ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಚಿತ್ರದುರ್ಗದ ದಂಪತಿ ಸೇರಿ 50 ಮಂದಿ ಪ್ರವಾಸಿಗರು

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 01  : ಇರಾನ್ ಹಾಗೂ ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಧ್ಯಪ್ರಾಚ್ಯದಲ್ಲಿ ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚಾಗುತ್ತಿದೆ. ಈ ದೇಶಗಳಿಗೆ ಪ್ರವಾಸಕ್ಕೆಂದು ತೆರಳಿರುವ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ಪ್ರಮುಖವಾಗಿ ದುಬೈನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್‌ ದಾಳಿ ನಡೆಸಿದೆ. ಈ ವಿಮಾನ ನಿಲ್ದಾಣದಲ್ಲಿ ಅನೇಕ ಕನ್ನಡಿಗರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಈ ಪ್ರವಾಸದಲ್ಲಿ ಚಿತ್ರದುರ್ಗ ನಗರದ ವಿದ್ಯಾನಗರ ನಿವಾಸಿ ಜಿ.ಹೆಚ್. ರಾಮಾಂಜನೇಯ ಮತ್ತು ಶ್ರೀಮತಿ ಮಂಜುಳಾ ದಂಪತಿ, 15 ಮಂದಿ ಜಗಳೂರು ತಾಲ್ಲೂಕಿನವರು, ಮತ್ತು ಉಳಿದ 33 ಮಂದಿ ಬಳ್ಳಾರಿ ಜಿಲ್ಲೆಯವರು ಸೇರಿದಂತೆ ಒಟ್ಟು 50 ಪ್ರವಾಸಿಗರು ಸೇರಿದ್ದಾರೆ.

ಸುದ್ದಿಒನ್ ನೊಂದಿಗೆ ಚಿತ್ರದುರ್ಗ ನಗರದ ವಿದ್ಯಾನಗರ ನಿವಾಸಿ ಜಿ.ಹೆಚ್. ರಾಮಾಂಜನೇಯ ಅವರು ಮಾತನಾಡಿ, ಪೆ. 28 ರ ರಾತ್ರಿ ನಮಗೆ ಇಲ್ಲಿಂದ ಬೆಂಗಳೂರಿಗೆ ವಿಮಾನ ನಿಗದಿಯಾಗಿತ್ತು. ಅಷ್ಟರಲ್ಲೇ ಇಲ್ಲಿನ ವಿಮಾನ ನಿಲ್ದಾಣ ಸಂಪೂರ್ಣವಾಗಿ ಸ್ಥಗಿತವಾಗಿ ನಾವೆಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದೇವೆ. ಬಳ್ಳಾರಿ ಶಾಸಕ ಭರತ್ ರೆಡ್ಡಿಯವರು ಕೂಡಾ ದುಬೈನಲ್ಲಿ ನಮ್ಮಂತೆಯೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಾಸಕ ಭರತ್ ರೆಡ್ಡಿ ಕಡೆಯವರು ನಾವಿರುವ ಹೋಟೆಲ್ ಗೆ ಇಂದು ಬೆಳಿಗ್ಗೆ ಬಂದು ನಮಗೆಲ್ಲಾ ಧೈರ್ಯ ತುಂಬಿ ಆತ್ಮವಿಶ್ವಾಸದ ಮಾತುಗಳನ್ನಾಡಿ ಮಧ್ಯಾನದವರೆಗೂ ಇದ್ದರು. ಪ್ರಸ್ತುತ ಇಲ್ಲಿ ಯಾವುದೇ ಆತಂಕವಿಲ್ಲ, ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ಈಗಾಗಲೇ ಶಾಸಕ ಭರತ್ ರೆಡ್ಡಿಯವರು ಮಾಜಿ ಸಚಿವ ನಾಗೇಂದ್ರ ಅವರಿಗೆ ಇಲ್ಲಿನ ಪರಿಸ್ಥಿತಿಯನ್ನು ತಿಳಿಸಿದ್ದಾರೆ. ನಾಗೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿ ನಮ್ಮನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆಸಿಕೊಳ್ಳುವುದಾಗಿ ತಿಳಿಸಿದ್ದಾರೆ ಎಂಬ ವಿಷಯವನ್ನು ನಮಗೆ ತಿಳಿಸಿದ್ದಾರೆ ಎಂದು ಹೇಳಿದರು.

ಬಳ್ಳಾರಿಯ ರೇಣುಕಾ ಪ್ರಸಾದ್ ಮಾತನಾಡಿ, ಪ್ರಸ್ತುತ ನಾವೆಲ್ಲರೂ ದುಬೈನ ಖಾಸಗಿ ಹೋಟೆಲ್ ಒಂದರಲ್ಲಿ ಸುರಕ್ಷಿತವಾಗಿ ಉಳಿದುಕೊಂಡಿದ್ದೇವೆ. ಸಿಲುಕಿರುವ ಪ್ರವಾಸಿಗರು ಕುಟುಂಬದ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಯಾವುದೇ ಆತಂಕ ಇಲ್ಲ, ನಾವು ಸುರಕ್ಷಿತವಾಗಿದ್ದೇವೆ ಎಂದು ಹೇಳಿದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ದಾವಣಗೆರೆಯ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ. ಮಧ್ಯಪ್ರಾಚ್ಯ ಯುದ್ಧದಿಂದಾಗಿ ದುಬೈನಲ್ಲಿ ಸಿಲುಕಿರುವ ಐವತ್ತು (50) ಭಾರತೀಯ ಪ್ರವಾಸಿಗರನ್ನು ಮರಳಿ ಕರೆತರಲು ವಿದೇಶಾಂಗ ಸಚಿವಾಲಯ ಮಧ್ಯಪ್ರವೇಶಿಸಿ ಸಹಾಯ ಮಾಡಬೇಕೆಂದು ವಿನಂತಿಸಿದ್ದಾರೆ.

