ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 14 : ನಗರದ ಕೆಳಗೋಟೆ ಸಿ.ಕೆ.ಪುರ ಬಡಾವಣೆಯ ವಾಸಿ ಸಂತೋಷ್ ಅವರ ಮನೆಯಲ್ಲಿ 2020 ರಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಜೆಎಂ ನ್ಯಾಯಾಲಯವು ಆರೋಪಿ
ಉಮಾಶಂಕರರೆಡ್ಡಿ (34 ವರ್ಷ) ಎಂಬಾತನಿಗೆ 02 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 3000/-ರೂ.ದಂಡ ವಿಧಿಸಿ ಆದೇಶಿಸಿದೆ.
ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ
ಕೊಟಂಪಲ್ಲಿ ಗ್ರಾಮದ ಉಮಾಶಂಕರರೆಡ್ಡಿ ನಗರದ ಸಂತೋಷ್ ಅವರ ಮನೆಗೆ ಬೀಗ ಹಾಕಿಕೊಂಡು ಹೋದ
ಸಮಯದಲ್ಲಿ ದಿನಾಂಕ: 29/12/2020 ರಂದು ರಾತ್ರಿವೇಳೆ ಮನೆಯ ಮುಂಬಾಗಿಲ ಬೀಗ ಮುರಿದು ಒಳಗೆ ಪ್ರವೇಶಿಸಿ ಮನೆಯಲ್ಲಿದ್ದ 55 ಗ್ರಾಂ ತೂಕದ ಅಂದಾಜು 2,20,000/-ರೂ ಬೆಲೆ ಬಾಳುವ ವಿವಿಧ ರೀತಿಯ ಬಂಗಾರದ ಆಭರಣಗಳು ಹಾಗೂ 7000/- ರೂಪಾಯಿ ನಗದು ಹಣವನ್ನು ಕಳವು ಮಾಡಿದ್ದನು. ಈ ಬಗ್ಗೆ ಬಡಾವಣೆ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಡಾವಣೆ ಪೊಲೀಸ್
ಠಾಣೆಯ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ, ಕಳುವಾದ ಆಭರಣಗಳನ್ನು ವಶಪಡಿಸಿಕೊಂಡು ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಸಿಜೆಎಂ ನ್ಯಾಯಾಲಯವು ಇಂದು (ಆಗಸ್ಟ್. 14 ರಂದು) ಆರೋಪಿ ಉಮಾಶಂಕರರೆಡ್ಡಿ ಅಪರಾಧಿಯೆಂದು ಘೋಷಿಸಿ, 02 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 3000/-ರೂ.ದಂಡ ವಿಧಿಸಿದೆ.
ಈ ಪ್ರಕರಣದಲ್ಲಿ ಪಾಲ್ಗೊಂಡ ಬಡಾವಣೆ ಠಾಣೆಯ ಪೊಲೀಸರ ಕಾರ್ಯಕ್ಕೆ ಚಿತ್ರದುರ್ಗ ಜಿಲ್ಲೆಯ ಪೊಲೀಸ್ ಅಧೀಕ್ಷಕರವರು ಶ್ಲಾಘನೆಯನ್ನು ವ್ಯಕ್ತಪಡಿಸಿರುತ್ತಾರೆ.






