ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 22 : ಬಂಜಾರ ಸಮಾಜಕ್ಕೆ ಒಳ ಮೀಸಲಾತಿಯಲ್ಲಿ ಅನ್ಯಾಯವಾಗಿರುವುದನ್ನು ವಿರೋಧಿಸಿ ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಕೋಲಂಬೋ, ಕೊರಚ, ಕೊರಮ, ಲಂಬಾಣಿ ಮತ್ತು ಭೋವಿ ಸಮಾಜ ಬಲಗೈ ಹಾಗೂ ಎಡಗೈ ಸಮುದಾಯಕ್ಕಿಂತ ಜಾಸ್ತಿಯಿದೆ. ಮಾದಿಗ ಸಮಾಜ ಶೈಕ್ಷಣಿಕ, ಆರ್ಥಿಕ ಸಾಮಾಜಿಕವಾಗಿಯೂ ಮುಂದಿದೆ. ಈ ದತ್ತಾಂಶವನ್ನು ಗಮನಿಸಿದಾಗ ಕೋಲಂಬೋ ಸಮಾಜ ಅತಿ ಹಿಂದುಳಿದಿದೆ. ಸೌಲಭ್ಯಗಳಿಂದ ವಂಚಿತರಾಗಿರುವ ಇತರೆ 59 ಜಾತಿಗಳನ್ನು ನಮ್ಮೊಟ್ಟಿಗೆ ಸೇರಿಸಿರುವುದರಿಂದ ಈ ಸಮಾಜಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು. ಸ್ಪರ್ಶ ಹಾಗೂ ಅಸ್ಪರ್ಶ ಕಾನೂನುಬಾಹಿರ ಪದಗಳೆಂದು ಸುಪ್ರೀಂಕೋರ್ಟ್ ಹೇಳಿದೆ. ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ದೋಷಪೂರಿತವಾಗಿರುವ ನಾಗಮೋಹನ್ದಾಸ್ ಆಯೋಗದ ವರದಿಯನ್ನು ವಿರೋಧಿಸಿ ಪ್ರತಿಭಟನಾಕಾರರು ರಾಜ್ಯದ ಮುಖ್ಯಮಂತ್ರಿ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಕರ್ನಾಟಕ ಪ್ರದೇಶ ಬಂಜಾರ ಲಂಬಾಣಿ ಸೇವಾ ಸಂಘದ ಜಿಲ್ಲಾಧ್ಯಕ್ಷ ಆರ್.ಗಿರೀಶ್ನಾಯ್ಕ, ವೈ.ಕುಮಾರ್, ಬಂಜಾರ ಸಮಾಜದ ಮುಖಂಡರುಗಳಾದ ವೀಣಬಾಯಿ ಹಾಲನಾಯ್ಕ, ಬಸವರಾಜ್ನಾಯ್ಕ, ಶಿವನಾಯ್ಕ, ಮಾರುತೇಶ್, ಅನಂತಮೂರ್ತಿನಾಯ್ಕ ಇವರುಗಳು ಈ ಸಂದರ್ಭದಲ್ಲಿದ್ದರು.