ಇವರೆಲ್ಲರೂ 23-02-2026 ರಂದು ಬೆಂಗಳೂರಿನಿಂದ ಯುಎಇಗೆ ಪ್ರವಾಸಕ್ಕಾಗಿ ತೆರಳಿದ್ದರು ಮತ್ತು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಈಗ ದುಬೈನಲ್ಲಿ ಸಿಲುಕಿಕೊಂಡಿದ್ದಾರೆ. 28/02/2026 ರಂದು ರಾತ್ರಿ 21:30 ಕ್ಕೆ ನಿಗದಿಯಾಗಿದ್ದ ಅವರ ವಾಪಸಾತಿ ವಿಮಾನವನ್ನು ಕೊನೆಯ ಕ್ಷಣದಲ್ಲಿ ರದ್ದಾಗುದೆ. ಆದ್ದರಿಂದ ಅವರೆಲ್ಲರೂ ಈಗ ತೀವ್ರ ಸಂಕಷ್ಟದಲ್ಲಿದ್ದಾರೆ. ಪರಿಸ್ಥಿತಿಯ ತೀವ್ರತೆಯನ್ನು ಅರಿತುಕೊಂಡು, ಈ ತುರ್ತು ಸಮಯದಲ್ಲಿ ದಯವಿಟ್ಟು ಮಧ್ಯಪ್ರವೇಶಿಸಿ ಮತ್ತು ದುಬೈನಲ್ಲಿ ಸಿಲುಕಿರುವ ಪ್ರವಾಸಿಗರನ್ನು ಭಾರತಕ್ಕೆ ಸುರಕ್ಷಿತವಾಗಿ ಹಿಂದಿರುಗಿಸಲು ರಾಯಭಾರ ಕಚೇರಿಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಬೇಕೆಂದು ವಿನಂತಿಸಿದ್ದಾರೆ.

ತಮ್ಮ ಅಸಹಾಯಕ ಸ್ಥಿತಿಯ ಬಗ್ಗೆ ಮೊಬೈಲ್ ವಿಡಿಯೋ ಕಾಲ್ ಮಾಡಿರುವ ಪ್ರವಾಸಿಗರು, ಬಳ್ಳಾರಿ ಶಾಸಕರಾದ ಭರತ್ ರೆಡ್ಡಿ, ಬಿ. ಮಾಜಿ ಶಾಸಕ ನಾಗೇಂದ್ರ ಹಾಗೂ ದಾವಣಗೆರೆ ಜಿಲ್ಲಾಡಳಿತಕ್ಕೆ ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ. ವಿಮಾನ ನಿಲ್ದಾಣದೊಳಗೆ ನಮ್ಮನ್ನು ಬಿಡುತ್ತಿಲ್ಲ, ಹೊರಗೆ ಉಳಿಯಲು ಹಣವಿಲ್ಲ. ದಯವಿಟ್ಟು ನಮ್ಮನ್ನು ಭಾರತಕ್ಕೆ ಕರೆಸಿಕೊಳ್ಳಲು ವ್ಯವಸ್ಥೆ ಮಾಡಿ” ಎಂದು ಹಲವರು ಕಣ್ಣೀರಿಟ್ಟಿದ್ದಾರೆ.

ಈ 50 ಜನರ ತಂಡ ಫೆಬ್ರವರಿ 23ರಂದು ಬೆಂಗಳೂರಿನಿಂದ ದುಬೈ ಪ್ರವಾಸಕ್ಕೆ ತೆರಳಿತ್ತು. ಫೆಬ್ರವರಿ 28ರ ಶನಿವಾರ ರಾತ್ರಿ 9:30ಕ್ಕೆ ಇವರೆಲ್ಲರಿಗೂ ಮರಳಿ ಬರಲು ವಿಮಾನ ಬುಕ್ ಆಗಿತ್ತು. ಆದರೆ, ಇವರು ವಿಮಾನ ನಿಲ್ದಾಣಕ್ಕೆ ತಲುಪುವಷ್ಟರಲ್ಲಿ ಯುದ್ಧದ ತೀವ್ರತೆಯಿಂದಾಗಿ ಶಾರ್ಜಾ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿತ್ತು.

ಮಧ್ಯಪ್ರಾಚ್ಯದಾದ್ಯಂತದ ವಿಮಾನ ನಿಲ್ದಾಣಗಳು ಮುಂದಿನ ಸೂಚನೆ ಬರುವವರೆಗೂ ಎಲ್ಲಾ ವಿಮಾನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದ್ದು, ಅನೇಕರು ಸಿಲುಕಿಕೊಂಡಿದ್ದಾರೆ.

Share This Article
Enable Notifications OK No thanks