಮಲ್ಲಿಕಾರ್ಜುನ್, ಮಹಿಳಾ ಪ್ರಧಾನ ಕಾರ್ಯದರ್ಶಿ ಪಿ.ಲಕ್ಷ್ಮಿದೇವಿ, ಖಜಾಂಚಿ ಟಿ.ಅಶೋಕ ಕಾನೂನು ಸಲಹೆಗಾರ ಶಿವಮೂರ್ತಿ ಸೇರಿದಂತೆ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.
ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ಕಾರ್ಮಿಕರ ಮಕ್ಕಳನ್ನು ಸನ್ಮಾನಿಸಲಾಯಿತು.


