ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 09 : ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷನ್ನಾಗಿ ಹಾಲಿ ತಾಲ್ಲೂಕಾಧ್ಯಕ್ಷ ಕೆ.ಮಲ್ಲೇಶ್ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಆರ್.ಮಂಜುನಾಥ್ ತಿಳಿಸಿದ್ದಾರೆ.
ಎಸ್ಜಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಸಂಘದ ಸಭೆಯಲ್ಲಿ ಸರ್ವಾನುಮತದ ನಿರ್ಣಯದ ಮೇಲೆ ಈ ನೇಮಕ ಮಾಡಲಾಗಿದೆ. ನಗರಸಭೆ ಉಪಾಧ್ಯಕ್ಷ, ಪ್ರಭಾರ ಅಧ್ಯಕ್ಷರಾಗಿ ಆಡಳಿತ ನಡೆಸಿರುವ ಮಲ್ಲೇಶ್, ತಾಲ್ಲೂಕಾಧ್ಯಕ್ಷರಾಗಿ ಸಂಘದ ಬಲವರ್ಧನೆಗೆ ಶ್ರಮಿಸಿದ್ದಾರೆ. ಅವರ ಸಂಘಟನಾ ಚಟುವಟಿಕೆ ಗುರುತಿಸಿ ಈ ನೇಮಕ ಮಾಡಲಾಗಿದ್ದು, ತೆರವಾಗಿರುವ ತಾಲ್ಲೂಕು ಅಧ್ಯಕ್ಷ ಸ್ಥಾನಕ್ಕೆ ಶೀಘ್ರ ಬೇರೆಯವರನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ನಗರದ ಜೆಜೆ ಹಟ್ಟಿ ಸಾಮಾನ್ಯ ಕುಟುಂಬದ ಮಲ್ಲೇಶ್ ನಗರಸಭೆ ಸದಸ್ಯ, ಉಪಾಧ್ಯಕ್ಷ, ಪ್ರಭಾರ ಅಧ್ಯಕ್ಷರಾಗಿ ಆಡಳಿತ ನಡೆಸಿದ ಅನುಭವ ಹೊಂದಿದ್ದಾರೆ. ಜಿಲ್ಲೆಯಲ್ಲಿ ಪ್ರಭಾವಿ ರಾಜಕೀಯ ಮುಖಂಡರು ಆಗಿರುವ ಕೆ.ಮಲ್ಲೇಶ್ ಜನಪರ ಹೋರಾಟಗಳಿಗೆ ಬೆನ್ನೆಲುಬಾಗಿ ನಿಂತಿದ್ದು, ಗುತ್ತಿಗೆದಾರರಾಗಿ ಉತ್ತಮ ಹೆಸರು ಗಳಿಸಿದ್ದಾರೆ. ಪ್ರಸ್ತುತ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಕುರಿತು ಸಂಘದ ರಾಜ್ಯ ನಿರ್ದೇಶಕ ಕುಮಾರಸ್ವಾಮಿ, ಪದಾಧಿಕಾರಿಗಳಾದ ಎಂ.ಮೈಲಾರಪ್ಪ, ರಮೇಶ್ ಕೋಟಿ, ಲಕ್ಷಣ್ ಇತರರು ಸಂತಸ ವ್ಯಕ್ತಪಡಿಸಿದ್ದಾರೆ.

