ಸುದ್ದಿಒನ್, ಚಿತ್ರದುರ್ಗ, ಜೂ. 01 : ಹರಿಹರಗುರು ಅಡ್ವೋಕೇಟ್ಸ್ ಅಂಡ್ ಅಸೋಸಿಯೇಟ್ಸ್ ನ ಹಿರಿಯ ವಕೀಲರು, ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು, ಗಾಯಕರು, ರಂಗಭೂಮಿ ನಟ, ಅಂಬೇಡ್ಕರ್ ಚಿಂತಕ, ಮೀಸಲಾತಿ ಹೋರಾಟಗಾರರು, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷರಾದ ಡಾ. ಎಂ.ಸಿ.ನರಹರಿ (53) ಅವರು ಅನಾರೋಗ್ಯದಿಂದ ಜೂನ್ 1 ರ ಭಾನುವಾರ ಬೆಳಗ್ಗೆ ನಿಧನ ಹೊಂದಿದರು.
ಎರಡು ದಿನಗಳ ಹಿಂದಷ್ಟೇ ಅನಾರೋಗ್ಯಕ್ಕೆ ತುತ್ತಾಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಾಯಿ, ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಅಪಾರ ಮಿತ್ರಬಳಗ ಬಂಧು ಬಳಗವನ್ನು ಅಗಲಿದ್ದಾರೆ. ಚಿತ್ರದುರ್ಗದ ಕೆಳಗೋಟೆ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸ್ವಗ್ರಾಮ ರಾಷ್ಟ್ರೀಯ ಹೆದ್ದಾರಿ ಪಕ್ಕದ ಬುರುಜಿನರೊಪ್ಪ ಸಮೀಪದ ಮರಡಿಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಟಿ.ಡಿ.ಗುರುನಾಥ್ ಅವರು ತಿಳಿಸಿದ್ದಾರೆ.
ಎರಡು ದಶಕಗಳ ಹಿಂದೆ ಬೆಂಗಳೂರಿನಲ್ಲಿ ಕನ್ನಡ ಪ್ರಭ ವರದಿಗಾರರಾಗಿದ್ದರು. ಚಿತ್ರದುರ್ಗ ನಗರದ ಕೆಳಗೋಟೆಯ ಐತಿಹಾಸಿಕ ಚನ್ನಕೇಶವ ದೇವಸ್ಥಾನ ಸಮಿತಿಯ ಧರ್ಮದರ್ಶಿಯಾಗಿ ಧಾರ್ಮಿಕ ಸೇವಾ ಕಾರ್ಯದಲ್ಲಿ ನಿರತರಾಗಿದ್ದರು. ಒಳಮೀಸಲಾತಿ ಹೋರಾಟಗಾರದಲ್ಲಿ ಸಕ್ರಿಯವಾಗಿದ್ದರು.




