10 ಸಾವಿರ ಕೋಟಿ ರೂ.ವೆಚ್ಚದಲ್ಲಿ ಮನೆಗಳ ನಿರ್ಮಾಣ: ಸಚಿವ ಶ್ರೀರಾಮುಲು

suddionenews
2 Min Read

ಬಳ್ಳಾರಿ,(ಮಾ.01): ಈ ಸಾಲಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ-ಸರ್ವರಿಗೂ ಸೂರು(ನಗರ) ಯೋಜನೆ ಅಡಿಯಲ್ಲಿ ಬಳ್ಳಾರಿ ನಗರದ ವಿವಿಧ ಕೊಳಚೆ ಪ್ರದೇಶಗಳಲ್ಲಿ 1260 ಮನೆಗಳ ನಿರ್ಮಾಣಕ್ಕೆ ಮಂಗಳವಾರ ನಗರದ ಬಸವನಕುಂಟೆ ಪ್ರದೇಶದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭೂಮಿಪೂಜೆ ನೆರವೇರಿಸಿದರು.

ಪ್ರತಿ ಮನೆಗೆ ತಗಲುವ ವೆಚ್ಚ 6.97ಲಕ್ಷ ರೂ.ಗಳಾಗಲಿದ್ದು, ಎಸ್ಸಿ/ಎಸ್ಟಿ ಫಲಾನುಭವಿಗಳಿಗೆ ಕೇಂದ್ರ ಸರಕಾರ 1.50ಲಕ್ಷ, ರಾಜ್ಯ ಸರಕಾರ 2 ಲಕ್ಷ ರೂ. ಎಸ್ಸಿಪಿ/ಟಿಎಸ್ಪಿ ಸಹಾಯಧನ 75 ಸಾವಿರ ಒದಗಿಸಲಿದ್ದು, ಫಲಾನುಭವಿ ವಂತಿಗೆ(ಶೇ.10) 69,700 ರೂ. ಭರಿಸಲಿದ್ದಾರೆ. ಬ್ಯಾಂಕ್ ಸಾಲ 2.02ಲಕ್ಷ ರೂ. ಒದಗಿಸಲಾಗುತ್ತದೆ. ಅದೇ ರೀತಿ ಅಲ್ಪಸಂಖ್ಯಾತರು ಹಾಗೂ ಇತರೇ ವರ್ಗದವರಿಗೆ ಕೇಂದ್ರ 1.50ಲಕ್ಷ ರೂ.,ರಾಜ್ಯ ಸರಕಾರ 1.20ಲಕ್ಷ ರೂ. ಸಹಾಯಧನ ಒದಗಿಸಲಿದ್ದು, ಫಲಾನುಭವಿ ವಂತಿಗೆ(ಶೇ.15)1.04ಲಕ್ಷ ರೂ. ಭರಿಸಲಿದ್ದಾರೆ. ಬ್ಯಾಂಕ್ ಸಾಲ 3.22ಲಕ್ಷ ರೂ. ಒದಗಿಸಲಾಗುತ್ತದೆ.

2017-18ನೇ ಸಾಲಿನಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಬಳ್ಳಾರಿ ನಗರದಲ್ಲಿ 14688 ಲಕ್ಷ ರೂ.ಗಳ ವೆಚ್ಚದಲ್ಲಿ 2801 ಮನೆಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಈ ಸಾಲಿನಲ್ಲಿ ಬಳ್ಳಾರಿ ನಗರದಲ್ಲಿ 23086 ಲಕ್ಷ ರೂ.ಗಳ ವೆಚ್ಚದಲ್ಲಿ 3511 ಮನೆಗಳು ನಿರ್ಮಿಸಲು ಉದ್ದೇಶಿಸಲಾಗಿದೆ.

ಭೂಮಿಪೂಜೆ ನೆರವೇರಿಸಿದ ನಂತರ ಮಾತನಾಡಿದ ಸಚಿವ ಶ್ರೀರಾಮುಲು ಅವರು ರಾಜ್ಯದಲ್ಲಿ 2021-22ನೇ ಸಾಲಿನಲ್ಲಿ 10,194 ಕೋಟಿ ರೂ. ವೆಚ್ಚದಲ್ಲಿ ಮನೆಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು,ಇವುಗಳನ್ನು 3ವರ್ಷದೊಳಗೆ ನಿರ್ಮಿಸುವ ಗುರಿಯನ್ನು ಸರಕಾರ ಹಾಕಿಕೊಳ್ಳಲಾಗಿದೆ ಎಂದರು.

ಬಳ್ಳಾರಿ ನಗರದಲ್ಲಿ 1264 ಮನೆಗಳಿಗೆ ಭೂಮಿಪೂಜೆ ನೆರವೇರಿಸಲಾಗಿದ್ದು,ಉಳಿದ ಮನೆಗಳ ಕಾಮಗಾರಿಯೂ ಶೀಘ್ರ ಆರಂಭಿಸಲಾಗುವುದು ಎಂದು ಹೇಳಿದ ಸಚಿವ ಶ್ರೀರಾಮುಲು ಅವರು ಬಳ್ಳಾರಿ ನಗರದ 60 ಸ್ಲಂಗಳ 50 ಸಾವಿರ ಜನರಿಗೆ ಹಕ್ಕುಪತ್ರಗಳನ್ನು ಅದಷ್ಟು ಶೀಘ್ರ ವಿತರಿಸಲಾಗುವುದು ಎಂದರು.

ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 2022-23ರೊಳಗೆ ಗುಡಿಸಲು ಮುಕ್ತ ಭಾರತ ಕನಸು ಕಂಡಿದ್ದು,ಅದರಂತೆ ಬಳ್ಳಾರಿ ನಗರದಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿರುವ ಬಡ ಜನರಿಗೆ ವಿವಿಧ ಯೋಜನೆಗಳಡಿ ಮನೆಗಳನ್ನು ಒದಗಿಸುವುದಕ್ಕೆ ನಮ್ಮ ಸರಕಾರ ಆದ್ಯತೆ ನೀಡಿದೆ ಎಂದರು.

ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ಪಾಲನ್ನ,ಮಹಾನಗರ ಪಾಲಿಕೆ ಸದಸ್ಯರು ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಮತ್ತಿತರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *